ಸಮಾನತೆ ಬದುಕಿಗೆ ಬಸವ ಸಂಸ್ಕೃತಿ ನೆರವು

KannadaprabhaNewsNetwork |  
Published : Aug 26, 2025, 02:00 AM IST
೨೫ಬಿಎಸ್ವಿ೦೧- ಬಸವನಬಾಗೇವಾಡಿಯ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರವಚನ ಮಂಗಲ ಮಹೋತ್ಸವದ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ೧೨ ನೇ ಶತಮಾನದ ಬಸವ ಸಂಸ್ಕೃತಿ ಅನನ್ಯವಾಗಿದೆ. ಒಂಭೈನೂರು ವರ್ಷಗಳಾದರೂ ಬಸವ ಸಂಸ್ಕೃತಿ ನಾಡಿನಲ್ಲಿ ಎಲ್ಲರೂ ಸಾಮರಸ್ಯ, ಸಮಾನತೆಯಿಂದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

೧೨ ನೇ ಶತಮಾನದ ಬಸವ ಸಂಸ್ಕೃತಿ ಅನನ್ಯವಾಗಿದೆ. ಒಂಭೈನೂರು ವರ್ಷಗಳಾದರೂ ಬಸವ ಸಂಸ್ಕೃತಿ ನಾಡಿನಲ್ಲಿ ಎಲ್ಲರೂ ಸಾಮರಸ್ಯ, ಸಮಾನತೆಯಿಂದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಸಂಜೆ ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಮೋಟಗಿಯ ಪ್ರಭು ಚನ್ನಬಸವ ಸ್ವಾಮೀಜಿಯವರ ಬಸವ ಸಂಸ್ಕೃತಿ ಪ್ರವಚನದ ಮಂಗಲ ಮಹೋತ್ಸವದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಜಗತ್ತಿಗೆ ಕಾಯಕ, ದಾಸೋಹ, ಸಮಾನತೆ ತತ್ವ ನೀಡುವ ಮೂಲಕ ಎಲ್ಲರೂ ಜಾತ್ಯತೀತವಾಗಿ ಸಾಮರಸ್ಯದಿಂದ ಜೀವನ ಸಾಗಿಸಬೇಕೆಂಬ ಸಂದೇಶ ಸಾರಿದ್ದಾರೆ. ಬಸವೇಶ್ವರರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿದ್ದಾರೆ. ನಾಡಿನಲ್ಲಿ ಬಸವ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಸೆ.೧ ರಿಂದ ಅ.೧ರವರೆಗೆ ನಾಡಿನ ಮಠಾಧಿಪತಿಗಳ ಒಕ್ಕೂಟದಿಂದ ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವದು ಸ್ವಾಗತಾರ್ಹ. ಸೆ.೧ರಂದು ಬಸವೇಶ್ವರ ಜನಿಸಿದ ಬಸವನಬಾಗೇವಾಡಿಯಿಂದ ಈ ಅಭಿಯಾನ ಚಾಲನೆಯಾಗಲಿದೆ. ಸೆ.೧ರಂದು ಬಸವನಬಾಗೇವಾಡಿಯಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವು ಐತಿಹಾಸಿಕವಾಗಲಿದೆ. ಈ ಸಂದರ್ಭದಲ್ಲಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮೋಟಗಿಯ ಚನ್ನಬಸವ ಸ್ವಾಮೀಜಿಯವರು ಬಸವ ಸಂಸ್ಕ್ರತಿಯ ಕುರಿತು ಪ್ರವಚನ ಹೇಳುವ ಮೂಲಕ ಬಸವ ಸಂಸ್ಕೃತಿಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಿದ್ದಾರೆ. ಇದನ್ನು ಕೇಳಿದವರೆಲ್ಲರೂ ಪುನೀತರಾಗಿದ್ದಾರೆ. ಶ್ರೀಗಳ ಸುದೈವದಿಂದ ಬಸವ ಸಂಸ್ಕೃತಿಯ ಅಭಿಯಾನ ಇದೇ ನೆಲದಿಂದ ಚಾಲನೆ ಸಿಗುತ್ತಿದೆ ಎಂದರು.ಕಾರ್ಯಕ್ರಮಕ್ಕೆ ಬರುವ ನಾಡಿನ ಅನೇಕ ಶ್ರೀಗಳ ವಾಸ್ತವ್ಯ, ಪ್ರಸಾದ ವ್ಯವಸ್ಥೆ ಇಲ್ಲಿನ ಜನರು ಅಚ್ಚುಕಟ್ಟಾಗಿ ಮಾಡಬೇಕಿದೆ. ಗೌರವಾತಿಥ್ಯ ಸರಿಯಾಗಿ ನಡೆಯುವಂತೆ ಎಲ್ಲರು ನೋಡಿಕೊಳ್ಳುವ ಜವಾಬ್ದಾರಿಯಿದೆ. ಈ ನಾಡಿನ ಬಸವ ಸಂಸ್ಕೃತಿಯನ್ನು ನಾಡಿಗೆ ತೋರಿಸುವ ಅವಕಾಶ ಸಿಕ್ಕಿದೆ. ಈ ಅಭಿಯಾನದ ಯಶಸ್ವಿಗೆ ನಾನು ನಿಮ್ಮೊಂದಿಗೆ ಸದಾ ಇರುವುದಾಗಿ ಹೇಳಿದರು.ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ೧೧೦೦ ಮಹಿಳೆಯರು ವಚನ ಗ್ರಂಥ ತಲೆ ಮೇಲೆ ಹೊತ್ತು, ೭೭೦ ಜನರು ಕೈಯಲ್ಲಿ ಬಸವ ಧ್ವಜ ಹಿಡಿದು ಬಸವ ಸಂಸ್ಕೃತಿ ಅಭಿಯಾನದ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದನ್ನು ನ ಭೂತೋ ನ ಭವಿಷ್ಯತೋ ಅನ್ನುವ ರೀತಿಯಲ್ಲಿ ಮಾಡೋಣವೆಂದರು. ಪ್ರವಚನಕಾರ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಸರ್ವರಿಗೂ ಸಮಬಾಳು, ಸಮಪಾಲು ಸಿಗಬೇಕೆಂಬ ಆಶಯ ಬಸವಣ್ಣನವರದು. ಅನೇಕ ಶರಣರು ರಚಿಸಿದ್ದ ವಚನ ಸಾಹಿತ್ಯ ಇಡೀ ಮನುಕುಲಕ್ಕೆ ಉಳಿಯಬೇಕೆಂಬ ಸದುದ್ದೇಶದಿಂದ ಅನೇಕ ಶರಣರು ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ಜೀವನ ತ್ಯಾಗ ಮಾಡಿದರು ಎಂದರು.

ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ಆಪ್ತ ಸಹಾಯಕ ರಾಜು ಇವಣಗಿ, ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಸಮಿತಿ ಕಾರ್ಯದರ್ಶಿ ಬಸವರಾಜ ಗೊಳಸಂಗಿ, ಸಮಿತಿಯ ಸದಸ್ಯರಾದ ಅನಿಲ ಅಗರವಾಲ, ಮಹಾದೇವಿ ಬಿರಾದಾರ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳಾದ ರಮೇಶ ಮಸಬಿನಾಳ, ಸಿದ್ರಾಮ ಪಾತ್ರೋಟಿ, ಮಹೇಶ ಹಿರೇಕುರಬರ, ಲಾಳೇಸಾ ಕೊರಬು, ನಂದೀಶ ಪಾಟೀಲ, ಮಂಜು ಜಾಲಗೇರಿ ಇತರರು ಇದ್ದರು. ಶಂಕರಗೌಡ ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಂ.ಬಿ.ತೋಟದ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಎಂ.ಜಿ.ಆದಿಗೊಂಡ ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರವಚನಕಾರ ಪ್ರಭು ಚನ್ನಬಸವ ಸ್ವಾಮೀಜಿ ಅವರನ್ನು ಸೇರಿದಂತೆ ಜಾತ್ರೆಗೆ, ಪ್ರವಚನ ಕಾರ್ಯಕ್ರಮಕ್ಕೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ