ಬೆಳ್ತಂಗಡಿ: ಇಲ್ಲಿನ ಸೋಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 70 ವರ್ಷ ಹಳೆಯ ಬೆಳ್ತಂಗಡಿ ಸೇತುವೆ ಶೀಘ್ರ ತೆರವಾಗಲಿದೆ. ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು ಶೀಘ್ರ ಹಳೆ ಸೇತುವೆ ತೆರವಾಗಲಿದೆ.70 ವರ್ಷವಾದರೂ ಶಿಥಿಲವಾಗಿಲ್ಲ: ಈ ಹಳೆಯ ಸೇತುವೆಯ ನಾಲ್ಕು ಮೂಲೆಗಳಲ್ಲಿ ಕಂಬ ನಿರ್ಮಿಸಿ ಅದರ ಮೇಲೆ ಅಶೋಕ ಸ್ತಂಭವನ್ನು ಅಳವಡಿಸಲಾಗಿತ್ತು. ಕಂಬದಲ್ಲಿರುವ ಮಾಹಿತಿ ಪ್ರಕಾರ 1957ರ ಜುಲೈ 8 ರಂದು ಮೈಸೂರು ರಾಜ್ಯದ ಇಲಾಖೆ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಕೆ.ವೀರಣ್ಣ ಗೌಡ ಸೇತುವೆ ಉದ್ಘಾಟಿಸಿದ್ದರು.
ಸರ್ವಿಸ್ ರಸ್ತೆಗಾಗಿ ಸೇತುವೆ ತೆರವು: ಪ್ರಸ್ತುತ ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಶೇ. 80ರಷ್ಟು ಪೂರ್ತಿಗೊಂಡಿದ್ದು, ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬೇಕಿದೆ. ಈ ವರ್ಷದ ಜೂನ್ ತಿಂಗಳೊಳಗೆ ಬಹುತೇಕ ಕಾಮಗಾರಿಯನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ವೇಗವಾಗಿ ಕೆಲಸಗಳು ನಡೆಸಲಾಗುತ್ತಿದೆ. ಸರ್ವಿಸ್ ರಸ್ತೆಯ ನಿರ್ಮಾಣಕ್ಕಾಗಿ ಹೊಸ ಸೇತುವೆ ನಿರ್ಮಾಣಗೊಳ್ಳಬೇಕಿರುವುದರಿಂದ ಬೆಳ್ತಂಗಡಿಯ ಹಳೆ ಸೇತುವೆಯನ್ನು ತೆರವು ಮಾಡಲಾಗುತ್ತಿದ್ದು, ಅಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತದೆ ಎಂದು ಹೆದ್ದಾರಿ ಇಲಾಖೆ ಮಂಗಳೂರು ವಿಭಾಗ ಕಾರ್ಯಪಾಲಕ ಇಂಜಿನಿಯರ್ ಕೆ.ಟಿ.ಚಂದ್ರಶೇಖರ್ ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ಚುರುಕಾಗಿದೆ: ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮೊದಲಾದ ಜಂಕ್ಷನ್ ಪ್ರದೇಶಗಳಲ್ಲಿ ಕಾಮಗಾರಿ ಬಾಕಿ ಇದೆ. ಟೆಂಡರ್ ಅವಧಿಯ ಪ್ರಕಾರ 2026ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಾಗಿವೆ. ಆದರೆ ಮಳೆಗಾಲದ ಕಾರಣ ಜೂನ್ ಬಳಿಕ ಕಾಮಗಾರಿ ನಡೆಸುವುದು ಕಷ್ಟಸಾಧ್ಯ ವಾಗಿರುವುದರಿಂದ ಬಹುತೇಕ ಕಾಮಗಾರಿಗಳನ್ನು ಜೂನ್ ತಿಂಗಳೊಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.