ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧ 600ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಬೇನಾಮಿ ಹೆಸರಲ್ಲಿರುವುದನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮತ್ತಷ್ಟು ಅಕ್ರಮಗಳನ್ನು ಬಯಲು ಮಾಡಿದ್ದು, 600ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಬೇನಾಮಿ ಹೆಸರಲ್ಲಿರುವುದನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಡಾ ಹಗರಣದಲ್ಲಿ 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ.
ಬೇನಾಮಿ ಹೆಸರಲ್ಲಿ ಸ್ಥಿರಾಸ್ತಿ ಮಾಡಿರುವ ಕುರಿತು ತನಿಖೆ ವೇಳೆ ಗೊತ್ತಾಗಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಇ.ಡಿ. ಅಧಿಕಾರಿಗಳು ಮುಡಾದಿಂದ ಮಾಹಿತಿ ಕೋರಿದ್ದಾರೆ. ಈ ಸಂಬಂಧ ಪತ್ರ ಬರೆದು ಮಾಹಿತಿ ಒದಗಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ತನಿಖೆ ವೇಳೆ ಸುಮಾರು 600ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಬೇನಾಮಿ ಹೆಸರಲ್ಲಿರುವುದು ತಿಳಿದುಬಂದಿದೆ. ಹೀಗಾಗಿ ಯಾರ ಹೆಸರಲ್ಲಿ ಎಷ್ಟು ಸ್ಥಿರಾಸ್ತಿಗಳಿವೆ ಎಂಬ ಮಾಹಿತಿ ಕಲೆಹಾಕಲು ಇ.ಡಿ. ಮುಂದಾಗಿದೆ. ಮುಡಾ ಮಾಜಿ ಆಯುಕ್ತರ ಹೆಸರಲ್ಲಿ ಸೇರಿ ರಿಯಲ್ ಎಸ್ಟೇಟ್ ಏಜೆಂಟ್, ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಲಾಗಿದೆ. ತನಿಖೆ ವೇಳೆ ಮೇಲ್ನೋಟಕ್ಕೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಮುಡಾಗೆ ಇ.ಡಿ. ಅಧಿಕಾರಿಗಳು ಕೋರಿದ್ದಾರೆ ಎನ್ನಲಾಗಿದೆ.
ಇದು ಹಳೇ ಮೈಸೂರು ಭಾಗದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಏಜೆಂಟರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಪೂರ್ಣ ಮಾಹಿತಿಗಾಗಿ ಕೋರಿಕೆ:
ಮುಡಾ ನಿವೇಶನಗಳನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಲಾಗಿದೆ ಮತ್ತು ಯಾವ ಸಮಯದಲ್ಲಿ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಇ.ಡಿ. ಕೋರಿದೆ. ಅಲ್ಲದೆ, ಯಾರಿಗೆ, ಯಾವ ಕಾಲದಲ್ಲಿ ಎಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದೆ ಎಂದು ಹೇಳಲಾಗಿದೆ.