ಬಸವ ತತ್ವ ವಿಶ್ವಕ್ಕೇ ಬೆಳಕು ಕೊಡುವ ತತ್ವ: ಡಾ. ಗುರುಬಸವ ಸ್ವಾಮೀಜಿ

KannadaprabhaNewsNetwork | Published : Jun 1, 2025 2:19 AM
ಬಸವಣ್ಣನವರು ಸ್ಥಾಪಿಸಿದ ಧರ್ಮ ವೈಚಾರಿಕ ಧರ್ಮ.

ಸಂಡೂರು ತಾಲೂಕು ವೀರಶೈವ ಲಿಂಗಾಯತ ಸಂಘದಿಂದ ಬಸವೇಶ್ವರ ಜಯಂತಿ, ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಸಂಡೂರು

ಬಸವಣ್ಣನವರು ಸ್ಥಾಪಿಸಿದ ಧರ್ಮ ವೈಚಾರಿಕ ಧರ್ಮ. ಬಸವ ತತ್ವ ವಿಶ್ವಕ್ಕೇ ಬೆಳಕು ಕೊಡುವ ತತ್ವವಾಗಿದೆ ಎಂದು ಹರಪನಹಳ್ಳಿ ತಾಲೂಕಿನ ಕಮ್ಮತ್ತಹಳ್ಳಿ-ಪಾಂಡುಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಡೂರು ತಾಲೂಕು ವೀರಶೈವ ಲಿಂಗಾಯತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಬಸವೇಶ್ವರ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ರಕ್ತದಾನ ಶಿಬಿರದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು.

ಬಸವಣ್ಣನವರು ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆ ತಿರಸ್ಕರಿಸಿ, ಸಮಾನತೆ ಸಾರಿದರು. ಸಾಮಾಜಿಕ ಕ್ರಾಂತಿಯ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದರು. ಅವರೊಬ್ಬ ಭಾಷಾತಜ್ಞ. ಬಸವಾದಿ ಶರಣರ ೨೨ ಸಾವಿರ ವಚನಗಳು ಲಭ್ಯವಿವೆ. ಅವುಗಳನ್ನು ಅರ್ಥಮಾಡಿಕೊಂಡು ಪಾಲಿಸಿದರೆ, ಜೀವನ ಸಾರ್ಥಕವಾಗುತ್ತದೆ. ಲಿಂಗಾಯತ ಧರ್ಮದ ಭಾಷೆ ಕನ್ನಡ. ದಯವೇ ಧರ್ಮದ ಮೂಲ. ಬಸವಣ್ಣನವರು ಮನುಜ ಮತದ ಸ್ಥಾಪಕರು. ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ್ದು ಲಿಂಗಾಯತ ಧರ್ಮ. ಇದು ಕೃಷಿಕರ ಧರ್ಮ. ರೈತನೇ ದೇಶದ ನಿಜವಾದ ಯೋಗಿ. ಬಸವ ತತ್ವವನ್ನು ನಾವು ತಿಳಿದು, ಪಾಲಿಸಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಿಗರಿಂದಲೇ ಹುಟ್ಟಿದ ಧರ್ಮ ಬಸವ ಧರ್ಮ. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮೇಲೆ ವೀರಶೈವ ಲಿಂಗಾಯತ ಸಮಾಜಕ್ಕೆ ದೊಡ್ಡ ಶಕ್ತಿ ಬಂದಿದೆ. ಬಸವ ಜಯಂತಿಯನ್ನು ಆಡಂಬರದ ಜಯಂತಿಯಾಗಿಸದೆ, ಬಸವಾದಿ ಶರಣರ ತತ್ವಗಳನ್ನು, ವಚನಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ. ಬಸವಣ್ಣನವರ ವ್ಯಕ್ತಿತ್ವ, ಅವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಜನತೆಗೆ ಪರಿಚಯಿಸಬೇಕಿದೆ ಎಂದರು.

ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿ, ನಮ್ಮತನ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು, ಸಮಾಜದ ಅಭಿವೃದ್ಧಿಗೆ ಶ್ರಮಿಸಲು ವೀರಶೈವ ಲಿಂಗಾಯತ ಸಂಘವನ್ನು ತಾಲೂಕಿಗೆ ಸೀಮಿತವಾಗಿ ಕಟ್ಟಿಕೊಳ್ಳಲಾಗಿದೆ. ಸಂಘದ ಮೂಲಕ ನಾಲ್ಕನೇ ವರ್ಷದಲ್ಲಿ ಬಸವ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳು ಬಸವ ತತ್ವವನ್ನು ಅರಿಯಬೇಕು ಎಂದರು. ಮುಖಂಡ ಜಿ.ಟಿ. ಪಂಪಾಪತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿಕೆಜಿ ಕಂಪನಿಯ ಮಾಲೀಕ ಬಿ. ನಾಗನಗೌಡ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೮೦ಕ್ಕಿಂತ ಹೆಚ್ಚು ಅಂಕಗಳಿಸಿದ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ೯೧ ವಿದ್ಯಾರ್ಥಿಗಳು ಹಾಗೂ ಪಿಯುಸಿಯಲ್ಲಿ ಶೇ. ೮೫ಕ್ಕಿಂತ ಹೆಚ್ಚು ಅಂಕಗಳಿಸಿದ ೪೬ ವಿದ್ಯಾರ್ಥಿಗಳನ್ನು ಸನ್ಮಾನಿಸಿಸಲಾಯಿತು. ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಬಸವಣ್ಣನವರ ಪುತ್ಥಳಿಯನ್ನು ಭವ್ಯವಾಗಿ ಮೆರವಣಿಗೆ ಮಾಡಲಾಯಿತು.

ಎಸ್.ವಿ. ಹಿರೇಮಠ ಸ್ವಾಗತಿಸಿದರು. ಡಾ. ತಿಪ್ಪೇರುದ್ರ ಸಂಡೂರು ಕಾರ್ಯಕ್ರಮ ನಿರೂಪಿಸಿದರು. ಜಿ. ಏಕಾಂಬ್ರಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್. ಚನ್ನಬಸಪ್ಪ, ಸಿ.ಕೆ. ವಿಶ್ವನಾಥ, ಬಿ.ಕೆ. ಬಸವರಾಜ, ಗಡಂಬ್ಲಿ ಚನ್ನಬಸಪ್ಪ, ಚಿತ್ರಿಕಿ ಸತೀಶ್‌ಕುಮಾರ್, ಯು. ಎರಿಸ್ವಾಮಿ, ಎಂ. ಈಶಪ್ಪ, ಬಿ.ಜಿ. ಉಜ್ಜಿನಗೌಡ, ಜಿ. ವೀರೇಶ್, ಟಿ.ಜಿ. ಸುರೇಶ್‌ಗೌಡ, ಎಸ್‌ಟಿಡಿ ರುದ್ರಗೌಡ, ರಮೇಶ್ ಗಡಾದ, ಬಿ.ಎಂ. ಉಜ್ಜಿನಯ್ಯ, ಮೇಲುಸೀಮೆ ಶಂಕ್ರಪ್ಪ, ಕಿನ್ನೂರೇಶ್ವರ, ಎಂ. ಚರಂತಯ್ಯ, ಅಂಟೋನಿ, ವೆಂಕಟಸುಬ್ಬಯ್ಯ, ಜ್ಯೋತಿ ಗುಡೆಕೋಟೆ ನಾಗರಾಜ, ಎಸ್.ಡಿ. ಪ್ರೇಮಲೀಲಾ, ಜಿ. ಶಿವಲೀಲಾ ಸೇರಿದಂತೆ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ, ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ವೀರಶೈವ ತರುಣ ಸಂಘ, ಬಸವ ಬಳಗ, ವೀರಶೈವ ಲಿಂಗಾಯತ ಸಮಾಜದ ಸದಸ್ಯರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.