ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

5 ‘ಕೈ’ ಶಾಸಕ, ಓರ್ವ ಸಂಸದಗೆ ಇ.ಡಿ. ಶಾಕ್‌!

Sujatha NR | Published : Jun 12, 2025 4:08 AM

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬುಧವಾರ ಕಾಂಗ್ರೆಸ್ಸಿನ ಐವರು ಶಾಸಕರು ಹಾಗೂ ಬಳ್ಳಾರಿ ಸಂಸದ ಈ.ತುಕಾರಾಂ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಭಾರಿ ಶಾಕ್‌

  ಬಳ್ಳಾರಿ/ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬುಧವಾರ ಕಾಂಗ್ರೆಸ್ಸಿನ ಐವರು ಶಾಸಕರು ಹಾಗೂ ಬಳ್ಳಾರಿ ಸಂಸದ ಈ.ತುಕಾರಾಂ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಭಾರಿ ಶಾಕ್‌ ನೀಡಿದ್ದಾರೆ. ಬೆಂಗಳೂರಿನ ಮೂರು, ಬಳ್ಳಾರಿ-ವಿಜಯನಗರ ಜಿಲ್ಲೆಯ ಐದು ಸೇರಿ ಒಟ್ಟು 8 ಕಡೆ ದಾಳಿ ನಡೆಸಲಾಗಿದೆ. ಬೆಳಗ್ಗೆ 6ಕ್ಕೆ ಆರಂಭವಾದ ದಾಳಿ ರಾತ್ರಿ 9.30ಕ್ಕೆ ಮುಕ್ತಾಯಗೊಂಡಿದೆ,

ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರ ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ರೈನ್‌ ಟ್ರಿ ಬುಲೇವಾರ್ಡ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌, ಶಾಸಕರ ಭವನದ ನಾಲ್ಕನೇ ಮಹಡಿಯ ನಾಗೇಂದ್ರ ಅವರ ಕೊಠಡಿ ಸಂಖ್ಯೆ 360, ಬಳ್ಳಾರಿಯ ನೆಹರು ಕಾಲನಿಯಲ್ಲಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿಯ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕ ಜೆ.ಎನ್. ಗಣೇಶ್ ಅವರ ನಿವಾಸ ಹಾಗೂ ಸಂಡೂರಿನ ಅಶೋಕ ಕಾಲನಿಯಲ್ಲಿರುವ ಬಳ್ಳಾರಿ ಸಂಸದ ಈ.ತುಕಾರಾಂ ಹಾಗೂ ಅವರ ಪತ್ನಿ ಸಂಡೂರು ಶಾಸಕಿ ಈ.ಅನ್ನಪೂರ್ಣ ಅವರ ನಿವಾಸ, ಸಂಸದರ ಬೆಂಗಳೂರಿನ ಜಯನಗರ ನಿವಾಸ, ವಿಜಯನಗರ ಜಿಲ್ಲೆ ಕೂಡ್ಲಿಗಿ ಶಾಸಕ ಡಾ.ಎನ್‌.ಟಿ. ಶ್ರೀನಿವಾಸ್‌ ಅವರ ನರಸಿಂಹನಗಿರಿ ಗ್ರಾಮದ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ವಾಲ್ಮೀಕಿ ನಿಗಮದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಈ ಹಿಂದೆ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು, ಅಲ್ಲಿ ದೊರೆತ ಕೆಲವು ದಾಖಲೆಗಳನ್ನು ಆಧರಿಸಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸಿಆರ್‌ಪಿಎಫ್‌ ಯೋಧರ ಭದ್ರತೆಯಲ್ಲಿ ಆಗಮಿಸಿದ ತಂಡ, ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರ ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ರೈನ್‌ ಟ್ರಿ ಬುಲೇವಾರ್ಡ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌, ಶಾಸಕರ ಭವನದ ನಾಲ್ಕನೇ ಮಹಡಿಯ ನಾಗೇಂದ್ರ ಅವರ ಕೊಠಡಿ ಸಂಖ್ಯೆ 360, ತುಕಾರಾಂ ಅವರ ಜಯನಗರ ನಿವಾಸಗಳ ಮೇಲೆ ದಾಳಿ ನಡೆಸಿತು.

ಇದೇ ವೇಳೆ, ಬೆಳಗ್ಗೆ 6 ಗಂಟೆಗೆ ಬಳ್ಳಾರಿಗೆ 2 ಕಾರುಗಳಲ್ಲಿ ಆಗಮಿಸಿದ 10 ಅಧಿಕಾರಿಗಳ ತಂಡ, ಶಾಸಕ, ಸಂಸದರ ಮನೆಗಳ ಮೇಲೆ ದಾಳಿ ನಡೆಸಿತು. ಸಂಡೂರಿನ ಈ.ತುಕಾರಾಂ ಹಾಗೂ ಶಾಸಕಿ ಅನ್ನಪೂರ್ಣ ತುಕಾರಾಂ ಅವರ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು, ಇಬ್ಬರನ್ನೂ ಪ್ರತ್ಯೇಕವಾಗಿ ಕರೆದು, ವಿಚಾರಣೆ ನಡೆಸಿದರು. ನಾಗೇಂದ್ರ ಅವರ ಪಿಎ ಬಳಿ ಸಿಕ್ಕ ಚೀಟಿ ಆಧಾರವಾಗಿಟ್ಟುಕೊಂಡು ತುಕಾರಾಂ ಅವರನ್ನು ವಿಚಾರಣೆಗೊಳಪಡಿಸಿದರು ಎಂದು ತಿಳಿದು ಬಂದಿದೆ.

ಈ ಮಧ್ಯೆ, ಕೂಡ್ಲಿಗಿ ಶಾಸಕ ಎನ್‌.ಟಿ.ಶ್ರೀನಿವಾಸ್‌ ಕೆಲಸದ ನಿಮಿತ್ತ ತುಮಕೂರಿಗೆ ಹೋಗಿದ್ದು, ಅವರ ತಾಯಿ ಮತ್ತು ಮನೆ ಕೆಲಸದವರು ಮನೆಯಲ್ಲಿದ್ದರು. ದಾಳಿ ವೇಳೆ, ಮನೆಯೊಳಗೆ ಜನರ ಪ್ರವೇಶ ನಿಷೇಧಿಸಲಾಗಿತ್ತು. ನಂತರ ಮಧ್ಯಾಹ್ನದ ವೇಳೆಗೆ ಶಾಸಕರು ಆಗಮಿಸಿ ಅಧಿಕಾರಿಗಳೊಂದಿಗೆ ತನಿಖೆಗೆ ಸಹಕರಿಸಿದರು.

ಶಾಸಕರು, ಸಂಸದರ

ಮೇಲೆ ದಾಳಿ ಏಕೆ?

‘2024ರ ಬಳ್ಳಾರಿ ಲೋಕಸಭಾ ಚುನಾವಣೆ ವೆಚ್ಚಕ್ಕಾಗಿ ವಾಲ್ಮೀಕಿ ನಿಗಮದ 20.19 ಕೋಟಿ ರು.ಗಳನ್ನು ಮಾಜಿ ಸಚಿವ ಬಿ. ನಾಗೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಖರ್ಚಿನ ಜೊತೆಗೆ ವೈಯಕ್ತಿಕ ಬಳಕೆಗೆ ವಿನಿಯೋಗಿಸಿಕೊಂಡಿದ್ದಾರೆ. ವಿವಿಧ ಬ್ಯಾಂಕ್‌ಗಳಿಗೆ ನಿಗಮದ ಹಣವನ್ನು ವರ್ಗಾವಣೆ ಮಾಡಿಕೊಂಡು, ಬೂತ್‌ ಮಟ್ಟದಲ್ಲಿ ಹಂಚಿಕೆ ಮಾಡಲಾಗಿದೆ. ನಾಗೇಂದ್ರ ಸೂಚನೆ ಮೇರೆಗೆ ಕಾಂಗ್ರೆಸ್‌ ಅಭ್ಯರ್ಥಿ ಇ.ತುಕಾರಾಂ, ಬಳ್ಳಾರಿಯ ಮೂವರು ಶಾಸಕರಾದ ಜೆ.ಎನ್‌.ಗಣೇಶ್‌, ಭರತ್‌ ರೆಡ್ಡಿ, ಎನ್‌.ಟಿ.ಶ್ರೀನಿವಾಸ್‌ಗೆ ಒಟ್ಟು ಸುಮಾರು 20.19 ಕೋಟಿ ರು. ಹಣ ಹಂಚಿಕೆಯಾಗಿದೆ’ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಸಿಐಡಿ ತನಿಖೆ ನಡೆಸಿ, ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಬಸವರಾಜ ದದ್ದಲ್‌ ಹೆಸರು ಕೈಬಿಟ್ಟು 12 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೇ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಇ.ಡಿ., ಬಿ. ನಾಗೇಂದ್ರರನ್ನು ಬಂಧಿಸಿತ್ತು. ತನಿಖೆ ವೇಳೆ ಬಿ. ನಾಗೇಂದ್ರ ಅವರ ಆಪ್ತ ಸಹಾಯಕ ಗೋವರ್ಧನ ಬಳಿ ಸಿಕ್ಕಿ ಡೈರಿಯಲ್ಲಿ ಹಣದ ವ್ಯವಹಾರದ ಬಗ್ಗೆ ದಾಖಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ನಾಗೇಂದ್ರ ಪಿಎ ಬಳಿ ಚೀಟಿ ಆಧರಿಸಿ ವಿಚಾರಣೆ

ಈ ಹಿಂದೆ ನಾಗೇಂದ್ರ ಅವರ ಮೇಲೆ ದಾಳಿ ನಡೆದಾಗ ಅವರ ಪಿಎ ಬಳಿ ಚೀಟಿಯೊಂದು ಸಿಕ್ಕಿತ್ತು. ಅದರಲ್ಲಿ ಖರ್ಚು ವೆಚ್ಚಕ್ಕೆ ಸಂಬಂಧಿಸಿದ ಕೈ ಬರಹವಿತ್ತು. ಈ ಚೀಟಿ ನಾಗೇಂದ್ರ ಅವರ ಮೊಬೈಲ್‌ಗೆ ಕಳಿಸಲಾಗಿತ್ತು. ಈ ಚೀಟಿ ಆಧಾರವಾಗಿಟ್ಟುಕೊಂಡು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Read more Articles on