ಬೈಕ್‌ ಟ್ಯಾಕ್ಸಿ ರದ್ದತಿ ಹಿಂಪಡೆಯಲು ಆಗ್ರಹಿಸಿ ಚಾಲಕರಿಂದ ಪ್ರತಿಭಟನೆ

Sujatha NRPublished : Jun 30, 2025 9:27 AM

ಬೈಕ್ ಟ್ಯಾಕ್ಸಿಗಳ ನಿಷೇಧ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದರು.

 ಬೆಂಗಳೂರು :  ಬೈಕ್ ಟ್ಯಾಕ್ಸಿಗಳ ನಿಷೇಧ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಪರವಾನಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜ್ಞಾನ ಜ್ಯೋತಿ ಅಡಿಟೋರಿಯಂ ಮುಂಭಾಗದಲ್ಲಿ ಬೈಕ್‌ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು. ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ದಾವಣಗೆರೆ ಮತ್ತು ರಾಮನಗರಗಳಿಂದ ಬಂದಿದ್ದವರು ಹೋರಾಟಕ್ಕೆ ಸಾಥ್‌ ನೀಡಿದರು.

ಹಲವು ವರ್ಷಗಳಿಂದ ಬೈಕ್ ಟ್ಯಾಕ್ಸಿಯಿಂದ ಜೀವನ ನಡೆಸುತ್ತಿದ್ದೇವೆ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಅವು ಜನರಿಗೆ ಟ್ರಾಫಿಕ್ ಒತ್ತಡ ನಿವಾರಿಸಲು ಮತ್ತು ತ್ವರಿತವಾಗಿ ಅಗತ್ಯವಿದ್ದ ಕಡೆಗೆ ಸಂಚರಿಸಲು ನೆರವಾಗುತ್ತವೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅವು ಬೇರೆ ಉದ್ಯೋಗಗಳಿಲ್ಲದ ಯುವಜನರಿಗೆ ಏಕೈಕ ಆದಾಯದ ಮೂಲವಾಗಿದೆ. ಇದರ ಮೂಲಕ ನಾವು ನಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟುತ್ತೇವೆ, ನಮ್ಮ ಪೋಷಕರ ಆರೈಕೆ ಮಾಡುತ್ತೇವೆ ಮತ್ತು ನಮ್ಮ ಉಳಿವಿಗೆ ಆಹಾರ ಗಳಿಸುತ್ತೇವೆ. ಈ ಕೆಲಸವಿಲ್ಲದೆ ನಮಗೆ ಏನೂ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಈ ನಿಷೇಧವು ರೈಡರ್ ಗಳಿಗೆ ತೀವ್ರ ಹಾನಿಯುಂಟು ಮಾಡಿದೆ. ಹಲವಾರು ಮಂದಿ ಉಳಿಸಿದ ಹಣವನ್ನು ಖಾಲಿ ಮಾಡಿಕೊಂಡಿದ್ದಾರೆ ಮತ್ತು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ತಕ್ಷಣವೇ ರದ್ದತಿ ಹಿಂಪಡೆದು ಸರ್ಕಾರ, ರೈಡರ್‌ಗಳು, ಪ್ಲಾಟ್ ಫಾರಂ ಮತ್ತು ಪ್ರಯಾಣಿಕರಿಗೆ ಉಪಯುಕ್ತವಾಗುವ ನ್ಯಾಯಯುತ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು. 

Read more Articles on