ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ೧೨ನೇ ಶತಮಾನದ ಪ್ರಮುಖ ವಚನಕಾರರು. ವಚನ ಸಾಹಿತ್ಯ ಮೌಲ್ಯವನ್ನು ಹೆಚ್ಚಿಸಿದವರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ ಎಂದು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿ ಜನಸಾಮಾನ್ಯರಿಗೆ ವಚನಾಮೃತವನ್ನು ಉಣಬಡಿಸಿದರು. ಅನುಭವ ಮಂಟದಲ್ಲಿ ಎಲ್ಲಾ ವರ್ಗದ ಜನರನ್ನೂ ಒಗ್ಗೂಡಿಸಿ ಸಾಮಾಜಿಕ, ಸಾಂಸ್ಕೃತಿಕ ಚಿಂತನೆ, ವಿಚಾರಧಾರೆಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾದರು. ಇದನ್ನು ಮನಗಂಡ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿ ಗೌರವ ಸಲ್ಲಿಸಿದೆ ಎಂದು ಅವರು ತಿಳಿಸಿದರು.ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನುಭವ ಮಂಟಪ ಸ್ಥಾಪಿಸಿ, ಎಲ್ಲರಿಗೂ ತಮ್ಮ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲು ಸಮಾನ ಅವಕಾಶಗಳನ್ನು ನೀಡಿದ ಬಸವಣ್ಣನವರ ಮೌಲ್ಯಯುತ ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಸಮಾಜದಲ್ಲಿ ಎಲ್ಲರೂ ಸುಖ, ಶಾಂತಿ, ನೆಮ್ಮದಿ ಬದುಕು ಸಾಗಿಸಲು ಬಸವಣ್ಣನವರ ವಚನಗಳ ಸಾರ-ಸಂದೇಶಗಳು ದಾರಿದೀಪವಾಗಿವೆ ಎಂದರು.
ದಯೆ ಇಲ್ಲದ ಧರ್ಮ ಯಾವುದು ಇಲ್ಲ, ಎಲ್ಲಾ ಧರ್ಮಗಳ ಸಾರವು ಒಂದೇ. ಮಾನವಕುಲದ ಒಳಿತಿನ ಪರಮ ಉದ್ದೇಶವಾಗಿದೆ. ಶಾಂತಿಪ್ರಿಯ ಭಾರತ ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಸೇರಿದಂತೆ ಎಲ್ಲಾ ದಾರ್ಶನಿಕರು, ಸಂತರು ತಮ್ಮ ಚಿಂತನೆಗಳನ್ನು ಬಿತ್ತಿಹೋಗಿದ್ದಾರೆ. ಅವರ ತತ್ವ, ಸಿದ್ಧಾಂತಗಳಿಂದಲೇ ಇಂದು ನಾವೆಲ್ಲರೂ ನೆಮ್ಮದಿಯುತ ಜೀವನ ನಡೆಸುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಬಸವಣ್ಣನ ಅನುಯಾಯಿ ಆಗಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ದಿನ ಬಸವ ಜಯಂತಿಯೇ ಆಗಿತ್ತು ಎಂದು ಅವರು ಹೇಳಿದರು.
ಹರವೇ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಸಂಸ್ಕೃತಿ ಚಿಂತಕರಾದ ಪೃಥ್ವಿರಾಜ್ ಹಾಲಹಳ್ಳಿ ಹಾಗೂ ಬಸವತತ್ವ ಪ್ರಚಾರಕರಾದ ಎಲ್. ಬಸಪ್ಪ ಬೊಮ್ಮಲಾಪುರ ಬಸವಣ್ಣ ಅವರು ಮುಖ್ಯ ಭಾಷಣ ಮಾಡಿ ಬಸವಣ್ಣನವರ ಚಿಂತನೆಗಳನ್ನು ಪ್ರಸ್ತುತಪಡಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ವೇದಿಕೆಯಲ್ಲಿ ಭಜನಾ ಕಲಾತಂಡಗಳಿಂದ ವಚನಗಾಯನ ಏರ್ಪಡಿಸಲಾಗಿತ್ತು.