ಅಕ್ಕಿಕಾಳು ಗಾತ್ರದ ಮೋದಿ ಚಿತ್ರ ರಚಿಸಿದ ಕಲಾವಿದ

ಸಾರಾಂಶ

ಭಾರತದ ಪ್ರಧಾನಿಯಾಗಿ ಭಾನುವಾರ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನ ಸೂಕ್ಷ್ಮ ಕುಸುರಿಯ ಕಲಾವಿದರೊಬ್ಬರು ಅಕ್ಕಿಕಾಳು ಗಾತ್ರದಲ್ಲಿ ಮೋದಿಯ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ.

ಮಂಗಳೂರು :  ಭಾರತದ ಪ್ರಧಾನಿಯಾಗಿ ಭಾನುವಾರ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನ ಸೂಕ್ಷ್ಮ ಕುಸುರಿಯ ಕಲಾವಿದರೊಬ್ಬರು ಅಕ್ಕಿಕಾಳು ಗಾತ್ರದಲ್ಲಿ ಮೋದಿಯ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರಧಾನಿ ಮೋದಿಗೆ ಅರ್ಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಕಾಸರಗೋಡಿನ ವೆಂಕಟೇಶ್‌ ಆಚಾರ್ಯ ಎಂಬುವರೇ ಈ ಗಮನಾರ್ಹ ಸಾಧನೆ ಮಾಡಿದ ಕಲಾವಿದ. ಕಳೆದ ಎರಡು ದಿನಗಳ ಹಿಂದೆ ಗಮ್‌ನಿಂದ ಅಕ್ಕಿಕಾಳು ಗಾತ್ರದಲ್ಲಿ ನರೇಂದ್ರ ಮೋದಿ ಚಿತ್ರ ಮೂಡಿಸಿ ಸೈ ಎನಿಸಿದ್ದಾರೆ. ಗಮ್‌ನ್ನು ಸೂಜಿಯಿಂದ ತೆಗೆದು ಅತ್ಯಂತ ಸೂಕ್ಷ್ಮವಾಗಿ ಅಕ್ಕಿಕಾಳು ಗಾತ್ರದಲ್ಲಿ ವಾಟರ್‌ ಕಲರ್‌ ಬಳಸಿ ಬಿಳಿ ಧಿರಿಸಿನ ಮೇಲೆ ಕೋಟು ಹಾಕಿದ ಮೋದಿಯನ್ನು ಚಿತ್ರಿಸಿದ್ದಾರೆ. ಇದನ್ನು ಒಂದೇ ದಿನದಲ್ಲಿ ಮಾಡಿದ್ದಾರೆ.

ಈ ಹಿಂದೆ ಇವರು ಸಾಸಿವೆ ಕಾಳಿಗಿಂತ ಸಣ್ಣದಾದ ಭಾರತದ ತ್ರಿವರ್ಣ ಧ್ವಜ ರಚನೆ, ಹತ್ತು ಮಿಲಿ ಚಿನ್ನದಲ್ಲಿ ಸ್ವಚ್ಛ ಭಾರತ್ ಲಾಂಛನ, ಒಂದು ಅಕ್ಕಿ ಕಾಳಿನಲ್ಲಿ 36 ಅಕ್ಷರ, ಒಂದು ಪೋಸ್ಟ್ ಕಾರ್ಡ್‌ನಲ್ಲಿ 6,524 ಬಾರಿ ಓಂ ನಮಃ ಶಿವಾಯ, ಬೆಂಕಿ ಕಡ್ಡಿ ತುದಿಯಲ್ಲಿ ಶಬರಿಮಲೆ ಸನ್ನಿಧಾನ...ಹೀಗೆ ಹಲವಾರು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಮೈಕ್ರೋ ಆರ್ಟಿಸ್ಟ್ ಎಂದೇ ಪರಿಚಿತರಾಗಿದ್ದಾರೆ.

ಜೊತೆಗೆ, 2015ರಲ್ಲಿ ಹಿಂದೂಸ್ತಾನ್ ವಾಟ್ಸಪ್ ಗ್ರೂಪ್‌ನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Share this article