ಮೈಸೂರು ಭೇಟಿಗೆ ಹತ್ಯೆ ಪ್ರಕರಣದಲ್ಲಿ ಜಾಮೀನು ಮೇಲಿರುವ ನಟ ದರ್ಶನ್‌ಗೆ ಕೋರ್ಟ್‌ನಿಂದ 3ನೇ ಬಾರಿ ಅವಕಾಶ

ಸಾರಾಂಶ

ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೇಲಿರುವ ನಟ ದರ್ಶನ್‌ಗೆ ಮೈಸೂರಿಗೆ ಹೋಗಲು ಮತ್ತೆ ಅನುಮತಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶಿಸಿದೆ.

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೇಲಿರುವ ನಟ ದರ್ಶನ್‌ಗೆ ಮೈಸೂರಿಗೆ ಹೋಗಲು ಮತ್ತೆ ಅನುಮತಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶಿಸಿದೆ.

ಜ.24ರಿಂದ ಫೆ.24ರವರೆಗೆ ಮೈಸೂರು, ಧರ್ಮಸ್ಥಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲು ದರ್ಶನ್‌ಗೆ ಅನುಮತಿ ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಜ.28ರಿಂದ ಫೆ.10ರವರೆಗೆ ಮೈಸೂರಿಗೆ ತೆರಳಿ ತನ್ನ ವೈದ್ಯರನ್ನು ಭೇಟಿ ಮಾಡಲು, ಫಾರ್ಮ್‌ ಹೌಸ್‌ ಹಾಗೂ ತಾಯಿ ಮನೆಯಲ್ಲಿ ನೆಲೆಸಲು ಅನುಮತಿ ನೀಡುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನು ತಿರಸ್ಕರಿಸುವಂತೆ ತನಿಖಾಧಿಕಾರಿಗಳ ಪರ ವಕೀಲರು ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಜ.28ರಿಂದ ಫೆ.10ರವರೆಗೆ ಕೇವಲ ಮೈಸೂರಿಗೆ ಪ್ರಯಾಣಿಸಲು ದರ್ಶನ್‌ಗೆ ಅನುಮತಿ ನೀಡಿ ಆದೇಶಿಸಿತು.

ಈ ಮೂಲಕ ಮೂರನೇ ಬಾರಿ ಮೈಸೂರಿಗೆ ತೆರಳಲು ನ್ಯಾಯಾಲಯ ಅನುಮತಿಸಿದೆ. ಈ ಹಿಂದೆ ಎರಡು ಬಾರಿಗೆ ಮೈಸೂರಿಗೆ ತೆರಲು ದರ್ಶನ್‌ಗೆ ನ್ಯಾಯಾಲಯ ಅನುಮತಿಸಿ ಆದೇಶಿಸಿತ್ತು.

Share this article