ಯತ್ನಾಳ್ ವಿರುದ್ಧ ಬಸವದಳ ಆಕ್ರೋಶ

KannadaprabhaNewsNetwork | Published : Dec 18, 2024 12:45 AM

ಚಿತ್ರದುರ್ಗ: ಮಹಾ ಮಾನವತಾ ವಾದಿ ಬಸವಣ್ಣನ ಲಿಂಗೈಕ್ಯಕ್ಕೆ ಸಂಬಂಧಿಸಿದಂತೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವಹೇಳನದ ಮಾತುಗಳನ್ನು ಆಡಿದ್ದಾರೆಂದು ಆರೋಪಿಸಿ ರಾಷ್ಟ್ರೀಯ ಬಸವದಳದ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ: ಮಹಾ ಮಾನವತಾ ವಾದಿ ಬಸವಣ್ಣನ ಲಿಂಗೈಕ್ಯಕ್ಕೆ ಸಂಬಂಧಿಸಿದಂತೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವಹೇಳನದ ಮಾತುಗಳನ್ನು ಆಡಿದ್ದಾರೆಂದು ಆರೋಪಿಸಿ ರಾಷ್ಟ್ರೀಯ ಬಸವದಳದ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಬಸವಮಂಟಪದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವಗುರು ಬಸವಣ್ಣ ಲಿಂಗೈಕ್ಯ ವಿಚಾರ ಪ್ರಸ್ತಾಪಿಸಿ, ಹೊಳೆಗೆ ಹಾರಿದ್ದಾರೆಂದು ಹಗುರವಾಗಿ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಇತಿಹಾಸ ಪ್ರಜ್ಞೆ ಇಲ್ಲ. ಅದೇ ಗತಿ ನಿಮಗೂ ಬರುತ್ತದೆಂದು ಒಂದು ಧರ್ಮವನ್ನು ಅವಹೇಳನ ಮಾಡಿದ್ದಾರೆ. ಹೀಗಾಗಿ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಾಲಿಗೆ ಮೇಲೆ ಹಿಡಿತ ಇರುವುದಿಲ್ಲ. ಯಾವುದೇ ವಿಷಯವಾದರೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜಕೀಯವಾಗಿ ಅವರು ಏನೇ ಮಾತನಾಡಿಕೊಳ್ಳಲಿ ನಮಗೆ ಸಂಬಂಧವಿಲ್ಲ. ಆದರೆ ಬಸವಣ್ಣನ ಬಗ್ಗೆ ಲಘುವಾಗಿ ಮಾತನಾಡುವುದು ಸಹಿಸಲು ಸಾಧ್ಯವಿಲ್ಲ. ಜನಪ್ರತಿನಿಧಿಯಾಗಿ ಅವರ ಹೇಳಿಕೆಗಳು ಕೋಮುಗಲಭೆಗೂ ಕಾರಣವಾಗುತ್ತಿದೆ. ಒಂದು ಸಮಾಜದ ಪ್ರತಿನಿಧಿ ಎಂಬಂತೆ ಮಾತನಾಡುವುದಲ್ಲದೆ, ಅದರ ಸ್ವಾಸ್ಥ್ಯಹಾಳು ಮಾಡುತ್ತಿದ್ದಾರೆ. ಧರ್ಮಪಿತ ಬಸವಣ್ಣನ ಅನುಯಾಯಿಗಳ ಮನನೋಯುವಂತೆ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.ಬಸವನಾಡನ್ನು ಪ್ರತಿನಿಧಿಸುತ್ತಿರುವ ಯತ್ನಾಳ್ ಬಸವಣ್ಣನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರಬೇಕಿತ್ತು. ಆದರೆ ತದ್ವಿರುದ್ಧ ನಡವಳಿಕೆಗಳಿಂದ ಸುದ್ದಿ ಮಾಡುತ್ತಿದ್ದಾರೆ. ಬಸವಣ್ಣನ ಜೀವನದ ಮೌಲ್ಯವಾಗಲಿ, ಅವರ ಬದುಕಿನ ತ್ಯಾಗದ ಅರಿವಿನ ಒಂದು ಅಂಶವನ್ನೂ ಸಹ ಅರ್ಥಮಾಡಿಕೊಳ್ಳದ ಯತ್ನಾಳ್‌ರಿಗೆ ಮಹಾತ್ಮರ, ದಾರ್ಶನಿಕರ, ಸಮಾಜ ಸುಧಾರಕರ ವಿಚಾರಧಾರೆಗಳು ತಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಬಸವಣ್ಣನ ವಿಚಾರಗಳು ಸಾರ್ವತ್ರಿಕವಾಗಿವೆ. ವಿಶ್ವದಾದ್ಯಂತ ಒಪ್ಪಿತವಾಗಿವೆ. 12ನೇ ಶತಮಾನದಲ್ಲಿ ಬಸವಣ್ಣನ ಅನುಯಾಯಿಗಳು, 1.96 ಲಕ್ಷ ಶರಣರು ಸೇರಿ ಅವರ ಸಮಕಾಲೀನರೂ ಯೋಗ ಬಲ್ಲವರಾಗಿದ್ದರು. ವೈಜ್ಞಾನಿಕ ತಳಹದಿಯ ಮೇಲೆ ಜಗತ್ತಿಗೆ ಸಂದೇಶ ಸಾರಿದರು. ಆ ಪರಿಕಲ್ಪನೆ ಇಲ್ಲದೆ, ಸಮಾಜದ ನೆಮ್ಮದಿಯನ್ನು ತಮ್ಮ ಸ್ವಾರ್ಥಕ್ಕಾಗಿ ಹಾಳು ಮಾಡುತ್ತಿರುವ ಯತ್ನಾಳ್ ಅವರ ಶಾಸಕ ಸ್ಥಾನ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಷ್ಟ್ರೀಯ ಬಸವದಳದ ದಾನೇಶ್ವರಿ ಮಾತಾಜಿ, ವೀರೇಶ್, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರೆಡ್ಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.