''ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ : ರಾಜ್ಯ ಸರ್ಕಾರಕ್ಕೆ ಪಂಚಮಸಾಲಿಗಳಿಂದ ತಕ್ಕ ಉತ್ತರ''

KannadaprabhaNewsNetwork |  
Published : Dec 13, 2024, 12:46 AM ISTUpdated : Dec 13, 2024, 07:53 AM IST
ಮುಂಡರಗಿಯಲ್ಲಿ ಈಚಗೆ ಬೆಳಗಾವಿ ಸುವರ್ಣ ಸೌಧದ ಎದುರಿನಲ್ಲಿ ಪಂಚಮಸಾಲಿ ಬಂಧುಗಳ ಮೇಲೆ ಲಾಟಿಚಾರ್ಜ್ ನಡೆಸಿದ ಸರ್ಕಾರದ ಕ್ರಮವನ್ನು ಖಂಡಿಸಿ ರಸ್ತೆ ತಡೆ ನಡೆಸಿ, ನಂತರ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ನಾವು ಪಕ್ಷಾತೀತವಾಗಿ ಶ್ರೀಗಳ ನೇತೃತ್ವದಲ್ಲಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿ ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿಗಳ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದೇವೆ

ಮುಂಡರಗಿ: 12ನೇ ಶತಮಾನದಲ್ಲಿ ಕೊಂಡಿ ಮಂಚಣ್ಣ ಲಿಂಗಾಯತರ ಮೇಲೆ ಹಲ್ಲೆ ಮಾಡಿಸಿದ್ದರು. ಇಂದು 21ನೇ ಶತಮಾನದಲ್ಲಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಹಾಗೂ ಲಾಠಿ ಚಾರ್ಜ್ ಮಾಡಿಸಿ ನಮ್ಮ ರಕ್ತ ಹರಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಪಂಚಮಸಾಲಿಗಳು ತಕ್ಕ ಉತ್ತರ ನೀಡಲಿದ್ದಾರೆ ಎಂದು ಮುಂಡರಗಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಎಚ್ಚರಿಕೆ ನೀಡಿದೆ.

ಗುರುವಾರ ಮುಂಡರಗಿ ಪಟ್ಟಣದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಡಿ.10 ರಂದು ಬೆಳಗಾವಿ ಸುವರ್ಣ ಸೌಧದ ಎದುರಿನಲ್ಲಿ 2ಎ ಮೀಸಲಾತಿಗಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಚ್ ಮಾಡಿಸಿದ ಮುಖ್ಯಮಂತ್ರಿ ವಿರುದ್ಧ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ, ಯುವ ಮುಖಂಡ ಹಾಗೂ ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಕಳೆದ 35 ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಹೋರಾಟ ಮಾಡುತ್ತಾ ಬರುತ್ತಿದ್ದು, ಅಂದಿನಿಂದ ಇಂದಿನವರೆಗೂ ಹೋರಾಟ ನಡೆಯುತ್ತಲೇ ಬಂದಿದ್ದು, ಈ ಹಿಂದೆ ಯಾವ ಸರ್ಕಾರಗಳೂ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸುವ ಮೂಲಕ ಧೈರ್ಯ ಕುಗ್ಗಿಸುವ ಕೆಲಸ ಮಾಡಿರಲಿಲ್ಲ. ಹೀಗಾಗಿ ನಾವು ಪಕ್ಷಾತೀತವಾಗಿ ಶ್ರೀಗಳ ನೇತೃತ್ವದಲ್ಲಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿ ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿಗಳ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಚ್ಚರಿಸಿದರು.

ರಜನೀಕಾಂತ ದೇಸಾಯಿ, ಶಿದ್ದಲಿಂಗಪ್ಪ ದೇಸಾಯಿ ಮಾತನಾಡಿ, ಈ ಸರ್ಕಾರ ನಮ್ಮ ನಮ್ಮಲ್ಲಿಯೇ ಒಡೆದು ಆಳುವ ನೀತಿ ಮಾಡುತ್ತಿದೆ. ಸಂವಿಧಾನದ ಪ್ರಕಾರ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಹಕ್ಕು ಕೇಳಿದವರ ಮೇಲೆ ಲಾಠಿ ಚಾರ್ಜ್ ಮಾಡಿಸುವುದು ಯಾವ ನ್ಯಾಯ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ನಿಂದ 134 ಜನ ಶಾಸಕರು ಗೆಲ್ಲಲು ಪಂಚಮಸಾಲಿಗಳ ಕೊಡುಗೆಯೂ ಇದೆ. ಪಂಚಮಸಾಲಿಗಳನ್ನು ವಿರೋಧಿಸುವ ಮೊದಲು ಸರ್ಕಾರ ಎಚ್ಚರಿಕೆಯಿಂದ ನಡೆಯಬೇಕು. ತಕ್ಷಣವೇ ಸಿದ್ದರಾಮಯ್ಯರನ್ನು ಸಿಎಂ ಹುದ್ದೆಯಿಂದ ಇಳಿಸಬೇಕು. ಈ ಘಟನೆಯಲ್ಲಿ ಪಂಚಮಸಾಲಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆರ್. ಹಿತೇಂದ್ರ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಬಸವರಾಜ ದೇಸಾಯಿ, ಶಿವಾನಂದ ಇಟಗಿ, ಶೋಭಾ ಹೊಟ್ಟೀನ, ಕವಿತಾ ಉಳ್ಳಾಗಡ್ಡಿ, ದೇವಪ್ಪ ಇಟಗಿ, ಎ.ವೈ. ನವಲಗುಂದ ಮಾತನಾಡಿದರು.

ಈ ಸಂದರ್ಭದಲ್ಲಿ ಆರ್.ಎಲ್. ಪೊಲೀಸ್ ಪಾಟೀಲ, ಎಂ.ಎಸ್. ಹೊಟ್ಟಿನ, ವೀರನಗೌಡ ಗುಡದಪ್ಪನವರ, ಅಶೋಕ ಹಂದ್ರಾಳ, ವೀರಣ್ಣ ಹಕ್ಕಂಡಿ, ಬಿ.ಕೆ. ಪಾಟೀಲ, ಸುರೇಶ ಭಾವಿಹಳ್ಳಿ, ಆರ್.ವೈ. ಪಾಟೀಲ, ವಿರೇಶ ಹಡಗಲಿ, ಸೋಮು ಹಕ್ಕಂಡಿ, ಮುತ್ತು ಅಳವಂಡಿ, ಶಿವಾನಂದ ಕಮತರ, ಎಂ.ಎಂ. ಮಾನೇದ, ಮಂಜುನಾಥ ಇಟಗಿ, ಲಿಂಗರಾಜ ಡಾವಣಗೇರಿ, ಸಂದೇಶ ಹುಬ್ಬಳ್ಳಿ, ಪ್ರಭು ಕೊರ್ಲಹಳ್ಳಿ, ಗಂಗಾಧರ ಬಳಿಗೇರ, ಅನ್ನಪೂರ್ಣ ದೇಸಾಯಿ, ಶ್ರೀದೇವಿ ಗೋಡಿ, ನೇತ್ರಾವತಿ ಭಾವಿಹಳ್ಳಿ, ರೇಖಾ ದೇಸಾಯಿ, ಜಗದೀಶ ವಾಲಿ, ಶರಣಪ್ಪ ಕಲ್ಲೂರ, ಈರಣ್ಣ ಮಜ್ಜಗಿ, ಕುಮಾರ ಬನ್ನಿಕೊಪ್ಪ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ಪಟ್ಟಣದ ಗದಗ-ಮುಂಡರಗಿ ರಸ್ತೆಯಲ್ಲಿರುವ ಕಿತ್ತೂರು ಚೆನ್ನಮ್ಮ ಪ್ರತಿಮೆಯ ಬಳಿ ಕೆಲವು ಸಮಯ ರಸ್ತೆ ತಡೆ ನಡೆಸಿ ನಂತರ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ-30,000 ಕೋಟಿ ರು. ವಿತರಣೆಯ ಗುರಿ
ಏಪ್ರಿಲ್‌ನಿಂದ ಆಲ್ಕೋಹಾಲ್‌ ಪ್ರಮಾಣಕ್ಕೆ ತಕ್ಕಂತೆ ಮದ್ಯ ಸುಂಕ