ಸಂಡೂರು: ಬಯಲಾಟ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಸಂಸ್ಕೃತಿ ವಿಕೃತಿಯಾಗುತ್ತಿರುವ ಸಂದರ್ಭದಲ್ಲಿ ಬಯಲಾಟ, ಸಣ್ಣಾಟ, ಗೊಂದಲಿಗರ ಹಾಡು, ಲಂಬಾಣಿ ನೃತ್ಯ ಮೊದಲಾದ ಕಲೆಗಳು ಉಳಿದು ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿವೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಾಂತನಾಯ್ಕ ಅಭಿಪ್ರಾಯಪಟ್ಟರು.
ರಂಗಕರ್ಮಿ ರಾಜಪ್ಪ ದಳವಾಯಿ, ಬಳ್ಳಾರಿ ಜಿಲ್ಲೆಯ ಬಯಲಾಟಗಳು ವಿಶಿಷ್ಟವಾಗಿದ್ದು, ಮನರಂಜನೆಯ ಅಭಿವ್ಯಕ್ತಿಯ ಕಲೆಯಾಗಿದೆ. ನೋಡುಗರ ದೃಷ್ಟಿಯಿಂದ ಬಯಲಾಟಗಳು ಪರಿಷ್ಕರಣೆಯಾಗಬೇಕಾಗಿದೆ. ಯಕ್ಷಗಾನಕ್ಕೆ ಸಿಕ್ಕಷ್ಟು ಮಾನ್ಯತೆ ಹಾಗೂ ಪ್ರಚಾರ ಬಯಲಾಟಕ್ಕೆ ಸಿಕ್ಕಿಲ್ಲ. ಅದಕ್ಕೆ ಕಾರಣಗಳು ಹಲವಾರು ಇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಡೋಜ ವಿ.ಟಿ. ಕಾಳೆ, ಬಯಲಾಟಕ್ಕೆ ಮೂಡಲಪಾಯ ಎನ್ನುತ್ತಾರೆ. ಇಂತಹ ಬಯಲಾಟವನ್ನು ಸರಳೀಕೃತಗೊಳಿಸಿ ಪ್ರಯೋಗ ಮಾಡಿದರೆ, ಅದು ವಿಶ್ವವಿಖ್ಯಾತವಾಗುತ್ತದೆ ಎಂದು ಹೇಳಿದರು.ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ, ಡಾ. ತಿಪ್ಪೇರುದ್ರ, ಮುಖಂಡರಾದ ಹಗರಿ ಬಸವರಾಜಪ್ಪ, ಉಪ್ಪಾರಹಳ್ಳಿ ಕಿನ್ನೂರೇಶ್ವರ, ಮದ್ದಾನಿ ಕುಮಾರಸ್ವಾಮಿ, ಡಾ. ಮಲ್ಲಯ್ಯ ಸಂಡೂರು, ಡಾ. ಬಿ.ಎಂ. ಗುರುನಾಥ್, ಡಾ. ಅಣ್ಣಾಜಿ, ಕೃಷ್ಣಾರೆಡ್ಡಿ, ರಂಗ ನಿರ್ದೇಶಕ ಸಾಂಬಶಿವ ದಳವಾಯಿ, ಸಂಗೀತಗಾರರಾದ ಎಚ್. ತಿಪ್ಪೇಸ್ವಾಮಿ ಮುದ್ದಟನೂರು, ಎಚ್. ಕುಮಾರಸ್ವಾಮಿ, ತಾಯಪ್ಪ, ಮಲ್ಲಪ್ಪ ಶಿವಮ್ಮನವರ್ ಉಪಸ್ಥಿತರಿದ್ದರು.