ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯಗಳು ಕೇವಲ ಗ್ರಂಥಾಲಯಗಳಾಗಿರದೇ ಜ್ಞಾನ ವೃದ್ಧಿ ಕೇಂದ್ರಗಳಾಗಿವೆ ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಹಾಗೂ ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯಗಳು ಕೇವಲ ಗ್ರಂಥಾಲಯಗಳಾಗಿರದೇ ಜ್ಞಾನ ವೃದ್ಧಿ ಕೇಂದ್ರಗಳಾಗಿವೆ ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಹಾಗೂ ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಹೇಳಿದರು.ನಗರದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ.ವಿ.ರಾಮನ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಬೆಳಗಾವಿ ಜಿಲ್ಲಾ ಘಟಕ, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಂಥಪಾಲಕರು ಗ್ರಂಥಾಲಯದಲ್ಲಿ ಶಿಸ್ತು, ಸಂಯಮ ಹಾಗೂ ಶಾಂತಿ ಕಾಪಾಡುವುದರೊಂದಿಗೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ಪರ್ಧಾತ್ಮಕ ಹಾಗೂ ಜ್ಞಾನವರ್ಧಕ ಕೃತಿಗಳು ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಕರೆ ನೀಡಿದರು.ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ. ಗ್ರಂಥಪಾಲಕರು ದೇವರಂತೆ ಸೇವೆ ಸಲ್ಲಿಸುವವರು. ಮೌಲಿಕ ಕೃತಿಗಳ ಅಧ್ಯಯನದಿಂದ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಗ್ರಂಥಾಲಯದಲ್ಲಿ ಕೇವಲ ಜ್ಞಾನ ಮಾತ್ರವಲ್ಲ, ಬದುಕನ್ನು ಕೂಡ ರೂಪಿಸಿಕೊಳ್ಳಬಹುದು ಎಂದರು.ಪುಸ್ತಕ ಓದುವುದರಿಂದ ವ್ಯಕ್ತಿಯಲ್ಲಿ ಜ್ಞಾನ, ಸಂಸ್ಕಾರ ಹಾಗೂ ಹೊಸ ಚಿಂತನೆಗಳು ಬೆಳೆಯುತ್ತವೆ. ಗ್ರಂಥಾಲಯ ಮತ್ತು ಗ್ರಂಥಪಾಲಕರು ಮಾನಸಿಕ ಔಷಧಿಯಂತೆ ಕಾರ್ಯನಿರ್ವಹಿಸುತ್ತಾರೆ. ಬೆಳಗಾವಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಪುಸ್ತಕ ಯಾತ್ರೆ ಹಾಗೂ ಪುಸ್ತಕ ಜಾತ್ರೆ ಆಯೋಜಿಸುವ ಅಗತ್ಯವಿದೆ ಎಂದು ತಿಳಿಸಿದರು.ವಿಧಾನಪರಿಷತ್ತಿನ ಮಾಜಿ ಮುಖ್ಯ ಸಚೇತಕ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಎಂ.ಕವಟಗಿಮಠ ಮಾತನಾಡಿ, ಅಭಿವೃದ್ಧಿ ಹೊಂದಿದ ಸಮಾಜ ನಿರ್ಮಾಣಕ್ಕೆ ಅಕ್ಷರ ಜ್ಞಾನ ಅತ್ಯಗತ್ಯ. ಸಮಾಜದ ಪ್ರಗತಿಯಲ್ಲಿ ಗ್ರಂಥಾಲಯ ಮತ್ತು ಗ್ರಂಥಪಾಲಕರ ಪಾತ್ರ ಮಹತ್ವದ್ದಾಗಿದೆ. ಗ್ರಂಥಾಲಯಗಳಿಗೆ ಈಗಿನ ವಿದ್ಯಾರ್ಥಿಗಳು ಹೆಚ್ಚು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ಗುಣಮಟ್ಟದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿದಿನ ಕನ್ನಡ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹಾಗೂ ಅನುಭವ ವೃದ್ಧಿಯಾಗುತ್ತದೆ. ಕಾಲೇಜಿನ ಹೃದಯಭಾಗದಂತಿರುವ ಗ್ರಂಥಾಲಯ ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಪ್ರಮುಖ ಕೇಂದ್ರವಾಗಿದೆ ಎಂದರು.ಕೋಲ್ಕತಾ ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾದ ಮಾಜಿ ಡೈರಕ್ಟರ್ ಜನರಲ್, ಗ್ರಂಥಾಲಯ ಇಲಾಖೆ ನಿವೃತ್ತ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರಕುಮಾರ ಆಶಯಭಾಷಣ ಮಾಡಿ, ಗ್ರಂಥಪಾಲಯದ ವೈಚಾರಿಕ ಪ್ರಜ್ಞೆಯೇ ಈಗ ಬದಲಾಗಿದೆ. ಅದರ ಮೂಲ ಉದ್ದೇಶವೊಂದೆಯಾದರೂ ಅದನ್ನು ಸದ್ಬಳಕೆ ಮಾಡುವುದು ಹೇಗೆ ಎಂಬುವುದನ್ನು ಓದುಗರಿಗೆ ಗ್ರಂಥಪಾಲಕರು ಅರ್ಥ ಮಾಡಿಸಬೇಕಿದೆ. ಅದಕ್ಕಾಗಿ ಓದುಗರಿಗಾಗಿಯೇ ಕೆಲವು ವಿಶೇಷ ಶಿಬಿರಗಳನ್ನು ಕೂಡ ಮಾಡಬೇಕಿದೆ ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಉಪಾಧ್ಯಕ್ಷ ಡಾ.ನಾಗಪ್ಪ ಬಕ್ಕಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯ ಬಳಸಿಕೊಂಡು ಹೊಸ ಕೃತಿಗಳ ಅಧ್ಯಯನದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ನಿರ್ದೇಶಕ ರಾಮಯ್ಯ, ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘದ ಕಾರ್ಯದರ್ಶಿ ಡಾ.ಶೇಖರ ಎಚ್.ಪಿ, ಡಾ.ಕಿರಣ ಸವನೂರ, ಕೃಷ್ಣಮೂರ್ತಿ ಎಂ.ಪಿ, ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಎಸ್.ಕವಳೇಕರ, ಗ್ರಂಥಪಾಲಕ ವಿನಾಯಕ ಸವಟಗಿ, ಗ್ರಂಥಪಾಲಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಓದು ಕರ್ನಾಟಕ ಜಾಥಾಕ್ಕೆ ಡಿಸಿ ಚಾಲನೆ:
ಓದು ಕರ್ನಾಟಕ ಜಾಥಾಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ ನೀಡಿದ್ದು, ನಗರ ಕೇಂದ್ರ ಗ್ರಂಥಾಲಯದಿಂದ ಆರಂಭಗೊಂಡ ಜಾಥಾ ರಾಜಾ ಲಖಮಗೌಡ ಮಹಾವಿದ್ಯಾಲಯದವರೆಗೆ ಜರುಗಿದ್ದು, ಓದುವ ಹವ್ಯಾಸ ಮತ್ತು ನಿರಂತರ ಕಲಿಕೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.ಕರ್ನಾಟಕ ಗ್ರಂಥಾಲಯ ರತ್ನ ಪ್ರಶಸ್ತಿ ಪ್ರದಾನ:ಕಾರ್ಯಕ್ರಮದಲ್ಲಿ ಗ್ರಂಥಾಲಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕಲಬುರಗಿ ವಿವಿಯ ಡಾ.ಸುರೇಶ ಜಂಗೆ, ಕುಮಾಟಾದ ಡಾ.ಶಿವಾನಂದ ಬುಳ್ಳಾ, ಬೆಳಗಾವಿ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ, ಬೆಂಗಳೂರಿನ ಗೊಥೆ ಸಂಸ್ಥೆಯ ಗ್ರಂಥಪಾಲಕ ಶೇಷಗಿರಿ ಕುಲಕರ್ಣಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ಗ್ರಂಥಾಲಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗ್ರಂಥಪಾಲಕರು ಗ್ರಂಥಾಲಯದಲ್ಲಿ ಶಿಸ್ತು, ಸಂಯಮ ಹಾಗೂ ಶಾಂತಿ ಕಾಪಾಡುವುದರೊಂದಿಗೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ಪರ್ಧಾತ್ಮಕ ಹಾಗೂ ಜ್ಞಾನವರ್ಧಕ ಕೃತಿಗಳು ಲಭ್ಯವಾಗುವಂತೆ ಕ್ರಮವಹಿಸಬೇಕು.-ಡಾ.ಪಿ.ವಿ.ಕೊಣ್ಣೂರ,
ಎಲ್ಐಎಸ್ ಅಕಾಡೆಮಿ ಅಧ್ಯಕ್ಷರು.ಗ್ರಂಥಪಾಲಯದ ವೈಚಾರಿಕ ಪ್ರಜ್ಞೆಯೇ ಈಗ ಬದಲಾಗಿದೆ. ಅದರ ಮೂಲ ಉದ್ದೇಶವೊಂದೆಯಾದರೂ ಅದನ್ನು ಸದ್ಬಳಕೆ ಮಾಡುವುದು ಹೇಗೆ ಎಂಬುವುದನ್ನು ಓದುಗರಿಗೆ ಗ್ರಂಥಪಾಲಕರು ಅರ್ಥ ಮಾಡಿಸಬೇಕಿದೆ. ಅದಕ್ಕಾಗಿ ಓದುಗರಿಗಾಗಿಯೇ ಕೆಲವು ವಿಶೇಷ ಶಿಬಿರಗಳನ್ನು ಕೂಡ ಮಾಡಬೇಕಿದೆ.-ಡಾ.ಪಿ.ವೈ.ರಾಜೇಂದ್ರಕುಮಾರ, ಕೋಲ್ಕತಾ ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾದ ಮಾಜಿ ಡೈರಕ್ಟರ್ ಜನರಲ್, ಗ್ರಂಥಾಲಯ ಇಲಾಖೆ ನಿವೃತ್ತ ನಿರ್ದೇಶಕರು.