ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಮುನ್ನ ಎಚ್ಚರ

KannadaprabhaNewsNetwork |  
Published : Aug 14, 2026, 01:45 AM IST
ಸಸಸ | Kannada Prabha

ಸಾರಾಂಶ

ಇದುವರೆಗೂ ನಡೆಯುತ್ತಿದ್ದ ನೇಮಕಾತಿಯ ವೇಳೆ ಮೀಸಲು ಕೋರಿ ಅಭ್ಯರ್ಥಿ ಸಲ್ಲಿಸಿದ ಅರ್ಜಿಯು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ವೇಳೆ ಮೀಸಲು ಪ್ರಮಾಣಪತ್ರ ಸಲ್ಲಿಕೆ ಮಾಡುತ್ತಿರಲಿಲ್ಲ

ಸೋಮರೆಡ್ಡಿ ಅಳವಂಡಿ ಕೊಪ್ಪಳ

ಶಿಕ್ಷಕರ ಹುದ್ದೆ ಸೇರಿದಂತೆ ಹತ್ತಾರು ಸಾವಿರ ವಿವಿಧ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆ ಹಲವಾರು ಪ್ರಶ್ನೆ ಎದುರಾಗುವಂತೆ ಮಾಡಿದೆ. ಅದರಲ್ಲೂ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದರೂ ಸಹ ಮೀಸಲಾತಿ ಪ್ರಮಾಣಪತ್ರ ಕೊಡುವುದು ಕಡ್ಡಾಯ. ಹಾಗೊಂದು ವೇಳೆ ಮೀಸಲು ಪ್ರಮಾಣಪತ್ರ ಕೊಡದೆ ಇದ್ದರೆ ಆಯ್ಕೆ ಪ್ರಕ್ರಿಯೆಯಿಂದಲೇ ದೂರ ಉಳಿಯುವ ಇಕ್ಕಟ್ಟು ಅಭ್ಯರ್ಥಿಗಳದ್ದು.

ಇದುವರೆಗೂ ನಡೆಯುತ್ತಿದ್ದ ನೇಮಕಾತಿಯ ವೇಳೆ ಮೀಸಲು ಕೋರಿ ಅಭ್ಯರ್ಥಿ ಸಲ್ಲಿಸಿದ ಅರ್ಜಿಯು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ವೇಳೆ ಮೀಸಲು ಪ್ರಮಾಣಪತ್ರ ಸಲ್ಲಿಕೆ ಮಾಡುತ್ತಿರಲಿಲ್ಲ, ಅಷ್ಟೇ ಅಲ್ಲ ಮೀಸಲು ಪ್ರಮಾಣ ಪತ್ರ ದೋಷ ಪೂರಿತವಾಗಿದ್ದರೆ ಆ ಅಭ್ಯರ್ಥಿ ಅರ್ಜಿ ಸಾಮಾನ್ಯ ವರ್ಗಕ್ಕೆ ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಅವಕಾಶ ಇರುತ್ತಿತ್ತು. ಆದರೆ ಈಗ ಶಿಕ್ಷಣ ಇಲಾಖೆ ಹೊರಡಿಸಿರುವ ಅರ್ಜಿಯಲ್ಲಿ ಇದಕ್ಕೆ ಅವಕಾಶ ಇಲ್ಲದೆ ಇರುವುದು ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ.

ಎಸ್ಸಿ, ಎಸ್ಟಿ, ಒಬಿಸಿ ಸೇರಿದಂತೆ ಕನ್ನಡ ಮಾಧ್ಯಮ ಗ್ರಾಮೀಣ ಸೇರಿದಂತೆ ಹತ್ತಾರು ಬಗೆಯ ಮೀಸಲು ಬಯಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನವೇ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ನೇಮಕಾತಿ ಪ್ರಕ್ರಿಯೆಯಿಂದಲೇ ದೂರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿವಾದಾತ್ಮಕ ಅಧಿಸೂಚನೆ ವಿಧಿಸಲಾಗಿದೆ. ಇದುವೇ ಈಗ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆತಂಕ ಪಡುವಂತಾಗಿದೆ.

ಏನಿದು ಸಮಸ್ಯೆ: ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ವಿಧಿಸಿರುವ ಷರತ್ತುಗಳಿಗೆ ಮೀಸಲಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಕಟ ತಂದಿರುವ ಸಾಧ್ಯತೆ ಎದುರಾಗಿದೆ. ಎಸ್ಸಿ, ಎಸ್ಟಿ ಒಬಿಸಿ ಕನ್ನಡ ಮಾಧ್ಯಮ, ಗ್ರಾಮೀಣ ಸೇರಿದಂತೆ ಯಾರೇ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸುವ ವೇಳೆ ಅರ್ಜಿ ಭರ್ತಿ ಮಾಡಿದ ಮೀಸಲು ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಹೀಗೆ ಸಲ್ಲಿಸಿದ ಮೀಸಲಾತಿ ಪ್ರಮಾಣ ಪತ್ರಗಳು ದೋಷದಿಂದ ತಿರಸ್ಕಾರವಾದರೆ ಅವರ ಇಡೀ ಅರ್ಜಿಯೇ ತಿರಸ್ಕಾರವಾದಂತಾಗುತ್ತದೆ. ಹೀಗಾಗಿ ಸಾಮಾನ್ಯ ವರ್ಗದಲ್ಲಿ ನೇಮಕವಾಗುವ ಅರ್ಹತೆ ಇದ್ದರೂ ಅವರ ನೇಮಕಾತಿ ರದ್ದಾಗುತ್ತದೆ. ಹೀಗೆ ಪ್ರತಿ ಮೀಸಲು ಕುರಿತ ವಿವರಣೆ ಕೆಳಗೆ ಈ ಷರತ್ತು ವಿಧಿಸಲಾಗಿದೆ.

ಹಾಗೊಂದು ವೇಳೆ ಒಬಿಸಿ ಅಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದರೂ ಸಹ ಒಬಿಸಿ ಪ್ರಮಾಣಪತ್ರದ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಸಿಂಧುತ್ವ ಪ್ರಮಾಣಪತ್ರ ಲಭ್ಯವಾಗದೆ ಇದ್ದರೆ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದರೂ ನೇಮಕಾತಿ ಪ್ರಕ್ರಿಯೆಯಿಂದ ಹೊರಗೆ ಉಳಿಯಬೇಕಾಗುತ್ತದೆ. ಹೀಗೆ ಗ್ರಾಮೀಣ, ಅಂಗವಿಕಲ ಸೇರಿದಂತೆ ಯಾವುದೇ ಮೀಸಲಾತಿ ಕೋರಿದ್ದನ್ನು ದೃಢಪಡಿಸುವಲ್ಲಿ ವಿಫಲವಾದರೆ ನೇಮಕಾತಿ ಯಿಂದ ದೂರ ಉಳಿಯಬೇಕಾಗುತ್ತದೆ. ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದರೂ ಸಹ ನೇಮಕಾತಿ ರದ್ದಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಒಬ್ಬನೇ ಅಭ್ಯರ್ಥಿ ಹಲವಾರು ಮೀಸಲು ಕೋರಿರುತ್ತಾರೆ. ಉದಾಹರಣೆಗೆ ಎಸ್ಸಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಕನ್ನಡ ಮಾಧ್ಯಮ, ಗ್ರಾಮೀಣ ಸೇರಿದಂತೆ ಹಲವಾರು ಮೀಸಲು ಬಯಸಿ ಅರ್ಜಿ ಸಲ್ಲಿಸಿರುತ್ತಾರೆ. ಇದರಲ್ಲಿ ಯಾವುದಾದರೂ ಒಂದು ಮೀಸಲು ಪ್ರಮಾಣಪತ್ರದಲ್ಲಿ ದೋಷವಾದರೇ ಇಡೀ ಆಯ್ಕೆ ಪ್ರಕ್ರಿಯೆಯಿಂದಲೇ ಹೊರಗೆ ಉಳಿಯಬೇಕಾಗುತ್ತದೆ ಎನ್ನುವುದೇ ಈಗ ಚರ್ಚೆಗೆ ಗ್ರಾಸವಾಗಿದೆ.

ಸ್ಪಷ್ಟತೆ ಇಲ್ಲ: ವಿವಾಹಿತ ಮಹಿಳೆ ಪತಿಯ ಮನೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕೇ ಅಥವಾ ತಂದೆ, ತಾಯಿ ಮನೆಯ ಪ್ರಮಾಣಪತ್ರ ಸಲ್ಲಿಸಿದರೆ ನಡೆಯುತ್ತದೆಯೇ ಎನ್ನುವ ಸ್ಪಷ್ಟತೆ ಇಲ್ಲ. ಈ ಹಿಂದೆ ಇದೇ ಕಾರಣಕ್ಕಾಗಿ ಶಿಕ್ಷಕರ ನೇಮಕಾತಿಯಲ್ಲಿ ಸಮಸ್ಯೆಗೆ ಸಿಲುಕಿದ್ದಾರೆ. ಈಗಲೂ ಈ ಕುರಿತು ಸ್ಪಷ್ಟತೆ ಇಲ್ಲ.

371 ಜೆ ಪ್ರಮಾಣ ಪತ್ರ: ವಿವಾಹಿತ ಮಹಿಳೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಈಗಾಗಲೇ ವಿದ್ಯಾರ್ಥಿಯಾಗಿದ್ದಾಗ ಜೀವಿತಾವಧಿ 371 ಜೆ ಪ್ರಮಾಣಪತ್ರ ನೀಡಲಾಗಿದ್ದು, ಅದವೇ ಉರ್ಜಿತವೇ ಎನ್ನುವುದನ್ನು ಸ್ಪಷ್ಟಪಡಿಸಬೇಕು.

ನಾವು ಮೀಸಲು ಕೋರಿರುತ್ತೇವೆ, ಸಿಂಧುತ್ವ ಪಡೆಯುವಲ್ಲಿ ಸಮಸ್ಯೆಯಾಗುತ್ತದೆ. ಆದಾಯ ಅಧಿಕವಿದೆಯಂದು ತಿರಸ್ಕಾರವಾದರೆ ನಾನು ಸಾಮಾನ್ಯ ವರ್ಗದಲ್ಲಿ ಅರ್ಹತೆ ಇದ್ದರೂ ರದ್ದಾಗುವುದು ಯಾವ ನ್ಯಾಯ ಎಂದು 371 ಜೆ ಹೋರಾಟ ಸಮಿತಿಯ ರಮೇಶ ತುಪ್ಪದ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ