ಬೆಳ್ತಂಗಡಿ: ನದಿಗೆ ತ್ಯಾಜ್ಯ ಎಸೆದು ನೀರು ಮಲಿನಗೊಳಿಸುವವರ ಪತ್ತೆಗೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಪಂ ಉಪಾಯ ಕಂಡುಕೊಂಡಿದೆ. ತ್ಯಾಜ್ಯ ಎಸೆದವರಿಗೆ 5,000 ರೂ. ದಂಡ, ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿದರೆ 1,000 ರೂ. ಬಹುಮಾನ ನೀಡುವ ಬಗ್ಗೆ ನದಿ ಬಳಿ ಅಳವಡಿಸಿರುವ ಸೂಚನಾ ಫಲಕ ಗಮನ ಸೆಳೆಯುತ್ತಿದೆ.
ನಾವೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ದಾಖಲೆ ಸಹಿತ ಗ್ರಾಪಂಗೆ ತಿಳಿಸಿದರೆ ಗ್ರಾಪಂನಿಂದ 1 ಸಾವಿರ ರು. ಬಹುಮಾನ ನೀಡುವುದಾಗಿ ಘೋಷಿಸಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು ತ್ಯಾಜ್ಯ ಸುರಿದವರಿಗೆ 5 ಸಾವಿರ ರು. ದಂಡ ವಿಧಿಸುವ ಎಚ್ಚರಿಕೆಯನ್ನು ಫಲಕದಲ್ಲಿ ನೀಡಲಾಗಿದೆ.
ಹೆಚ್ಚಾಗಿ ರಾತ್ರಿ ಸಮಯದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಇಂತಹ ಸಂದರ್ಭ ತ್ಯಾಜ್ಯ ಎಸೆದವರನ್ನು ಗುರುತಿಸುವುದು ಕಷ್ಟ. ಆದ್ದರಿಂದ ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳಡಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆ.