ಕನ್ನಡ ವಿರೋಧಿ ಕಮಲ್‌ಹಾಸನ್‌ಗೆ ತ.ನಾಡು ಕಲಾವಿದರಿಂದ ಬೆಂಬಲ

Sujatha NR | Published : Jun 1, 2025 9:32 AM

ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರೂ ಕ್ಷಮೆ ಯಾಚಿಸದ ನಟ ಕಮಲ್‌ ಹಾಸನ್‌ ಅವರ ಬೆಂಬಲಕ್ಕೆ ತಮಿಳುನಾಡಿನ ಕಲಾವಿದರ ಸಂಘ ಧಾವಿಸಿದೆ.

 ಚೆನ್ನೈ: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರೂ ಕ್ಷಮೆ ಯಾಚಿಸದ ನಟ ಕಮಲ್‌ ಹಾಸನ್‌ ಅವರ ಬೆಂಬಲಕ್ಕೆ ತಮಿಳುನಾಡಿನ ಕಲಾವಿದರ ಸಂಘ ಧಾವಿಸಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ದಕ್ಷಿಣ ಭಾರತೀಯ ಕಲಾವಿದರ ಸಂಘ (ಎಸ್‌ಐಎಎ), ‘ಹಾಸನ್ ಅವರ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಅಭಿಯಾನವು ಸಿನಿ ಜಗತ್ತು ಮತ್ತು ಸಾರ್ವಜನಿಕವಾಗಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಇದನ್ನು ತಪ್ಪಿಸಲು ಅವರ ಹೇಳಿಕೆಯ ಹಿಂದಿನ ನಿಜವಾದ ಉದ್ದೇಶವನ್ನು ಪರಿಗಣಿಸಿ’ ಎಂದು ಕರ್ನಾಟಕ ಸರ್ಕಾರ ಮತ್ತು ಕನ್ನಡ ಚಿತ್ರರಂಗಕ್ಕೆ ಆಗ್ರಹಿಸಿದೆ.

‘ಕಮಲ್‌ರನ್ನು ಕನ್ನಡ ವಿರೋಧಿ ಎಂಬು ಬಿಂಬಿಸಲಾಗುತ್ತಿರುವುದು ಸ್ವೀಕಾರಾರ್ಹವಲ್ಲ. ಅವರು ಜಾತಿ, ಧರ್ಮ, ವರ್ಣ, ಪ್ರದೇಶ ಮತ್ತು ಭಾಷಾ ಗಡಿ ಮೀರಿ ಏಕತೆಯನ್ನು ಉತ್ತೇಜಿಸುತ್ತಿದ್ದಾರೆ. ಅವರ ಸಮಗ್ರತೆಯನ್ನು ಪ್ರಶ್ನಿಸುವುದರ ಅರ್ಥ, ದಶಕಗಳ ಸಾಂಸ್ಕೃತಿಕ ಏಕತೆ ಮತ್ತು ಕಲಾತ್ಮಕ ಶ್ರೇಷ್ಠತೆಯನ್ನು ಅವಮಾನಿಸಿದಂತೆ’ ಎಂದು ಎಸ್‌ಐಎಎ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಜತೆಗೆ, ಕನ್ನಡದ ದಿಗ್ಗಜ ಕಲಾವಿದರಾದ ಡಾ। ರಾಜ್‌ಕುಮಾರ್‌, ಗಿರೀಶ್‌ ಕಾರ್ನಾಡ್‌ ಅವರೊಂಗಿನ ಹಾಸನ್‌ರ ಬಾಂಧವ್ಯವನ್ನೂ ನೆನಪಿಸಿದೆ.

‘ಥಗ್‌ ಲೈಫ್‌’ ಚಿತ್ರ ಪ್ರಚಾರದ ವೇಳೆ ತಮಿಳು ಭಾಷೆಯು ಕನ್ನಡದ ತಾಯಿ ಎಂಬ ಅರ್ಥ ಬರುವಂತೆ ಹೇಳಿಕೆ ನೀಡಿದ್ದ ಕಮಲ್‌ ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಅವರ ಚಿತ್ರದ ಪ್ರದರ್ಶನವನ್ನು ಬ್ಯಾನ್‌ ಮಾಡುವಂತೆಯೂ ಆಗ್ರಹಿಸಲಾಗುತ್ತಿದೆ.

Read more Articles on