ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ ಮಾಡಲು ನಿರ್ಧಾರ : ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌

ಸಾರಾಂಶ

ಅಬಕಾರಿ ಇಲಾಖೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ ಮಾಡಲು ರಾಜ್ಯ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ನಿರ್ಧರಿಸಿದೆ.

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ ಮಾಡಲು ರಾಜ್ಯ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ನಿರ್ಧರಿಸಿದೆ.

ವರ್ಗಾವಣೆ, ಪ್ರಮೋಷನ್‌ಗೆ ಲಕ್ಷಾಂತರ ರು. ಲಂಚ ಕೊಡಬೇಕು ಎಂದು ಹೇಳಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಸನ್ನದುದಾರರಿಂದ ಮನಸೋ ಇಚ್ಛೆ ಲಂಚ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಮದ್ಯ ಮಾರಾಟಗಾರರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಕೈಗೊಂಡ ನಿರ್ಣಯದಂತೆ ನ.20 ರಂದು ಮದ್ಯ ಮಾರಾಟ ಬಂದ್‌ ಮಾಡಲು ನಿರ್ಧರಿಸಲಾಗಿದೆ.

ಅಬಕಾರಿ ಅಧಿಕಾರಿಗಳು ಲಂಚಕ್ಕಾಗಿ ಹಪಹಪಿಸುತ್ತಿರುವುದರಿಂದ ರಾಜ್ಯದಲ್ಲಿ ನಕಲಿ, ಅಂತಾರಾಜ್ಯ ಮದ್ಯ ಮಾರಾಟ ಹೆಚ್ಚಳವಾಗಿ ಅಬಕಾರಿ ಆದಾಯ ಕುಂಠಿತಗೊಂಡಿದೆ. ಅಬಕಾರಿ ಇಲಾಖೆ ಅನುದಾನ ಇಲ್ಲದೇ ಇರುವ ಇಲಾಖೆ ಆಗಿರುವುದರಿಂದ ಆರ್ಥಿಕ ಇಲಾಖೆಯ ಜವಾಬ್ದಾರಿ ಹೊಂದಿರುವ ಸಚಿವರಿಗೆ ಇದನ್ನು ವಹಿಸಬೇಕು ಎಂದು ಸಂಘ ಆಗ್ರಹಿಸಿ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದೆ.

Share this article