ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ 836 ಕೋಟಿ ರು. ಅನುದಾನ ಸಿಕ್ಕಿತ್ತು. ಆದರೆ ಮೋದಿ ಸರ್ಕಾರ 6500 ಕೋಟಿ ರು. ಅನುದಾನ ನೀಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಮೋಸವಾಗಿದೆ ಎಂದು ಕಾಂಗ್ರೆಸ್ ಸುಳ್ಳೇ ಹೇಳುತ್ತಿದೆ. ಈ ಅನುದಾನ ಸಂವಿಧಾನದ 280ನೇ ವಿಧಿಯ ಪ್ರಕಾರ ಹಂಚಿಕೆಯಾಗುತ್ತದೆ. ಅದರಂತೆ ರಾಜ್ಯಕ್ಕೆ 6500 ಕೋಟಿ ರು. ಅನುದಾನ ಹಂಚಿಕೆಯಾಗಿದೆ. ಕಾಂಗ್ರೆಸ್ ತನ್ನ ಸುಳ್ಳಿಗೆ ವಿವರಣೆ ನೀಡಬೇಕು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.
ಅವರು ಶುಕ್ರವಾರ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ನಡೆದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ ಅತೀ ಹೆಚ್ಚು 836 ಕೋಟಿ ರು. ಮಾತ್ರ ಅನುದಾನ ಸಿಕ್ಕಿತ್ತು. ಆದರೆ ಮೋದಿ ಸರ್ಕಾರ ಶೇ 600 ಪಟ್ಟು ಹೆಚ್ಚು 6500 ಕೋಟಿ ರು. ಅನುದಾನ ನೀಡಿದೆ. ಕರ್ನಾಟಕ ಇದುವರೆಗೆ ಕೇಂದ್ರದಿಂದ ಅತೀಹೆಚ್ಚು ಅನುದಾನ ಪಡೆದ ದಾಖಲೆ ಇದಾಗಿದೆ ಎಂದರು.
ಗ್ಯಾರಂಟಿ ಕಿಸೆಯಿಂದ ಕೊಡುತ್ತಿಲ್ಲ
ಮಾತೆರೆಗ್ಲಾ ಎನ್ನ ನಮಸ್ಕಾರ ಎಂದು ತುಳುವಿನಲ್ಲಿ ಭಾಷಣ ಆರಂಭಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಡುತ್ತಿರುವುದು ಅವರ ಕಿಸೆಯ ಹಣದಿಂದಲ್ಲ, ಅದು ಜನರದ್ದೇ ಹಣ. ಬೇಕಾಬಿಟ್ಟಿ ಉಚಿತ ಯೋಜನೆಗಳನ್ನು ನೀಡಿ ಈಗ ಬರ ಪರಿಹಾರಕ್ಕೆ ನೀಡುವುದಕ್ಕೆ ಸರ್ಕಾರದ ಬಳಿ ಹಣ ಇಲ್ಲ, ಕೇಂದ್ರ ಸರ್ಕಾರ ನೀಡುತ್ತಿಲ್ಲ ಅಂತಿದ್ದಾರೆ. ಅಂತಹ ಗ್ಯಾರಂಟಿಗಳಿಗೆ ಮಹಿಳೆಯರು ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.
ಇದಕ್ಕೆ ಮೊದಲು ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ಶ್ಯಾಮಲಾ ಕುಂದರ್, ದಿನಕರ ಶೆಟ್ಟಿ ಹೆರ್ಗ, ಸುಪ್ರಸಾದ್ ಶೆಟ್ಟಿ, ಕಿರಣ್ ಕುಮಾರ್ ಬೈಲೂರು, ಶೀಲಾ ಶೆಟ್ಟಿ ಮಾತನಾಡಿದರು. ಪ್ರಮುಖರಾದ ವೀಣಾ ಎಸ್.ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ನಳಿನಿ ರಾವ್ ವೇದಿಕೆಯಲ್ಲಿದ್ದರು. ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಸ್ವಾಗತಿಸಿದರು, ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.