ಸಂಗೀತ ಸುಧೆ ಇರುವವರೆಗೂ ಎಚ್ಎಸ್‌ವಿ ಶಾಶ್ವತ

KannadaprabhaNewsNetwork | Published : Jun 23, 2025 12:33 AM

ಸಂಗೀತ ಸುಧೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ತರೀಕೆರೆ: ಸಂಗೀತ ಸುಧೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಹಾಗೂ ಪ್ರಕೃತಿ ಶ್ರೀ ಕಲಾ ಕುಟೀರ, ದಾಸ ಸಾಹಿತ್ಯ ಪರಿಷತ್ತು ತರೀಕೆರೆ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶ್ರೀ ಸತ್ಯಪ್ರದ ಶ್ರೀ ವೆಂಕಟೇಶ್ವರ ದೇವಾಲಯ ಆವರಣದಲ್ಲಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಏರ್ಪಾಡಾಗಿದ್ದ ಸ್ಮರಣಾಂಜಲಿ, ಗೀತಗಾಯನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಭಾವಗೀತೆಗಳ ಸಾಹಿತ್ಯ ರಚನೆಯಲ್ಲಿ ಬಹಳ ದೊಡ್ಡ ಪ್ರತಿಭೆ, ಭಾವಗೀತೆಗಳಲ್ಲಿ ಅವರಿಗೆ ಅತ್ಯಂತ ದೊಡ್ಡ ಹೆಸರಿದೆ, ಸಂಗೀತ ಕಲೆ ಸಾಹಿತ್ಯ ಇವುಗಳು ಮನಸ್ಸನ್ನು ಅರಳಿಸುತ್ತದೆ, ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತದೆ, .ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ, ಕನ್ನಡ ಸಾಹಿತ್ಯ ಕೃತಿಗಳ ಮೂಲಕ ಅನನ್ಯವಾದ ಕೊಡುಗೆಯನ್ನು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ ಎಂದರು.

ಕೊಪ್ಪ ಹಿರಿಯ ಸಾಹಿತಿಗಳಾದ ಚಂದ್ರಕಲಾ ಅವರು ಕಾವ್ಯ ಪರಿಚಯ ನೀಡಿ ಮಾತನಾಡಿ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು, ಶಿಕ್ಷಕರಾಗಿ, ಮಕ್ಕಳ ಸಾಹಿತಿಗಳಾಗಿ ಹೆಚ್ಚು ಕೃತಿಗಳನ್ನು

ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಮಕ್ಕಳೂ ಸಹ ಅರ್ಥಮಾಡಿಕೊಳ್ಳುವಂತಹ ಕೃತಿಗಳನ್ನು ನೀಡಿದರು, ಅವರು ಚಿಂತನ ಶೀಲರು, ಮಾತೃಹೃದಯಿಗಳು, ಕಾವ್ಯದ ವಿವಿಧ ಪ್ರಕಾರಗಳಲ್ಲಿ ಜಾಗೃತಿ ಮೂಡಿಸಿದವರು ಎಂದು ತಿಳಿಸಿದರು.

ಬಾಲಕರಾಗಿದ್ದಾಗಲೇ ಅವರಿಗೆ ಓದುವ ಉತ್ಕಟಾಂಕ್ಷೆ ಇತ್ತು. ಲಯ ಇಲ್ಲದ ಕಾವ್ಯ ಇಲ್ಲ, ತಾಳ ಇಲ್ಲದ ಸಂಗೀತ ಇಲ್ಲ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಕೆ.ಎಸ್.ನಿಸಾರ್ ಅಹಮದ್ ಅವರ ಪರಮ ಶಿಷ್ಯರಾಗಿದ್ದರು, ಡಾ.ಎಚ್.ಎಸ್.ವೆಂಕಟೇಶಮೂರ್ತಿ ನಿಸರ್ಗದಿಂದ ಆಕರ್ಷಿತರಾಗಿದ್ದರು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತರೀಕೆರೆ ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಮಕ್ಕಳು ಮತ್ತು ಕಲಾವಿದರ ಕಂಠದಲ್ಲಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಜೀವಂತವಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಪಿಯುಸಿಯಲ್ಲಿ ರಾಜ್ಯ ಮಟ್ಟದಲ್ಲಿ 2ನೇ ರ್‍ಯಾಂಕ್‌ ಪಡೆದ ಪಟ್ಟಣದ ಬಿಂದು ನವಲೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಅವರಿಗೆ 10 ಸಾವಿರ ರು.ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿ ಅವರಿಗೆ ಶುಭಾಷಯ ಕೋರಿದರು.

ಪ್ರಕೃತಿ ಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಲತಾ ಗೋಪಾಲಕೃಷ್ಣ, ಶ್ರೀನಿವಾಸ ಸಂಗೀತ ಪಾಠಶಾಲೆ ಅಧ್ಯಕ್ಷೆ ವಿಜಯಪ್ರಕಾಶ್, ಕನ್ನಡ ಜಾನಪದ ಪರಿಷತ್ತು, ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ ಅವರು ಪುಷ್ಪನಮನ ಸಲ್ಲಿಸಿದರು.

ಚಿಕ್ಕಮಗಳೂರು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಪ್ರಕಾಶ್, ಕಡೂರು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್.ಪರಮೇಶ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಸಾಹಿತ್ಯ ಚಿಂತಕರಾದ ಕನ್ನಡ ಶ್ರೀ ಬಿ.ಎಸ್.ಭಗವಾನ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾರದ ಎನ್.ಮಂಜುನಾಥ್, ಸುನಿತಾ ಕಿರಣ್, ವಿಜಯಪ್ರಕಾಶ್, ಉಮಾ ಪ್ರಕಾಶ್ , ಟಿ.ಎನ್.ಗುರುಮೂರ್ತಿ ಅವರು ಗೀತೆಗಾಯನ ನೆರವೇರಿಸಿದರು.

ಸಾಹಿತಿ ಮನಸುಳಿ ಮೋಹನ್, ಡಾ.ನಾಗಜ್ಯೋತಿ ರಾಜಶೇಖರ್, ದಿವ್ಯ ಸಂಜಯ್, ಮಾಜಿ ಪುರಸಭಾ ಸದಸ್ಯರಾದ ಮಿಲ್ಟ್ರಿ ಶ್ರೀನಿವಾಸ್, ಟಿ.ಜಿ.ಸದಾನಂದ್, ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಿಂದು ನವಲೆ ಅವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಸನ್ಮಾನಿಸಲಾಯಿತು.

ಸ್ಥಳೀಯ ಕಲಾವಿದರುಗಳು ಮತ್ತು ಶ್ರೀನಿವಾಸ ಸಂಗೀತ ಪಾಠಶಾಲೆ, ಪ್ರಕೃತಿಶ್ರೀ ಕಲಾ ಕುಟೀರದ ಮಕ್ಕಳು, ದಾಸ ಸಾಹಿತ್ಯ ಪರಿಷತ್ತಿನ ಸದಸ್ಯರು, ಭಜನಾ ಮಂಡಳಿಯ ಸದಸ್ಯೆನಿಯರು ಅವರುಗಳಿಂದ ಗೀತಗಾಯನ ಸ್ಮರಣಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.