ಬೆಳ್ತಂಗಡಿ ನಗರದ ಹೊಳೆಬದಿಯಲ್ಲಿ ಸುಮಾರು ೪೦ ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ಜರುಗಿತು.
ಬೆಳ್ತಂಗಡಿ: ಪಟ್ಟಣ ಪಂಚಾಯಿತಿ ಬೆಳ್ತಂಗಡಿ ಹಾಗೂ ಹಿಂದೂ ರುದ್ರಭೂಮಿ ಸಮಿತಿ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ನಗರದ ಹೊಳೆಬದಿಯಲ್ಲಿ ಸುಮಾರು ೪೦ ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ಜರುಗಿತು. ಶಾಸಕ ಹರೀಶ್ ಪೂಂಜ ರುದ್ರಭೂಮಿ ಉದ್ಘಾಟನೆ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿ, ರುದ್ರಭೂಮಿಯ ಕಟ್ಟಡದ ಎದರು ಭಾಗಕ್ಕೆ ಶೀಟ್ ಅಳವಡಿಕೆಗೆ ರು .೫ ಲಕ್ಷವನ್ನು ತನ್ನ ಶಾಸಕ ನಿಧಿಯಿಂದ ನೀಡಿದ್ದೇನೆ. ರುದ್ರಭೂಮಿಯ ಹತ್ತಿರವೇ ನದಿ ಇರುವುದರಿಂದ ಅಪರಕ್ರಿಯೆ ಮಾಡುವವರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ನದಿಗೆ ಸ್ಟೆಪ್ ನಿರ್ಮಾಣ ಸೇರಿದಂತೆ ರುದ್ರಭೂಮಿಯ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಮಾತನಾಡಿ, ನಗರೋತ್ಥಾನ ಅನುದಾನ ರು.೪೦ ಲಕ್ಷದಲ್ಲಿ ಶಾಸಕರ ಹಾಗೂ ಸಮಿತಿಯವರ ಸಹಕಾರದಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ರುದ್ರಭೂಮಿಯ ಕಟ್ಟಡ ನಿರ್ಮಿಸಲಾಗಿದೆ. ರುದ್ರಭೂಮಿಯಲ್ಲಿ ನಿರ್ಮಿಸಲಾದ ಶೌಚಾಲಯದ ಕಿಟಿಕಿ, ಬಾಗಿಲುಗಳನ್ನು ಯಾರೋ ಕಳವು ಮಾಡಿದ್ದು, ಈ ರೀತಿ ಸಾರ್ವಜನಿಕರ ಉಪಯೋಗದ ವಸ್ತುಗಳನ್ನು ಯಾರೂ ಕಳ್ಳತನ ಮಾಡಬಾರದು ಎಂದು ಕಿವಿಮಾತು ಹೇಳಿದರು. ರುದ್ರಭೂಮಿಗೆ ಸಹಕಾರ ನೀಡಿದ ದಾನಿಗಳನ್ನು ಹಾಗೂ ಗುತ್ತಿಗೆದಾರ ರವಿ ಮತ್ತು ಜಯಕುಮಾರ್ ಅವರನ್ನು ಶಾಸಕರು ಗೌರವಿಸಿದರು.ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಪಂಚಾಯಿತಿ ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹಿಂದೂ ರುದರಭೂಮಿ ಸಮಿತಿ ಅಧ್ಯಕ್ಷ ಶಶಿಧರ ಪೈ, ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ, ವಾರ್ಡ್ ಸದಸ್ಯ ರಜನಿಕುಡ್ವ, ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿದರು. ಹಿಂದೂ ರುದ್ರಭೂಮಿ ಸಮಿತಿ ಉಪಾಧ್ಯಕ್ಷ ಪದ್ಮಕುಮಾರ್ ನಿರೂಪಿಸಿದರು. ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಶಶಿಧರ ಪೈ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.