ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಜೀವನದ ನಿಜವಾದ ಉದ್ದೇಶವನ್ನು ಅರಿತು ಸಮಾಜ ಸೇವೆಗೆ ಮುಂದಾಗಬೇಕು ಎಂದು ಒನ್ ವರ್ಲ್ಡ್, ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಮಧುಸೂದನ್ ಸಾಯಿ ಹೇಳಿದರು.

ನಗರದ ಲವ್ ಡೇಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಬುಧವಾರ ಎಸ್‌ಬಿಜಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಆಯೋಜಿಸಿದ್ದ ವಿಶೇಷ ಆಧ್ಯಾತ್ಮಿಕ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮತನವನ್ನು ಉಳಿಸಿಕೊಂಡು, ತಮ್ಮ ವೃತ್ತಿ ಹಾಗೂ ಕಾರ್ಯಕ್ಷೇತ್ರದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು ಎಂದರು.

ಪ್ರತಿಯೊಬ್ಬರೂ ತಾವು ಏಕೆ ಜನಿಸಿದ್ದೇವೆ, ತಮ್ಮ ಬದುಕಿನ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಶಿಕ್ಷಣವು ಕೇವಲ ಉದ್ಯೋಗ ಅಥವಾ ವೈಯಕ್ತಿಕ ಸಾಧನೆಗೆ ಸೀಮಿತವಾಗಬಾರದು. ಪಡೆದ ಜ್ಞಾನ ಮತ್ತು ಸಾಮರ್ಥ್ಯ ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದರು.ವೈಯಕ್ತಿಕ ಯಶಸ್ಸಿನ ಬೆನ್ನಟ್ಟುವುದಷ್ಟೇ ಬದುಕಿನ ಗುರಿಯಾಗಬಾರದು. ಉದ್ದೇಶಪೂರ್ಣ ಜೀವನ ನಡೆಸಿ, ಸಮಾಜ ಮತ್ತು ಮಾನವಕುಲಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದರಲ್ಲಿಯೇ ಬದುಕಿನ ಸಾರ್ಥಕತೆ ಅಡಗಿದೆ. ಆತ್ಮಜ್ಞಾನ, ಜೀವನದ ಉದ್ದೇಶ ಮತ್ತು ಸೇವೆಯ ಮಹತ್ವದ ಕುರಿತು ನೀಡಿದರು. ಸಮಾಜ ಹಾಗೂ ವಿಶಾಲ ಮಾನವ ಕುಟುಂಬದತ್ತ ತಮಗಿರುವ ಜವಾಬ್ದಾರಿಗಳನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಈ ಸಂವಾದ ಅವಕಾಶ ಕಲ್ಪಿಸಿತು. ವಿನಾಯಕ ಮೋರೆ ಹಾಗೂ ಲವ್ ಡೇಲ್ ಶಾಲೆಯ ಗಾಯನ ತಂಡದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸದ್ಗುರು ಮಧುಸೂದನ್ ಸಾಯಿ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಸ್‌ಬಿಜಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ರಾಜ ಘಾಟಗೆ ಸ್ವಾಗತಿಸಿ ಮಾತನಾಡಿ, ವ್ಯಕ್ತಿಯ ಸಾಧನೆ ಮತ್ತು ಯಶಸ್ಸು ಸಮಾಜದ ವಿಶಾಲ ಹಿತಕ್ಕೆ ಬಳಕೆಯಾದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ. ಯಶಸ್ಸು ಎಂದರೇ ಅದನ್ನು ಒಬ್ಬರೇ ಅನುಭವಿಸುವುದಲ್ಲ. ಅದನ್ನು ಸಮಾಜಕ್ಕೆ ನೀಡುವುದರಲ್ಲಿಯೇ ನಿಜವಾದ ಯಶಸ್ಸಿದೆ ಎಂದರು.ಎಸ್‌ಬಿಜಿ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಶ್ಯಾಮ್ ಬಿ. ಘಾಟಗೆ ಅವರು ಸದ್ಗುರು ಮಧುಸೂದನ್ ಸಾಯಿ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು.ಕಾರ್ಯಕ್ರಮದಲ್ಲಿ ಬೆಳಗಾವಿ ಭಾಗದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು, ಭಕ್ತರು ಹಾಗೂ ಉದ್ಯಮ ಮತ್ತು ವ್ಯಾಪಾರ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಎಸ್‌ಬಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಮಿತ ಘಾಟಗೆ, ವಿನಯ ತುಬಾಕಿ, ಪ್ರೇಮಾ ಘಾಟಗೆ, ಸಿ.ಎನ್.ನಾಯ್ಕರ್, ಲವ್ ಡೇಲ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ಲಕ್ಷ್ಮಿ ಇಂಚಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.