ಇತಿಹಾಸ ಪುಟ ಸೇರಲಿದೆ ಬೆಳ್ತಂಗಡಿ ಸೋಮಾವತಿ ಸೇತುವೆ

KannadaprabhaNewsNetwork |  
Published : Mar 18, 2026, 02:45 AM IST
ಸೇತುವೆ | Kannada Prabha

ಸಾರಾಂಶ

ಇಲ್ಲಿನ ಸೋಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 70 ವರ್ಷ ಹಳೆಯ ಬೆಳ್ತಂಗಡಿ ಸೇತುವೆ ಶೀಘ್ರ ತೆರವಾಗಲಿದೆ. ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು ಶೀಘ್ರ ಹಳೆ ಸೇತುವೆ ತೆರವಾಗಲಿದೆ.

ಬೆಳ್ತಂಗಡಿ: ಇಲ್ಲಿನ ಸೋಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಮಾರು 70 ವರ್ಷ ಹಳೆಯ ಬೆಳ್ತಂಗಡಿ ಸೇತುವೆ ಶೀಘ್ರ ತೆರವಾಗಲಿದೆ. ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು ಶೀಘ್ರ ಹಳೆ ಸೇತುವೆ ತೆರವಾಗಲಿದೆ.70 ವರ್ಷವಾದರೂ ಶಿಥಿಲವಾಗಿಲ್ಲ: ಈ ಹಳೆಯ ಸೇತುವೆಯ ನಾಲ್ಕು ಮೂಲೆಗಳಲ್ಲಿ ಕಂಬ ನಿರ್ಮಿಸಿ ಅದರ ಮೇಲೆ ಅಶೋಕ ಸ್ತಂಭವನ್ನು ಅಳವಡಿಸಲಾಗಿತ್ತು. ಕಂಬದಲ್ಲಿರುವ ಮಾಹಿತಿ ಪ್ರಕಾರ 1957ರ ಜುಲೈ 8 ರಂದು ಮೈಸೂರು ರಾಜ್ಯದ ಇಲಾಖೆ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಕೆ.ವೀರಣ್ಣ ಗೌಡ ಸೇತುವೆ ಉದ್ಘಾಟಿಸಿದ್ದರು.

ಸೇತುವೆ ಭಾಗದಲ್ಲಿ ಸರ್ವಿಸ್‌ ರಸ್ತೆ: ಈ ಭಾಗದಲ್ಲಿ ಮುಖ್ಯ ಹೆದ್ದಾರಿಯ ಜತೆಗೆ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣವಾಗುತ್ತಿದ್ದು, ಈಗಾಗಲೇ ಮುಖ್ಯ ಸೇತುವೆ ಹಾಗೂ ಒಂದು ಬದಿಯ ಸರ್ವೀಸ್ ರಸ್ತೆಯ ಸೇತುವೆಯ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಮತ್ತೊಂದು ಸೇತುವೆ ನಿರ್ಮಿಸಬೇಕಾದರೆ ಹಳೆಯ ಸೇತುವೆ ತೆರವು ಅನಿವಾರ್ಯವಾಗಿದೆ. ಬೆಳ್ತಂಗಡಿ ನಗರ ಹಾಗೂ ಲಾಯಿಲ ಎರಡೂ ಕಡೆಯಲ್ಲೂ ಹಳೆಯ ಸೇತುವೆ ಸಂಪರ್ಕ ರಸ್ತೆಗಳು ಇಳಿಜಾರಿನಿಂದ ಕೂಡಿದ್ದು ಅಂದಿನ ವ್ಯವಸ್ಥೆಗೆ ಅದು ಸೂಕ್ತವಾಗಿತ್ತು. ಆದರೆ ಈಗಿನ ಹೆದ್ದಾರಿಯು ಇಳಿಜಾರನ್ನು ತಪ್ಪಿಸಿ ನೇರವಾಗಿ ಸಾಗಬೇಕಿರುವುದರಿಂದ ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆ ಸಾಕಷ್ಟು ಎತ್ತರದಲ್ಲಿ ನಿರ್ಮಾಣಗೊಂಡಿದ್ದು, ಮತ್ತೊಂದು ಸೇತುವೆ ಕೂಡ ಅಷ್ಟೇ ಎತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಪ್ರಸ್ತುತ ಬೆಳ್ತಂಗಡಿ ಭಾಗದಿಂದ ಲಾಯಿಲ ಕಡೆಗೆ ತೆರಳುವ ವಾಹನಗಳು ಹಳೆ ಸೇತುವೆಯಲ್ಲಿ ಸಾಗುತ್ತಿದ್ದು ಬೆಳ್ತಂಗಡಿ ನಗರಕ್ಕೆ ಆಗಮಿಸುವ ವಾಹನಗಳು ಹೊಸ ಸೇತುವೆಯ ಮೂಲಕ ಸಂಚರಿಸುತ್ತಿದೆ. ಮುಂದೆ ಎರಡೂ ಬದಿಯ ವಾಹನಗಳು ಹೊಸ ಸೇತುವೆಯಲ್ಲೇ ಸಂಚರಿಸಿದ ಬಳಿಕ ಹಳೆ ಸೇತುವೆಯ ತೆರವು ಕಾರ್ಯ ನಡೆಯಲಿದೆ.

ಸರ್ವಿಸ್‌ ರಸ್ತೆಗಾಗಿ ಸೇತುವೆ ತೆರವು: ಪ್ರಸ್ತುತ ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಶೇ. 80ರಷ್ಟು ಪೂರ್ತಿಗೊಂಡಿದ್ದು, ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬೇಕಿದೆ. ಈ ವರ್ಷದ ಜೂನ್ ತಿಂಗಳೊಳಗೆ ಬಹುತೇಕ ಕಾಮಗಾರಿಯನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ವೇಗವಾಗಿ ಕೆಲಸಗಳು ನಡೆಸಲಾಗುತ್ತಿದೆ. ಸರ್ವಿಸ್ ರಸ್ತೆಯ ನಿರ್ಮಾಣಕ್ಕಾಗಿ ಹೊಸ ಸೇತುವೆ ನಿರ್ಮಾಣಗೊಳ್ಳಬೇಕಿರುವುದರಿಂದ ಬೆಳ್ತಂಗಡಿಯ ಹಳೆ ಸೇತುವೆಯನ್ನು ತೆರವು ಮಾಡಲಾಗುತ್ತಿದ್ದು, ಅಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತದೆ ಎಂದು ಹೆದ್ದಾರಿ ಇಲಾಖೆ ಮಂಗಳೂರು ವಿಭಾಗ ಕಾರ್ಯಪಾಲಕ ಇಂಜಿನಿಯರ್ ಕೆ.ಟಿ.ಚಂದ್ರಶೇಖರ್ ತಿಳಿಸಿದ್ದಾರೆ.

ರಸ್ತೆ ಕಾಮಗಾರಿ ಚುರುಕಾಗಿದೆ: ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮೊದಲಾದ ಜಂಕ್ಷನ್ ಪ್ರದೇಶಗಳಲ್ಲಿ ಕಾಮಗಾರಿ ಬಾಕಿ ಇದೆ. ಟೆಂಡರ್ ಅವಧಿಯ ಪ್ರಕಾರ 2026ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಾಗಿವೆ. ಆದರೆ ಮಳೆಗಾಲದ ಕಾರಣ ಜೂನ್ ಬಳಿಕ ಕಾಮಗಾರಿ ನಡೆಸುವುದು ಕಷ್ಟಸಾಧ್ಯ ವಾಗಿರುವುದರಿಂದ ಬಹುತೇಕ ಕಾಮಗಾರಿಗಳನ್ನು ಜೂನ್ ತಿಂಗಳೊಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ: ಗೌರಿಕೆರೆ ಶ್ರೀ ರಾಮ ಮಂದಿರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಎಸ್ಸೆಸ್ಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 14151 ವಿದ್ಯಾರ್ಥಿಗಳು ಹಾಜರು