1419 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಬೋಧನೆ

Published : Jun 17, 2024, 08:43 AM IST
school reopen

ಸಾರಾಂಶ

2024-25ನೇ ಸಾಲಿನಿಂದಲೇ ರಾಜ್ಯಾದ್ಯಂತ 75ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಿ ಆದೇಶಿಸಿದೆ.

ಬೆಂಗಳೂರು : 2024-25ನೇ ಸಾಲಿನಿಂದಲೇ ರಾಜ್ಯಾದ್ಯಂತ 75ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇರುವ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಿ ಆದೇಶಿಸಿದೆ.

ಈ ಬಾರಿಯ ಬಜೆಟ್‌ನಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ 2000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲೀಷ್‌) ತರಗತಿಗಳ ಬೋಧನೆಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು.

ಅದರಂತೆ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಹಾಲಿ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯಾನುಸಾರ ಒಂದನೇ ತರಗತಿಯಿಂದ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷ ಮಾಧ್ಯಮ) ಪ್ರಾರಂಭಿಸಲು ಈ ಹಿಂದೆ ನಿಗದಿಪಡಿಸಿದ ಮಾನದಂಡಗಳಂತೆ ಜಿಲ್ಲೆ, ತಾಲ್ಲೂಕುವಾರು ಪ್ರಸ್ತಾವನೆಗಳನ್ನು ಪಡೆದು ಪರಿಶೀಲಿಸಿ ವರದಿ ಸಲ್ಲಿಸಲು ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿತ್ತು.

ಅದರಂತೆ ಎಲ್ಲ ಜಿಲ್ಲಾ ಡಿಡಿಪಿಐ ಮತ್ತು ಬಿಇಒಗಳಿಂದ ಪಡೆದ ಪ್ರಸ್ತಾವನೆ ಪರಿಶೀಲಿಸಿ ಒಟ್ಟು 1419 ಶಾಲೆಗಳಲ್ಲಿ 2024-25ನೇ ಸಾಲಿನಿಂದ ಕನ್ನಡ/ ಇತರೆ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮ (ದ್ವಿಭಾಷಾ) ತರಗತಿಗಳನ್ನು ಪ್ರಾರಂಭಿಸಲು ಶಿಫಾರಸು ಮಾಡಿದ್ದರು. ಈ ಶಿಫಾರಸು ಪರಿಶೀಲಿಸಿದ ಸರ್ಕಾರ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಷರತ್ತು ಬದ್ಧ ಅನುಮತಿ ನೀಡಿದೆ.

ಆಯ್ಕೆಯಾಗಿರುವ ಶಾಲೆಗಳ ಪೈಕಿ ಕಲಬುರಗಿ ಪ್ರಾದೇಶಿಕ ವಿಭಾಗದ 872, ಬೆಂಗಳೂರು ವಿಭಾಗದ 297, ಮೈಸೂರು ವಿಭಾಗದ 140 ಮತ್ತು ಧಾರವಾಡ ವಿಭಾಗದ 110 ಶಾಲೆಗಳಿವೆ.

 ಷರತ್ತುಗಳು 

 2019-20ನೇ ಸಾಲಿನಲ್ಲಿ ಮೊದಲ ಬಾರಿಗೆ 1000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ತರಗತಿಗಳನ್ನು ಪ್ರಾರಂಭಿಸಲು ಅಂದಿನ ಸರ್ಕಾರ ಅನುಮತಿ ನೀಡಿತ್ತು. ಆ ವೇಳೆ ವಿಧಿಸಿದ್ದ ಷರತ್ತುಗಳನ್ನೇ ಅನುಸರಿಸಲು ಸರ್ಕಾರ ಸೂಚಿಸಿದೆ.

ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಮಾತ್ರ ಆಂಗ್ಲ ಮಾಧ್ಯಮ ಬೋಧನೆಯನ್ನು ಆರಂಭಿಸಿ ಮುಂದಿನ ಸಾಲಿನಿಂದ ಮುಂದಿನ ತರಗತಿಗೆ ವಿಸ್ತರಿಸಬೇಕು. ಇಂಗ್ಲಿಷ್‌ ಮತ್ತು ಗಣಿತ ವಿಷಯಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಅನುಸರಿಸಬೇಕು. ಕನ್ನಡ ಮತ್ತು ಪರಿಸರ ಅಧ್ಯಯನಕ್ಕೆ ರಾಜ್ಯ ಪಠ್ಯ ಪಠ್ಯಕ್ರಮದ ಪುಸ್ತಕ ಬೋಧಿಸಬೇಕು. ಈ ಪೈಕಿ ಗಣಿತ ಮತ್ತು ಪರಿಸರ ಅಧ್ಯಯನ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಅಳವಡಿಸಿಕೊಳ್ಳಬೇಕು. ಆಂಗ್ಲ ಮಾಧ್ಯಮಕ್ಕೆ ಆಯ್ಕೆಯಾಗಿರುವ ಶಾಲೆಗಳ ತಲಾ ಒಬ್ಬ ಶಿಕ್ಷಕರನ್ನು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಪ್ರಾದೇಶಿಕ ಆಂಗ್ಲ ಭಾಷಾ ತರಗಬೇತಿ ಸಂಸ್ಥೆಗೆ 15 ದಿನಗಳ ತರಬೇತಿಗೆ ಕಳುಹಿಸಬೇಕು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ
ಅಭಿವೃದ್ಧಿ ಪಥದತ್ತ ದೇವನಹಳ್ಳಿ ತಾಲೂಕು