ಕನ್ನಡಪ್ರಭ ವಾರ್ತೆ ವಿಜಯಪುರ
ಹುಬ್ಬಳ್ಳಿಯಲ್ಲಿ ನೆಲೆಯೂರಿರುವ ಜಪಾನ್ ಮೂಲದ ನೈಡೆಕ್ ಕಂಪನಿ ನಡೆಸಿದ ಎರಡು ದಿನಗಳ ಕ್ಯಾಂಪಸ್ ಸಂದರ್ಶನದಲ್ಲಿ ತಮ್ಮ ನೇತೃತ್ವದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಶ್ರೀ ಸಂಗನಬಸವ ಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ ಒಟ್ಟು 94 ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.ಕೈಗಾರಿಕೆ ಬೆಳವಣಿಗೆಯ ಮೂಲಕ ಉತ್ತರ ಕರ್ನಾಟಕದ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಇದರ ಲಾಭ ವಿಜಯಪುರ ಸೇರಿ ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಲಬುರಗಿ ಹೀಗೆ ಈ ಭಾಗದ ಹಲವು ಜಿಲ್ಲೆಗಳ ಯುವಜನರಿಗೆ ಸಿಗುತ್ತಿದೆ. ನೈಡೆಕ್ ಕಂಪನಿ ನಡೆಸಿರುವ ಕ್ಯಾಂಪಸ್ ಸಂದರ್ಶನ ಇದಕ್ಕೊಂದು ನಿದರ್ಶನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾವು ಕೈಗಾರಿಕಾ ಸಚಿವರಾದ ಬಳಿಕ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಇಲಾಖೆಯ ಮೂಲಕವೂ ಹಲವು ಉಪಕ್ರಮ ಕೈಗೆತ್ತಿಕೊಳ್ಳಲಾಗಿದೆ. ತಾವು ಕೈಗಾರಿಕಾ ಸಚಿವನಾದ ಮೇಲೆ ನೈಡೆಕ್ ಸಂಸ್ಥೆಗೆ ಧಾರವಾಡ ಸಮೀಪ ಭೂಮಿ ಒದಗಿಸಿ, ವಿದ್ಯುತ್ ಚಾಲಿತ ವಾಹನಗಳ ಮೋಟಾರು ತಯಾರಿಕೆಗೆ ಚಾಲನೆ ನೀಡಲಾಗಿದೆ. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಮಕ್ಕಳಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಸಲಹೆ ನೀಡಿದ್ದೆ. ಆ ಪ್ರಕಾರ ಸಂಸ್ಥೆಯವರು ಮಾಡಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನೈಡೆಕ್ ಸಂಸ್ಥೆಯ ಉನ್ನತಾಧಿಕಾರಿಗಳ ತಂಡ ಜೂನ್ 16 ಮತ್ತು 17ರಂದು ಎರಡು ದಿನಗಳ ಕಾಲ ಕ್ಯಾಂಪಸ್ ಸಂದರ್ಶನ ನಡೆಸಿತು. 110 ವಿದ್ಯಾರ್ಥಿಗಳು ಭಾಗವಹಿಸಿದ್ದರು. 46 ಡಿಪ್ಲೊಮಾ ಹಾಗೂ 48 ಐಟಿಐ ಪದವೀಧರರು ಆಯ್ಕೆಯಾದರು. ಇವರೆಲ್ಲರಿಗೂ ನೈಡೆಕ್ ಕಂಪನಿ ಆಕರ್ಷಕ ವೇತನ ಉದ್ಯೋಗ ನೀಡಿದೆ. ಇದಕ್ಕಾಗಿ ಕಂಪನಿಗೆ ಅಭಿನಂದನೆ ಸಲ್ಲುತ್ತವೆ ಎಂದು ಹೇಳಿದ್ದಾರೆ. ಎಲೆಕ್ಟ್ರಿಕಲ್, ಎಂಜಿನಿಯರಿಂಗ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗಗಳ ಅರ್ಹ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ನೈಡೆಕ್ ಕಂಪನಿಯ ಅಧಿಕಾರಿಗಳಾದ ಸೋಮಶೇಖರ, ಮಂಜುನಾಥ, ಚಂದನಾ ಮತ್ತು ನಿಶ್ಮಿಕಾ ಅವರು ಕ್ಯಾಂಪಸ್ ಸಂದರ್ಶನ ನಡೆಸಿದರು. ಕಾಲೇಜಿನ ಪ್ರಾಂಶುಪಾಲ ಪ್ರಭುದೇವ ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ಕುಲಕರ್ಣಿ, ಐಟಿಐ ಉದ್ಯೋಗಾಧಿಕಾರಿ ವಾಗೀಶ ಮರೀಮಠ ಕೂಡ ಸಮನ್ವಯಾಧಿಕಾರಿಗಳಾಗಿ ಇದ್ದರು ಎಂದು ತಿಳಿಸಿದ್ದಾರೆ.