ರಾಮನಗರ: ವಸತಿ, ಕನಿಷ್ಠ ವೇತನ ಹಾಗೂ ಒಂದು ಸಾವಿರ ಬೀಡಿ ಕಟ್ಟಿದರೆ 350 ರು. ಗೌರವಧನ ನೇರವಾಗಿ ಕಾರ್ಮಿಕರಿಗೆ ಸಿಗುವಂತಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೀಡಿ ಕಾರ್ಮಿಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಹಿಳಾ ಕಾರ್ಮಿಕರ ಮೇಲಿನ ಶೋಷಣೆ, ಅವಮಾನ ಮತ್ತು ವೇತನ ತಾರತಮ್ಯ ತಡೆಯಲು ವಿಶೇಷ ದೂರು ಪರಿಹಾರ ಸಮಿತಿ ರಚಿಸಬೇಕು. ಬೀಡಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸಬೇಕು. ಧೂಳು ಮತ್ತು ತಂಬಾಕು ಸಂಬಂಧಿತ ಅನಾರೋಗ್ಯಗಳಿಂದ ಅನೇಕ ಕಾರ್ಮಿಕರು ಬಳಲುತ್ತಿದ್ದಾರೆ. ಉಚಿತ ಚಿಕಿತ್ಸಾ ಸೌಲಭ್ಯ ಹಾಗೂ ಔಷಧ ವಿತರಣೆ ಮಾಡಬೇಕು.
ಬೀಡಿ ಕಾರ್ಮಿಕರ ಪಿಎಫ್ , ಇಎಸ್ ಐ ಹಾಗೂ ಇತರ ಕಾನೂನುಬದ್ಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಕಾರ್ಮಿಕರಿಗೆ ದೊರೆಯಬೇಕಾದ ಹಕ್ಕುಗಳನ್ನು ತಪ್ಪಿಸುವ ಗುತ್ತಿಗೆದಾರರು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಉದ್ಯೋಗ ಭದ್ರತೆ ಒದಗಿಸಬೇಕು. ಕೆಲಸದ ಕೊರತೆ ಹಾಗೂ ಮಧ್ಯವರ್ತಿಗಳ ದೌರ್ಜನ್ಯದಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಕೆಲಸ ಹಾಗೂ ಕಾನೂನು ರಕ್ಷಣೆ ನೀಡಬೇಕು. ಕಾರ್ಮಿಕರ ಕುಂದುಕೊರತೆಗಳ ಕುರಿತಾಗಿ ಕಾರ್ಮಿಕ ಇಲಾಖೆ ಮಧ್ಯಸ್ಥಿಕೆಯಲ್ಲಿ ಮಾಲೀಕರ ಮತ್ತು ಕಾರ್ಮಿಕ ಮುಖಂಡರನ್ನು ಒಳಗೊಂಡು ಜಂಟಿ ಸಭೆ ಏರ್ಪಡಿಸಬೇಕು. ಕಾಲಕಾಲಕ್ಕೆ ಕಾರ್ಮಿಕರ ಸಮಸ್ಯೆಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸುವ ವ್ಯವಸ್ಥೆ ರೂಪಿಸಬೇಕು.
ಪ್ರತಿಭಟನೆಯಲ್ಲಿ ಸ್ಪಂದನ ಸಂಘಟನೆಯ ಕಾರ್ಯದರ್ಶಿ ಮಾಲಿನಿ , ಬೀಡಿ ಕಾರ್ಮಿಕರ ಮುಖಂಡ ಮುನಾಫ್, ಕಾರ್ಮಿಕ ಮುಖಂಡರಾದ ರಾಘವೇಂದ್ರ, ಮಂಗಳೂರು ವಿಜಯ್, ಅಶ್ವಥ್, ಕಾವ್ಯ, ಶ್ರೀನಿವಾಸ್, ಫಾರ್ಹನ್, ಬೀಡಿ ಕಾರ್ಮಿಕ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
18ಕೆಆರ್ ಎಂಎನ್ 6.ಜೆಪಿಜಿ
------------------------