ಬಸವಸಾಗರ 42 ಕ್ಯೂಸೆಕ್‌ ನೀರು ನದಿಗೆ: ಜುಲೈ 1 ರಂದು ಐಸಿಸಿ ಸಭೆ

KannadaprabhaNewsNetwork | Published : Jun 23, 2025 12:33 AM

Basava Sagar releases 42 cusecs of water to the river: ICC meeting on July

-ಜಲಾಶಯ ಹಾಗೂ ಎಂಪಿಸಿಎಲ್ ವಿದ್ಯುತ್ ಸ್ಥಾವರದಿಂದ ಕೃಷ್ಣಾ ನದಿಗೆ ನೀರು

-ತಗ್ಗಿದ ಒಳಹರಿವು, ನದಿಗೆ ಬಿಡುವ ನೀರಿನ ಪ್ರಮಾಣ ಸದ್ಯ 42 ಸಾವಿರ ಕ್ಯೂಸೆಕ್

----

ಕನ್ನಡಪ್ರಭ ವಾರ್ತೆ ಕೊಡೇಕಲ್

ಕಳೆದೊಂದು ವಾರದಿಂದ ಬಸವಸಾಗರ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವಿನ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ನದಿಗೆ ಬಿಡುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಭಾನುವಾರ ಜಲಾಶಯದಿಂದ 42 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಪೂರ್ವ ಮುಂಗಾರು, ಹಾಗೂ ಕೃಷ್ಣಾ ಜಲಾನಯದ ಪ್ರದೇಶದಲ್ಲಿ ಮೇ ಅಂತ್ಯದಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಹಾಗೂ ಬಸವಸಾಗರ ಉಭಯ ಜಲಾಶಯಗಳು ಜೂನ್ ಮಧ್ಯಂತರದಲ್ಲೇ ಭರ್ತಿಯಾದ ಹಿನ್ನೆಲೆಯಲ್ಲಿ, ಜಲಾಶಯದ ಸಂಗ್ರಹಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಗಮನಾರ್ಹ ವಿಷಯವೆಂದರೆ ಪೂರ್ವ ಮುಂಗಾರಿನಲ್ಲಿ ಸುರಿದ ಮಳೆಯಿಂದಾಗಿ ಆಲಮಟ್ಟಿಯ ಆಣೆಕಟ್ಟಿನಿಂದ ನೀರು ಬಿಡದೇ ಇದ್ದರೂ ಸ್ಥಳೀಯವಾಗಿ ಸುರಿದ ಮಳೆಯಿಂದಲೇ ಬಸವಸಾಗರ ಜಲಾಶಯದಲ್ಲಿ 3 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಸವಸಾಗರ ಜಲಾಶಯದ ನೀರಿನ ಸಂಗ್ರಹಮಟ್ಟವನ್ನು ಕಾಯ್ದುಕೊಂಡು ನದಿ ಪಾತ್ರದಲ್ಲಿ ಪ್ರವಾಹ ಭೀತಿಯನ್ನು ತಪ್ಪಿಸುವ ಉದ್ದೇಶದಿಂದ ಜಲಾಶಯದ 14 ಮುಖ್ಯ ಕ್ರಸ್ಟ್ ಗೇಟುಗಳ ಮೂಲಕ 36820 ಕ್ಯೂಸೆಕ ಮತ್ತು ಎಂಪಿಸಿಎಲ್ ಮೂಲಕ 6 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟು 42820 ಕ್ಯುಸೆಕ್ ನೀರು ಕೃಷ್ಣೆಗೆ ಹರಿಬಿಡಲಾಗುತ್ತಿದೆ.

ಐಸಿಸಿ ಸಭೆ ನಿರ್ಣಯ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿಯನ್ನು(ಐಸಿಸಿ) ಜುಲೈ 1ರಂದು ಕರೆಯಲಾಗಿದ್ದು. ಬೆಂಗಳೂರಿನ ಕಚೇರಿಯಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಐಸಿಸಿ ಅಧ್ಯಕ್ಷರೂ ಆಗಿರುವ ಅಬಕಾರಿ ಮತ್ತು ಬಾಗಲಕೋಟೆ ಸಚಿವ ಆರ್.ಬಿ ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದ್ದು, ಕೃಷಿ ಚಟುವಟಿಕೆಗೆ ರೈತರಿಗೆ ನೀರು ಒದಗಿಸುವುದು ಇತರೆ ನೀರಾವರಿ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಜಲಾಶಯದ ಪ್ರಸ್ತುತ ಸ್ಥಿತಿ: ಬಸವಸಾಗರ ಜಲಾಶಯವು ಗರಿಷ್ಠ ಮಟ್ಟವಾದ 492.252 ಮೀ. ಇದ್ದು ಭಾನುವಾರ ಸಂಜೆ ವೇಳೆಗೆ 490.33 ಮೀ. ಗೆ ತಲುಪಿದೆ. ಗರಿಷ್ಟ 33.313 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ, ಇದೀಗ 25.66 ಟಿಎಂಸಿ ನೀರು ಸಂಗ್ರಹವಿದೆ, ಜಲಾಶಯಕ್ಕೆ ಕಳೆದ ಒಂದು ವಾರದಿಂದ ನಿರಂತರ ಒಳಹರಿವು ಬರುತ್ತಿದ್ದು ಏರಿಳಿತಗಳು ಕಾಣಿಸುತ್ತಿವೆ. ಮಳೆಗಾಲ ಈಗಷ್ಟೇ ಆರಂಭವಾಗಿರುವುದರಿಂದ ಜಲಾಶಯಕ್ಕೆ ಸಾಕಷ್ಟು ಪ್ರಮಾಣದ ಒಳಹರಿವು ಬರುವ ಸಾಧ್ಯತೆಗಳಿರುವುದರಿಂದ ಜಲಾಶಯಕ್ಕೆ ಯಾವುದೇ ಸಮಯದಲ್ಲಿ ಒಳಹರಿವಿನ ಪ್ರಮಾಣ ಅಧಿಕವಾದಲ್ಲಿ ನೀರಿನ ಪ್ರಮಾಣ ಅನುಗುಣವಾಗಿ ನದಿಗೆ ಹರಿಬಿಡುವ ನೀರು ಸಹ ಹೆಚ್ಚು/ಕಡಿಮೆ ಮಾಡಬಹುದಾಗಿದ್ದು, ನದಿ ತೀರದ ಗ್ರಾಮಸ್ಥರು ಜಾಗೃತರಾಗಿರಬೇಕೆಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

------

22ವೈಡಿಆರ್‌16: ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಭಾನುವಾರದಂದು ಜಲಾಶಯದ ಪ್ರಮುಖ 14 ಕ್ರಸ್ಟ್ ಗೇಟುಗಳಿಂದ 42,820 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.