ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣ ಹಾಗೂ ಜನಸಂಖ್ಯೆ ಬೆಳೆದಂತೆ ತ್ಯಾಜ್ಯ ವಸ್ತುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಸವನ್ನು ವಿಲೇವಾರಿ ಮಾಡಲು ಪುರಸಭೆಗೆ ತ್ಯಾಜ್ಯ ವಿಲೇವಾರಿ ವಾಹನದ ವ್ಯವಸ್ಥೆ ಅವಶ್ಯವಿದ್ದು, ಕಸ ಸಂಗ್ರಹಣೆಗೆ ವಾಹನಗಳನ್ನು ಖರೀದಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ ಹೇಳಿದರು.ಪುರಸಭೆ ಆವರಣದ ಮುಂಭಾಗ ಎರಡು ಟ್ರ್ಯಾಕ್ಟರ್, ಒಂದು ಆಟೋ ಟಿಪ್ಪರ್ ಅನ್ನು 15ನೇ ಹಣಕಾಸು ಯೋಜನೆಯಡಿಯಲ್ಲಿ ಖರೀದಿಸಿದ್ದು, ಸುಮಾರು 40 ಲಕ್ಷ ರುಪಾಯಿ ವೆಚ್ಚವಾಗಿದ್ದು, ಪಟ್ಟಣ ಬೆಳೆದಂತೆ ಜನಸಂಖ್ಯೆಯು ಹೆಚ್ಚಾಗುತ್ತಿದೆ. ಜನಸಂಖ್ಯೆ ಜಾಸ್ತಿಯಾದರೆ ಮನೆಯಲ್ಲಿ ಕಸವು ಜಾಸ್ತಿಯಾಗುತ್ತದೆ. ನಮ್ಮ ಕಚೇರಿಯಲ್ಲಿ ಎರಡು ಟ್ರ್ಯಾಕರ್, ಒಂದು ಆಟೋ ಟಿಪ್ಪರ್ ಇದ್ದು, ಕಸ ಸಂಗ್ರಹಣೆ ಮಾಡಲು ಕಷ್ಟವಾಗುತ್ತಿತ್ತು, ಇದನ್ನು ಮನಗಂಡು ವಾಹನ ಖರೀದಿಸಲಾಗಿದೆ. ಪುರಸಭೆ ನಾಗರಿಕರು ನಿಮ್ಮ ಮನೆ ಬಾಗಿಲಿಗೆ ಬರುವ ವಾಹನಕ್ಕೆ ಕಸವನ್ನು ಹಾಕಿ ನಗರವನ್ನು ಸ್ವಚ್ಛವಾಗಿಡಬೇಕು. ಪಟ್ಟಣವನ್ನು ಸುಂದರವಾಗಿ ಕಾಣುವಂತೆ ನಾಗರಿಕರು ಸಹಕರಿಸಿದರೆ ಮಾತ್ರ ಸಾಧ್ಯ ಎಂದರು.
ಪುರಸಭೆ ಮುಖ್ಯಾಧಿಕಾರಿ ಸುಜಯ್ ಮಾತನಾಡಿ, ಮನೆಯಲ್ಲಿ ಹಸಿ ಕಸ, ಒಣ ಕಸ ಎಂದು ಬೇರ್ಪಡಿಸಿ ವಾರಕ್ಕೆ ಎರಡು ದಿನ ಒಣ ಕಸ, ಮೂರು ದಿನ ಹಸಿ ಕಸದಂತೆ ಮಾರ್ಪಡಿಸಿ ಟಿಪ್ಪರಿಗೆ ಹಾಕಿದರೆ ಒಳ್ಳೆಯದು, ಎಲ್ಲೆಂದರಲ್ಲಿ ಕಸ ಹಾಕಬಾರದು, ಪಟ್ಟಣದಲ್ಲಿ ಸಂಗ್ರಹಿಸಿದ ಕಸವನ್ನು ಸನ್ಯಾಸಿಹಳ್ಳಿ ಬಳಿ ಇರುವ ಪುರಸಭೆಯ ಕಸ ಸಂಗ್ರಹಣೆ ಕೇಂದ್ರದಲ್ಲಿ ಕರಗಿಸಿ ಗೊಬ್ಬರ ಮಾಡಲಾಗುತ್ತದೆ. ಒಂದು ಕೆ.ಜಿ ಗೊಬ್ಬರಕ್ಕೆ ಐದು ರುಪಾಯಿ ಇದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು, ಎಲ್ಲೆಂದರಲ್ಲಿ ಕಸ ಬಿಸಾಡದೆ ನಮ್ಮ ವಾಹನಕ್ಕೆ ಹಾಕಬೇಕಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಗದೀಶ್, ಅಶೋಕ್, ಪುರಸಭೆ ಅಧಿಕಾರಿಗಳು, ನೌಕರರು, ಪೌರ ಕಾರ್ಮಿಕರು ಇದ್ದರು,