ಶಿವಮೊಗ್ಗ: ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಸೋಂಕುಗಳು ಹರಡುವ ಕಾರಣ ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಡಿಎಚ್ಒ ಡಾ.ನಟರಾಜ್ ಹೇಳಿದರು.ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಝೋನೊಸಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಣಿಗಳಿಂದ ಹರಡುವ ಸೋಂಕುಗಳ ಬಗ್ಗೆ ಹೆಚ್ಚಿನ ಅರಿವು, ಜಾಗೃತಿ ಮತ್ತು ನಿಯಂತ್ರಣದ ಉದ್ದೇಶದಿಂದ ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ (ಮತ್ತು ಪ್ರಾಣಿಗಳಿಗೆ) ಸೋಂಕು ಹರಡುವ ರೋಗಗಳು. ಇವು ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಅಥವಾ ಫಂಗಸ್ ಕಾರಣದಿಂದ ಉಂಟಾಗುತ್ತವೆ. ನಾಯಿ, ಬೆಕ್ಕು, ಕರಡಿ ಇತರೆ ಪ್ರಾಣಿಗಳಿಂದ ರೇಬೀಸ್, ಹಂದಿಗಳಿಂದ ಸ್ವೈನ್ ಫ್ಲೂ, ಹಾಲು, ಮಾಂಸದಿಂದ ಬ್ರುಸೆಲ್ಲೋಸಿಸ್, ಹುಳುಗಳಿಂದ ಲೈಮ್ ರೋಗ, ಉಣ್ಣೆಗಳಿಂದ ಮಂಗನ ಕಾಯಿಲೆ, ಲೆಪ್ಟೊಸೈರಾ ಬ್ಯಾಕ್ಟಿರಿಯಾದಿಂದ ಇಲಿ ಜ್ವರ ಹೀಗೆ ಪ್ರಾಣಿಗಳಿಂದ ಹಲವಾರು ಸೋಂಕುಗಳು ಮನುಷ್ಯರಿಗೆ ಹರಡುತ್ತವೆ. ಆದ್ದರಿಂದ ಪ್ರಾಣಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಒಮ್ಮೆ ರೇಬಿಸ್ ಬಂದರೆ ಎಂತಹ ಬಲಿಷ್ಠರನ್ನೂ ಇದು ಬಲಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಾರದಂತೆ ಎಚ್ಚರದಿಂದ ಇರಬೇಕು ಎಂದರು.ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಪ್ರಾಣಿಗಳು ಅದರಲ್ಲೂ ಸಾಕು ಪ್ರಾಣಿಗಳ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯ. ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು. ಬೆಕ್ಕು ಪರಚಿರುವುದರಿಂದಲೂ ರೇಬಿಸ್ ಬಂದು ರೋಗಿ ಮೃತಪಟ್ಟಿರುವ ಪ್ರಕರಣಗಳು ಇವೆ. ಆದ್ದರಿಂದ ಸಾಕಷ್ಟು ಎಚ್ಚರಿಕೆ ಅಗತ್ಯವಿದೆ ಎಂದು ಹೇಳಿದರು.
ವಿಡಿಎಲ್ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ್, ಸಿಮ್ಸ್ನ ಡಾ.ಪ್ರವೀಣ್ ಭಟ್, ಡಾ.ಕವಿತಾ ರಾಣಿ, ಪಶು ವೈದ್ಯಾಧಿಕಾರಿ ಡಾ.ರೇಖಾ, ನರ್ಸಿಂಗ್ ಕಾಲೇಜಿನ ಮೇರಿ, ಶುಶ್ರೂಕಾಧೀಕ್ಷಕಿ ಎಲಿಜಬೆತ್, ಆರೋಗ್ಯ ಇಲಾಖೆಯ ದೊಡ್ಡವೀರಪ್ಪ ಮತ್ತಿತರರಿದ್ದರು.