;Resize=(412,232))
ಬೆಂಗಳೂರು : ಫ್ರೀಡಂ ಹಬ್ಬಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಡಿಸೆಂಬರ್ನಲ್ಲಿ ಹಾಗೂ ಮುಂದಿನ ವರ್ಷ ಮತ್ತಷ್ಟು ಅದ್ಧೂರಿಯಾಗಿ ‘ಬೆಂಗಳೂರು ಹಬ್ಬ’ವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಪ್ರೀಡಂ ಹಬ್ಬ ಅಂಗವಾಗಿ ವಿಧಾನಸೌಧ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾವಂತ ಯುವ ಸಮುದಾಯಕ್ಕೆ ಇಂತಹ ವೇದಿಕೆ ಮೇಲೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಎರಡು ಬಾರಿ ಬೆಂಗಳೂರು ಹಬ್ಬ ಆಚರಿಸಲು ನಮ್ಮ ಸರ್ಕಾರ ಪ್ಲಾನ್ ಮಾಡುತ್ತಿದೆ. ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಡಲಾಗುತ್ತದೆ ಎಂದರು.
ಇದು ನವಯುಗ. ಯುವ ಸಮುದಾಯದ ಯುಗವಾಗಿದೆ. ನಮ್ಮ ಕರ್ನಾಟಕ, ಯುವ ಕರ್ನಾಟಕವಾಗಿದೆ. ನಿಮ್ಮನ್ನು ಇಡೀ ದೇಶವೇ ನೋಡುತ್ತಿದೆ. ನಾವೆಲ್ಲ ಸಂತೋಷದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ವಿಶ್ವದ ಹೃದಯ ಬೆಂಗಳೂರು ನಗರ. ಬೆಂಗಳೂರಿನ ಹೃದಯ ವಿಧಾನಸೌಧ. ಆ ವಿಧಾನಸೌಧದಲ್ಲಿ ಫ್ರೀಡಂ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ನುಡಿದರು.
ವಿಧಾನಸೌಧವನ್ನು ಜನರ ಸೌಧ ಆಗಿಸಬೇಕು. ಅದಕ್ಕಾಗಿ ಎಲ್ಲರಿಗೂ ಪ್ರವೇಶ ನೀಡಬೇಕು. ಫ್ರೀಡಂ ಹಬ್ಬಕ್ಕೆ ವಿಧಾನಸೌಧಕ್ಕೆ ಲಕ್ಷಾಂತರ ಜನರಿಗೆ ಪ್ರವೇಶ ನೀಡಲು ಆಗಿಲ್ಲ. ಅವರೆಲ್ಲರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇದು ಮೊದಲ ವರ್ಷದ ಹಬ್ಬವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಭಾರತ ಜೋಡೋ ಯುವ ಸಂಘಟನೆ ಆರಂಭಿಸಲಾಗುತ್ತಿದೆ. ಪಂಚಾಯಿತಿ ಮಟ್ಟದ ಯುವ ಜನರಲ್ಲಿನ ಪ್ರತಿಭೆಯನ್ನು ಹೊರಗೆಡವಬೇಕು. ಅದಕ್ಕಾಗಿ ಇಂತಹ ವೇದಿಕೆಯಲ್ಲಿ ಅವಕಾಶ ಮಾಡಿಕೊಡುವ ಚಿಂತನೆ ಸರ್ಕಾರಕ್ಕೆ ಇದೆ. ಭವಿಷ್ಯದ ಶಕ್ತಿಯಾಗಿರುವ ಯುವ ಸಮುದಾಯ ಮುಂದೆ ಬರಬೇಕು. ಯುವ ಸಮುದಾಯವೇ ನಮ್ಮ ದೇಶದ ಶಕ್ತಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.