ಭಾವನೆ ಕೆರಳಿಸಿ ಜನರ ದಾರಿ ತಪ್ಪಿಸುವವರ ಬಗ್ಗೆ ಜಾಗರೂಕರಾಗಿರಿ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Feb 27, 2024 1:33 AM

ಸಾರಾಂಶ

ಒಡೆದು ಆಳುವ ಮೂಲಕ ದ್ವೇಷ ಹುಟ್ಟಿಸಿ, ಭಾವನೆಗಳನ್ನು ಕೆರಳಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ.

ಅಕ್ಕಿಆಲೂರಿನಲ್ಲಿ ಭೀಮೋತ್ಸವ, ಭೀಮನಮನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾನಗಲ್ಲ

ಒಡೆದು ಆಳುವ ಮೂಲಕ ದ್ವೇಷ ಹುಟ್ಟಿಸಿ, ಭಾವನೆಗಳನ್ನು ಕೆರಳಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಪ್ರತಿಯೊಬ್ಬರೂ ಜಾಗರೂಕರಾಗಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾಯ್ದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಅಕ್ಕಿಆಲೂರಿನ ಜೈಭೀಮ ಜನಪದ ಕಲಾಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಭೀಮೋತ್ಸವ ಭೀಮನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ಆ ದಿನಗಳಲ್ಲಿಯೇ ಕಂಡ ಸಮಸಮಾಜ ನಿರ್ಮಾಣದ ಕನಸು ನನಸಾಗಬೇಕಿದೆ. ನಾವೆಲ್ಲರೂ ಸಂವಿಧಾನದ ಸಂದೇಶಗಳನ್ನು ಪಾಲಿಸಬೇಕಿದೆ. ಇಡೀ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಸಂವಿಧಾನ ನಮ್ಮದಾಗಿದೆ. ಸಂವಿಧಾನದ ಮೂಲಕ ಅವಕಾಶ ವಂಚಿತರನ್ನು ಗುರುತಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕಿದೆ. ಸಂವಿಧಾನ ಬದಲಿಸುವ ಹೇಳಿಕೆ ನೀಡುವವರ ಕೈಗೆ ಅಧಿಕಾರ ಕೊಟ್ಟರೆ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತಂದು ಸರ್ವಾಧಿಕಾರಿಯಂತೆ ವರ್ತಿಸುವರಿಗೆ ಸಮುದಾಯವೇ ಬುದ್ಧಿ ಕಲಿಸಬೇಕಿದೆ ಎಂದರು.

ಮುಖಂಡ ಆನಂದ ಗಡ್ಡದೇವರಮಠ ಮಾತನಾಡಿ, ಸಂವಿಧಾನದ ರಕ್ಷಣೆಯ ದೃಢಸಂಕಲ್ಪ ತೊಟ್ಟು ರಾಜ್ಯ ಸರ್ಕಾರ ರಾಜ್ಯವ್ಯಾಪಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಸಿದೆ. ಸಂವಿಧಾನ ಪೀಠಿಕೆ ಓದು ಕಡ್ಡಾಯಗೊಳಿಸಿದೆ. ಸಂವಿಧಾನದ ಆಶಯಗಳು ಸಾಕಾರಗೊಂಡರೆ ಮಾತ್ರ ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ದೊರಕಿಸಬಹುದಾಗಿದೆ ಎಂದರು.

ಮಹಾನಾಯಕ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ ಮಾತನಾಡಿ, ಸೇವೆ ಗುರುತಿಸಿ ಮಹಾನಾಯಕ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಸಂತಸವೆನಿಸಿದೆ. ತಮ್ಮಂಥ ಲಕ್ಷಾಂತರ ಜನರಿಗೆ ಸಂವಿಧಾನದ ಬದುಕಿನ ಮಾರ್ಗ ತೋರಿದೆ. ಅಂಬೇಡ್ಕರ್ ಅವರ ಋಣದಲ್ಲಿ ಬದುಕುತ್ತಿದ್ದೇವೆ ಎಂದರು.

ಚಿಂತಕ ಡಾ. ವಡ್ಡಗೇರೆ ನಾಗರಾಜ ಭೀಮ ನುಡಿ ನುಡಿದರು. ಮಂಜುನಾಥ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮಕ್ಬೂಲ್‌ ಅಹ್ಮದ್ ರುಸ್ತುಂಖಾನವರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಪುಟ್ಟಪ್ಪ ನರೇಗಲ್, ಯಾಸೀರ್‌ಅರಾಫತ್ ಮಕಾನದಾರ ಉಪಸ್ಥಿತರಿದ್ದರು.

Share this article