ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜಾತಿ ಗಣತಿ ಕುರಿತ ಪುತ್ರನ ಹೇಳಿಕೆ ಬಗ್ಗೆ ಸಿಎಂ ಸ್ಪಷ್ಟನೆ

Sujatha NR | Published : Jun 17, 2025 5:14 AM

ಎಚ್‌.ಕಾಂತರಾಜು ಆಯೋಗ ನಡೆಸಿದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಗೆ ದುರ್ಬಲ ವರ್ಗದಿಂದಲೂ ಆಕ್ಷೇಪಣೆ ವ್ಯಕ್ತವಾಗಿತ್ತು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ : ಎಚ್‌.ಕಾಂತರಾಜು ಆಯೋಗ ನಡೆಸಿದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಗೆ ದುರ್ಬಲ ವರ್ಗದಿಂದಲೂ ಆಕ್ಷೇಪಣೆ ವ್ಯಕ್ತವಾಗಿತ್ತು. ಮುಖ್ಯವಾಗಿ ಈ ವರದಿಗೆ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸದಾಗಿ ಮರುಸಮೀಕ್ಷೆ ಆಗಬೇಕು ಎಂಬುದು ಎಲ್ಲರ ಒತ್ತಾಸೆಯಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಂಡ್ಯದ ಕರಡಿಕೊಪ್ಪಲುವಿನಲ್ಲಿ ಭಾನುವಾರ ಮಾತನಾಡಿದ್ದ ಶಾಸಕ, ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ಕೆಲ ಪ್ರಬಲ ವರ್ಗಗಳ ವಿರೋಧದಿಂದಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದ್ದ ಹಿಂದಿನ ಕಾಂತರಾಜು ಆಯೋಗದ ವರದಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಒಂದು ವೇಳೆ ಇದನ್ನು ಜಾರಿಗೆ ತಂದಿದ್ದರೆ, ದೀರ್ಘಕಾಲದವರೆಗೆ ಅವಕಾಶಗಳಿಂದ ವಂಚಿತರಾಗಿದ್ದ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿ ಸಿಗುತ್ತಿತ್ತು ಎಂದಿದ್ದರು.

ಯತೀಂದ್ರ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹಿಂದಿನ ಸಮೀಕ್ಷೆಗೆ ಪ್ರಬಲ ವರ್ಗದವರೂ ಆಕ್ಷೇಪಣೆ ಮಾಡಿದ್ದಾರೆ. ದುರ್ಬಲ ವರ್ಗದವರೂ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ವರದಿಗೆ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸದಾಗಿ ಮರುಸಮೀಕ್ಷೆ ಆಗಬೇಕು ಎಂದು ದುರ್ಬಲ ವರ್ಗದವರೂ ಪ್ರತಿಪಾದಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಕಲಂ 11ರ ಪ್ರಕಾರ 10 ವರ್ಷದ ಬಳಿಕ ಹೊಸ ವರದಿ ತರಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ, ಹೊಸ ಜಾತಿಗಣತಿಗೆ ನಿರ್ಧರಿಸಲಾಗಿದೆ. ಇದಕ್ಕೆ ಹೈಕಮಾಂಡ್‌ ಕೂಡ ಸಮ್ಮತಿಸಿದೆ ಎಂದರು.

- ಕೆಲ ಪ್ರಬಲ ವರ್ಗಗಳ ವಿರೋಧದಿಂದ ಜಾತಿ ಗಣತಿ ವರದಿ ಜಾರಿ ಆಗಿರಲಿಲ್ಲ ಎಂದಿದ್ದ ಯತೀಂದ್ರ

- ಗಣತಿ ವರದಿ ಜಾರಿಯಾಗಿದ್ದರೆ ಹಿಂದುಳಿದ ವರ್ಗಗಳಿಗೆ ಹೆಚ್ಚು ಮೀಸಲಾತಿ ಸಿಗುತ್ತಿತ್ತು ಎಂದು ವಾದ

- ಪುತ್ರನ ಹೇಳಿಕೆ ಕುರಿತು ಸಿದ್ದು ಸ್ಪಷ್ಟನೆ. ದುರ್ಬಲ ವರ್ಗದಿಂದಲೂ ಆಕ್ಷೇಪ ಬಂದಿತ್ತು ಎಂದು ಹೇಳಿಕೆ

- ಜಾತಿ ಗಣತಿ ವರದಿಗೆ 10 ವರ್ಷ ಪೂರ್ಣಗೊಂಡ ಕಾರಣ ಹೊಸದಾಗಿ ಸಮೀಕ್ಷೆ ಆಗಬೇಕಿತ್ತು

- ಹೀಗಾಗಿ ಹೊಸ ಜಾತಿ ಗಣತಿ. ಇದಕ್ಕೆ ಹೈಕಮಾಂಡ್‌ನಿಂದಲೂ ಅನುಮತಿ ಎಂದು ಸ್ಪಷ್ಟನೆ

Read more Articles on