ಬಿಜೆಪಿ ಹುರಿಯಾಳು ಗಾಯತ್ರಿ ಭರ್ಜರಿ ರೋಡ್ ಶೋ

KannadaprabhaNewsNetwork |  
Published : Apr 20, 2024, 01:05 AM IST
ಬಿಜೆಪಿ | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದ ಶುಕ್ರವಾರ ತಮ್ಮ ಪಕ್ಷದ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಜೊತೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಸಹ ತಮ್ಮ ನಾಮಪತ್ರ ಸಲ್ಲಿಸುವ ಮೂಲಕ ತೀವ್ರ ಕುತೂಹಲಕ್ಕೆ ಕಾರಣರಾದರು.

- ಬಿಜೆಪಿ ದಂಡ ನಾಯಕ ಬಿ.ಎಸ್.ಯಡಿಯೂರಪ್ಪ ಸಾರಥ್ಯದಲ್ಲಿ ಘಟಾನುಘಟಿಗಳು ಸಾಥ್‌ - ಸಂಸದ ಜಿ.ಎಂ. ಸಿದ್ದೇಶ್ವರ ಕಡೇ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿ ಅಚ್ಚರಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದ ಶುಕ್ರವಾರ ತಮ್ಮ ಪಕ್ಷದ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಜೊತೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಸಹ ತಮ್ಮ ನಾಮಪತ್ರ ಸಲ್ಲಿಸುವ ಮೂಲಕ ತೀವ್ರ ಕುತೂಹಲಕ್ಕೆ ಕಾರಣರಾದರು.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಪಿ.ಜೆ. ಬಡಾವಣೆಯ ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಏಕಕಾಲಕ್ಕೆ ಮೂರೂ ಕಡೆಯಿಂದ ಬಿಜೆಪಿ ಹಾಗೂ ಮಿತ್ರಪಕ್ಷ ಜೆಡಿಎಸ್‌ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಯಿತು.

ಹಳೇ ಪಿ.ಬಿ. ರಸ್ತೆಯ ಹಳೇ ವಾಣಿ ಹೋಂಡಾ ಶೋ ರೂಂ ಬಳಿ ಸೇರಿದವು. ಅನಂತರ ಅಲ್ಲಿಂದ ಮುಖಂಡರು ವಾಹನಗಳಲ್ಲಿ ತೆರಳಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪಕ್ಷದ ಅಭ್ಯರ್ಥಿ ಸಂಸದ ಜಿ.ಎಂ. ಸಿದ್ದೇಶ್ವರ ಸಹ ನಾಮಪತ್ರ ಸಲ್ಲಿಸಿದರು.

ಹಳೇ ಭಾಗದ ದುಗ್ಗಮ್ಮ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಬೃಹತ್ ರೋಡ್ ಶೋಗೆ ಚಾಲನೆ ನೀಡಿದರು. ಇಲ್ಲಿಂದ ಎಸ್‌ಕೆಪಿ ರಸ್ತೆ, ಹಾಸಬಾವಿ ವೃತ್ತ, ರೈಲ್ವೆ ಕೆಳಸೇತುವೆ, ಹಳೇ ಬಸ್ಸು ನಿಲ್ದಾಣ, ಪಾಲಿಕೆ, ಅರುಣಾ ಚಿತ್ರ ಮಂದಿರದ ಬಳಿ ಬಿಜೆಪಿ ಲೋಕಸಭಾ ಕಾರ್ಯಾಲಯ ಬಳಿ ಮೆರ‍ವಣಿಗೆ ಮುಕ್ತಾಯವಾಯಿತು.

ಮತ್ತೊಂದು ಕಡೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ, ತುಮ್ಕೋಸ್ ಶಿವಕುಮಾರ, ಲೋಕಿಕೆರೆ ನಾಗರಾಜ ಇತರರು ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಎಚ್‌.ಕೆ.ಆರ್. ವೃತ್ತ, ಕೆಟಿಜೆ ನಗರ ಡಾಂಗೇ ಪಾರ್ಕ್ ಮಾರ್ಗವಾಗಿ ನಿಟುವಳ್ಳಿ ರಸ್ತೆ, ಜಯದೇವ ವೃತ್ತ, ಕುವೆಂಪು ರಸ್ತೆ, ಗಾಂಧಿ ವೃತ್ತ, ಹಳೇ ಪಿ.ಬಿ. ರಸ್ತೆ ಮೂಲಕ ಸಾಗಿ ವಾಣಿ ಹೊಂಡಾ ಶೋ ರೂಂ ಬಳಿ ರೋಡ್ ಶೋ ಮುಕ್ತಾಯವಾಯಿತು.

ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತದಲ್ಲಿ ಶ್ರೀ ವರಸಿದ್ಧಿ ವಿನಾಯಕನಿಗೆ ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ, ಜೆಡಿಎಸ್ ಮುಖಂಡರಾದ ಎಚ್.ಎಸ್.ಶಿವಶಂಕರ, ಬಿ.ಚಿದಾನಂದಪ್ಪ, ಗಣೇಶ ಟಿ.ದಾಸಕರಿಯಪ್ಪ, ಬಾತಿ ಶಂಕರ ಇತರರು ಪೂಜೆ ಸಲ್ಲಿಸಿದ ಶುರುವಾದ ರೋಡ್ ಶೋ ಪಿ.ಜೆ. ಬಡಾವಣೆ 4ನೇ ಮುಖ್ಯರಸ್ತೆ ಮಾರ್ಗವಾಗಿ ಚೇತನ ಹೊಟೆಲ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಅಶೋಕ ರಸ್ತೆ, ಗಾಂಧಿ ವೃತ್ತ, ಪಾಲಿಕೆ ಮುಂಭಾಗದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಅರುಣಾ ಚಿತ್ರ ಮಂದಿರ ಸಮೀಪದ ವಾಣಿ ಹೊಂಡಾ ಶೋ ರೂಂ ಬಳಿ ಬಿಜೆಪಿ ಪ್ರಚಾರ ಕಾರ್ಯಾಲಯದ ಬಳಿ ರೋಡ್ ಶೋ ಮುಕ್ತಾಯವಾಯಿತು. ಮೂರೂ ಮೆರವಣಿಗೆಯಲ್ಲಿದ್ದ ಪ್ರಮುಖ ಮುಖಂಡರು ವಾಹನಗಳಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿದರು.

ರೋಡ್ ಶೋಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಜನಾರ್ದನ ರೆಡ್ಡಿ, ಜಿ.ಸಿ.ಮಾಧುಸ್ವಾಮಿ, ಮುರುಗೇಶ ನಿರಾಣಿ, ಬಿ.ಎ.ಬಸವರಾಜ ಭೈರತಿ, ಎಂ.ಪಿ.ರೇಣುಕಾಚಾರ್ಯ, ಜಿ.ಎಂ.ಲಿಂಗರಾಜ, ವಿಪ ಮುಖ್ಯ ಸಚೇತಕ ಎನ್.ರವಿಕುಮಾರ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಟಿ.ಶ್ರೀನಿವಾಸ ದಾಸಕರಿಯಪ್ಪ, ಪ್ರೊ.ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವ್, ಜಿ..ಎಸ್. ಅನಿತಕುಮಾರ, ಎನ್.ರಾಜಶೇಖರ ನಾಗಪ್ಪ, ಚಂದ್ರಶೇಖರ ಪೂಜಾರ, ಎಸ್.ಎಂ.ವೀರೇಶ ಹನಗವಾಡಿ, ರಾಜನಹಳ್ಳಿ ಶಿವಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಚಿತ್ರನಟಿ ಶೃತಿ, ನಟ ಚಂದನ್ ಶೆಟ್ಟಿ, ಜಿ.ಎಸ್. ಅಶ್ವಿನಿ, ಸುಧಾ ಜಯರುದ್ರೇಶ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಜಿ.ಎಲ್.ರಾಜೀವ್, ಐರಣಿ ಅಣ್ಣೇಶ, ಕಡ್ಲೇಬಾಳು ಧನಂಜಯ, ಅನಿಲಕುಮಾರ ನಾಯ್ಕ, ಶಿವನಗೌಡ, ಶಂಕರಗೌಡ ಬಿರಾದಾರ, ಸೋಗಿ ಗುರು, ಟಿಂಕರ ಮಂಜಣ್ಣ, ಸೇರಿದಂತೆ ಇತರರು ಇದ್ದರು.

ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ರೋಡ್ ಶೋನಲ್ಲಿದ್ದರು. "ದೇಶಕ್ಕೆ ಮೋದಿ, ದಾವಣಗೆರೆಗೆ ಗಾಯತ್ರಕ್ಕ ", "ಅಲ್ಲಿ ನೋಡು, ಇಲ್ಲಿ ನೋಡು, ಗಾಯತ್ರಿ ಅಕ್ಕನ ಗೆಲ್ಲಿಸಿ ನೋಡು " ಎಂಬುದೂ ಸೇರಿದಂತೆ ಹಲವಾರು ಘೋಷಣೆ ಮೊಳಗಿದವು. ನರೇಂದ್ರ ಮೋದಿ, ಯಡಿಯೂರಪ್ಪ, ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ ಭಾವಚಿತ್ರಗಳು ದಾರಿಯುದ್ದಕ್ಕೂ ರಾರಾಜಿಸಿದವು. ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು.

- - - ಕೋಟ್‌ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಮಾಡಿ, ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ್ದೇನೆ. ಮತದಾರರು ಯಾವಾಗ ಮೇ 7ನೇ ತಾರೀಖು ಬರುತ್ತದೋ, ಯಾವಾಗ ಕಮಲದ ಗುರುತಿಗೆ ಮತ ಹಾಕುತ್ತೇವೋ ಎಂಬುದಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಮತದಾರರು ಭಾರೀ ಮುನ್ನಡೆಯೊಂದಿಗೆ ಗೆಲ್ಲಿಸಿ, ಸಂಸದೆಯಾಗಿ ದೆಹಲಿಗೆ ಕಳಿಸುತ್ತಾರೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ಸಾಕ್ಷಿಯಾಗುತ್ತಾರೆಂಬ ವಿಶ್ವಾಸವಿದೆ

- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ, ದಾವಣಗೆರೆ ಕ್ಷೇತ್ರ

- - - -(ಫೋಟೋ ಬರಲಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ
ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ