;Resize=(412,232))
ಬೆಳಗಾವಿ : ಜಾಗತಿಕ ಮಟ್ಟದಲ್ಲಿ ಉಂಟಾದ ಇಸ್ರೇಲ್-ಇರಾನ್ ಸಂಘರ್ಷ ಇದೀಗ ಸ್ಥಳೀಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಬೆಳಗಾವಿಯ ಖಾನಾವಳಿಗಳು, ಸಣ್ಣ ಹೋಟೆಲ್ಗಳು ಹಾಗೂ ಮೆಸ್ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳು ಲಭ್ಯವಾಗದೇ ಖಾನಾವಳಿ, ಹೋಟೆಲ್ನವರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಬಡಕಲ್ ಗಲ್ಲಿಯಲ್ಲಿರುವ ದುರ್ಗಾದೇವಿ ಖಾನಾವಳಿಯಂತಹ ಅನೇಕ ಮೆಸ್ಗಳು ಮರದ ಸೌದೆ ಒಲೆ ಬಳಸಿ ಅಡುಗೆ ಮಾಡುವತ್ತ ಮುಖ ಮಾಡಿವೆ. ವಿದ್ಯಾರ್ಥಿಗಳು ಹಾಗೂ ನಿತ್ಯದ ಗ್ರಾಹಕರನ್ನು ಕಳೆದುಕೊಳ್ಳಬಾರದೆಂಬ ಕಾರಣದಿಂದ, ಪರ್ಯಾಯ ವ್ಯವಸ್ಥೆಯಾಗಿ ಸೌದೆ ಬಳಕೆ ಅನಿವಾರ್ಯವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಸೌದೆ ಬಳಕೆ ಸಹ ಸುಲಭವಲ್ಲ. ಒಂದು ಕ್ವಿಂಟಲ್ ಕಟ್ಟಿಗೆಗೆ ಸುಮಾರು ₹900 ವೆಚ್ಚವಾಗುತ್ತಿದ್ದು, ದಿನಕ್ಕೆ ಸುಮಾರು 25 ಕೇಜಿ ಕಟ್ಟಿಗೆ ಬಳಕೆ ಮಾಡಲಾಗುತ್ತಿದೆ. ಈ ಪರಿಣಾಮವಾಗಿ ಖರ್ಚು ಹೆಚ್ಚಿದರೂ, ಗ್ರಾಹಕರ ಮೇಲೆ ಹೊರೆ ಬೀಳಬಾರದೆಂಬ ಕಾರಣದಿಂದ ಊಟದ ದರವನ್ನು ಏರಿಸದೇ ನಷ್ಟದಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಹೋಟೆಲ್ ಮತ್ತು ಖಾನಾವಳಿ ಮಾಲೀಕರು ತಕ್ಷಣವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜು ಸುಗಮಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.