ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಪಟ್ಟಣದ ಆಡಳಿತ ಸೌಧದಲ್ಲಿ ಶನಿವಾರ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಲಪ್ರಭೆ ಮೈದುಂಬಿ ಹರಿಯುತ್ತಿದೆಯಾದರೂ ಸದ್ಯಕ್ಕೆ ನೆರೆಯ ಸನ್ನಿವೇಶವಿಲ್ಲ. ಆದರೂ ಸಹ ಮುನ್ನೆಚ್ಚರಿಕೆಯಾಗಿ ನದಿಪಾತ್ರದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು. ಅತಿಯಾದ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ತಾಲೂಕಾಡಳಿತಕ್ಕೆ ವರದಿ ನೀಡಿ, ಸರ್ಕಾರದಿಂದ ದೊರೆಯುವ ಪರಿಹಾರವನ್ನು ಸಂತ್ರಸ್ತರಿಗೆ ದೊರಕಿಸಿಕೊಂಡಬೇಕೆಂದು ಸೂಚನೆ ನೀಡಿದರು.
ನೆರೆಯ ಕುರಿತು ತಾಲೂಕಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ತಹಸೀಲ್ದಾರ ರವೀಂದ್ರ ಹಾದಿಮನಿ, ನದಿಪಾತ್ರದ ಎಲ್ಲ ಗ್ರಾಮಗಳ ಗ್ರಾಮಸ್ಥರಿಗೂ ನೆರೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ನದಿದಂಡೆಯಲ್ಲಿ ಬರುವ ಎಲ್ಲ ಗ್ರಾಮಗಳು ಸೇರಿ ಒಟ್ಟು 32 ಕಡೆಗಳಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಜಾನುವಾರ ರಕ್ಷಣೆಗೂ 44 ಕೇಂದ್ರ ತೆರೆಯಲಾಗಿದೆ. ಮುನ್ನಚ್ಚರಿಕೆಯಾಗಿ ಒಂದು ಬೋಟ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಪ್ರವಾಹ ಸಂಭವಿಸುವ ಮುನ್ಸೂಚನೆ ಇಲ್ಲದಿದ್ದರೂ ಅಗತ್ಯ ಕ್ರಮಗಳನ್ನು ತಾಲೂಕಾಡಳಿತದಿಂದ ಮಾಡಲಾಗಿದೆ ಎಂದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಂದಾಜು 50 ಮನೆಗಳು ಬಿದ್ದಿರುವ ಮಾಹಿತಿ ಇದೆ, ಈ ಕುರಿತು ಈಗಾಗಲೇ ತಂಡ ರಚಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದರು.ಸಭೆಯಲ್ಲಿ ತಾಪಂ ಇಒ ರವೀಂದ್ರ ಘೋರ್ಪಡೆ, ಪಿಎಸೈ ಪ್ರವೀಣ ಗಂಗೋಳ, ಹೆಸ್ಕಾಂ ಎಇಇ ಮಹೇಶ್ವರ ಹಿರೇಮಠ, ಪಪಂ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ, ಬಿಇಒ ತುಬಾಕಿ, ಪಿಡಬ್ಲುಡಿ ಸಂಜೀವ ಮಿರಜಕರ, ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.
- ಬಾಬಾಸಾಹೇಬ ಪಾಟೀಲ, ಶಾಸಕರು