ಬಸವೇಶ್ವರ, ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಗಣ್ಯರು, ಅಧಿಕಾರಿಗಳು । ಜಿಲ್ಲಾಡಳಿತದಿಂದ ಬಸವ ಜಯಂತಿ ಸರಳ ಆಚರಣೆ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲಿ ಶುಕ್ರವಾರ ನಡೆದ ಶ್ರೀ ಬಸವೇಶ್ವರ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಲ್ಲಿ ಮಹಾನುಭಾವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳವಾಗಿ ಆಚರಿಸಲಾಯಿತು.
ಶ್ರೀ ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಮಾತನಾಡಿ, ೧೨ನೇ ಶತಮಾನದಲ್ಲೇ ಶ್ರೀ ಬಸವೇಶ್ವರರು ಇಡೀ ಜಗತ್ತಿಗೆ ಉತ್ತಮ ಸಂದೇಶವನ್ನು ಸಾರಿದ್ದರು. ಜಾತೀಯತೆ ಮತ್ತು ಅಂಧಕಾರದಲ್ಲಿ ಮುಳುಗಿದಂತಹ ಸಮಾಜವನ್ನು ಬೆಳಕಿನತ್ತ ಕೊಂಡೂಯ್ಯಲು ಹಾಗೂ ಮನುಷ್ಯ ಮನುಷ್ಯನನ್ನು ಗೌರವಿಸಬೇಕೇ ಹೊರತು ಭೇದಭಾವ ಮಾಡಿ ಜಾತೀಯತೆ ತೋರಬಾರದೆಂದು ಹೇಳಿ ಜನರಿಗೆ ಅರಿವು ಮೂಡಿಸಿದವರು. ಇಂದು ಪ್ರಪಂಚದ ಅನೇಕ ರಾಷ್ಟ್ರಗಳು ಬಸವಣ್ಣನವರ ಆದರ್ಶವನ್ನು ಪಾಲನೆ ಮಾಡಿಕೊಂಡು ಬರುತ್ತಿವೆ. ನಮ್ಮ ಭಾರತ ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆ ಇದ್ದರೂ ಕೂಡ ದೊಡ್ಡ ಸಂವಿಧಾನದ ಕಲ್ಪನೆಯಾಗಿ ಈ ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಹೆಚ್ಚು ಇದೆ. ಜನರಿಗೆ ಹೆಚ್ಚಿನ ಶಿಕ್ಷಣ ಇಲ್ಲದ ವೇಳೆ ವಚನಗಳ ಮೂಲಕ ಜಾತ್ಯಾತೀತವಾಗಿ ನಡೆದು ಇದ್ದಂತಹ ಕೀಳು ಭಾವನೆಯನ್ನು ಹೋಗಲಾಡಿಸಿ ನಾವೆಲ್ಲಾ ಒಂದೇ ಎನ್ನುವ ಮನೋಭಾವವನ್ನು ತಂದವರು ಬಸವಣ್ಣನವರು ಎಂದರು. ೧೨ನೇ ಶತಮಾನದಲ್ಲಿ ದೊಡ್ಡ ಅನುಭವ ಮಂಟಪವನ್ನು ಕಟ್ಟಿದವರು. ಅವರ ಆದರ್ಶವನ್ನು ನಾವು ನೀವು ಪಾಲಿಸಿ ಸದೃಢ ಸಮಾಜ ಕಟ್ಟೋಣ. ಬಸವಣ್ಣನವರ ತತ್ವ-ಸಿದ್ಧಾಂತವನ್ನು ಕೂಡ ಮನೆಯಲ್ಲಿ ತಿಳಿಸೋಣ ಎಂದು ಸಲಹೆ ನೀಡಿದರು.ಅಖಿಲ ಭಾರತ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಪೂಜೆ ಏರ್ಪಡಿಸಲಾಗಿದೆ. ನಾಡಿನಾದ್ಯಂತ ಶ್ರೀ ಬಸವೇಶ್ವರ ಜಯಂತಿಯನ್ನು ಶ್ರದ್ಧಾ- ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದ್ದು, ಎಲ್ಲಾ ಸಮಾಜ ಬಾಂಧವರು ಸೇರಿ ಬಸವ ಜಯಂತಿ ಆಚರಣೆಯನ್ನು ಸರಳವಾಗಿ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಂ. ಶಿವಣ್ಣ, ಉಪಾಧ್ಯಕ್ಷ ಭುವನಾಕ್ಷ, ಕಾರ್ಯದರ್ಶಿ ರುದ್ರಕುಮಾರ್, ಬಸವ ಕೇಂದ್ರದ ಯು.ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಸಹ ಕಾರ್ಯದರ್ಶಿ ಶ್ರೀನಿವಾಸ್, ವಕೀಲರಾದ ಸುನಿಲ್, ನಿಡುಗನಹಳ್ಳಿ ಸಿದ್ದಪ್ಪ, ವಿಜಯಕುಮಾರ್, ಸೋಮಶೇಖರ್, ಮಹೇಶ್ ಇತರರು ಉಪಸ್ಥಿತರಿದ್ದರು.