;Resize=(412,232))
ಬೆಳಗಾವಿ : ಅಯೋಧ್ಯೆಯಲ್ಲಿ ರಾಮ ಮಂದಿರ ಹುಂಡಿ ಕಳವು ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲಿ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಅಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ‘ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ ಸಿಎಂ, ‘ಮುಜರಾಯಿ ದೇಗುಲಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಠಾಣೆಗಳಿಗೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ’ ಎಂದರು.
‘ಹುಂಡಿ ಇರುವ ಸ್ಥಳ, ಹಣ ಎಣಿಕೆ ಸ್ಥಳ ಸೇರಿದಂತೆ ದೇವಸ್ಥಾನದ ಎಲ್ಲ ಭಾಗಗಳಲ್ಲಿ ಸಿಸಿಟೀವಿ ಹಾಕಲಾಗುತ್ತದೆ. ದೇಗುಲದ ಚಟುವಟಿಕೆಗಳ ಮೇಲೆ ದಿನದ 24 ಗಂಟೆ ನಿಗಾ ಇಡಲಾಗುತ್ತದೆ’ ಎಂದರು.
‘ಇತ್ತೀಚೆಗೆ ದೇವಾಲಯದಲ್ಲಿ ನಡೆದ ದೇಣಿಗೆ ಕಳವು ಪ್ರಕರಣ ಸರ್ಕಾರಕ್ಕೆ ಹಾಗೂ ಭಕ್ತರಿಗೆ ಮಾನಸಿಕ ಆಘಾತ ಉಂಟುಮಾಡಿದೆ. ಭಕ್ತರು ಭಕ್ತಿಭಾವದಿಂದ ಕಾಣಿಕೆ, ಹಣ ಹಾಗೂ ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಸಮರ್ಪಿಸುತ್ತಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ರಾಜ್ಯದ ಎಲ್ಲ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಗರ್ಭಗುಡಿ ಸಮೀಪ, ಕಾಣಿಕೆ ಪೆಟ್ಟಿಗೆಗಳ ಬಳಿ, ಕಾಣಿಕೆ ತೆರೆಯುವ ಸ್ಥಳ, ಹಣ ಎಣಿಕೆ ಕೊಠಡಿ ಹಾಗೂ ಹಣ ಸಂಗ್ರಹಿಸುವ ಎಲ್ಲ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಗಿದೆ. ಈ ಕ್ಯಾಮೆರಾಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಸಂಬಂಧಪಟ್ಟ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ವ್ಯವಸ್ಥೆಗೆ ನೇರವಾಗಿ ಸಂಪರ್ಕಿಸಲಾಗುವುದು. ಟ್ರಾಫಿಕ್ ನಿಯಂತ್ರಣ ಕೊಠಡಿಯ ಮಾದರಿಯಲ್ಲೇ ದೇವಾಲಯಗಳ ಮೇಲ್ವಿಚಾರಣೆಗೆ ಡ್ಯಾಶ್ಬೋರ್ಡ್ ವ್ಯವಸ್ಥೆ ರೂಪಿಸಲಾಗುವುದು. ಕಾಣಿಕೆ ಪೆಟ್ಟಿಗೆ ತೆರೆಯುವಾಗ, ಹಣ ಎಣಿಸುವಾಗ, ಹಣ ಸಂಗ್ರಹಿಸುವಾಗ ಹಾಗೂ ಮುಚ್ಚುವ ಪ್ರಕ್ರಿಯೆ ಸೇರಿದಂತೆ ಎಲ್ಲ ಹಂತಗಳ ಮೇಲೆ 24 ಗಂಟೆಯೂ ನಿಗಾ ಇರಲಿದೆ’ ಎಂದು ತಿಳಿಸಿದರು.
ರಾಮಮಂದಿರದ ದೇಣಿಗೆ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ವಿಷಯದ ಬಗ್ಗೆ ವಿವಿಧ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಕರ್ನಾಟಕದಲ್ಲಿಯೂ ಸಂಗ್ರಹಿಸಿದ ಕಾಣಿಕೆ ಹಣದ ಬಗ್ಗೆ ಕೆಲವು ಆರೋಪಗಳು ಕೇಳಿಬಂದಿದ್ದು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ’ ಎಂದರು.