;Resize=(412,232))
ಬೆಂಗಳೂರು : ಧ್ವನಿ ಇಲ್ಲದವರಿಗೆ ಶಕ್ತಿ ನೀಡಿ ಸಮ ಸಮಾಜ ಪರಿಕಲ್ಪನೆಗೆ ಜೀವತುಂಬಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು ಬಸವಣ್ಣ. ಇಂದಿರಾ ಗಾಂಧಿಯವರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲೇ ನಡೆದಿದ್ದು, ಇಂದಿರಾಗಾಂಧಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ದಿ.ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮ ಸಮಾಜ ಪರಿಕಲ್ಪನೆಗೆ ಜೀವ ತುಂಬಿದ್ದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಬಸವಣ್ಣನವರ ಹಾದಿಯಲ್ಲೇ ನಡೆದು ಇಂದಿರಾಗಾಂಧಿ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶ ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.
ಇಂದಿರಾ ಗಾಂಧಿಯವರು ದಿಟ್ಟ ಮಹಿಳೆ. ಬಾಂಗ್ಲಾದೇಶದ ವಿಮೋಚನಾ ಸಂದರ್ಭದಲ್ಲಿ ವಾಜಪೇಯಿಯವರೇ ಇಂದಿರಾಗಾಂಧಿ ಅವರನ್ನು ದುರ್ಗೆ ಎಂದಿದ್ದರು. ಪಾಕಿಸ್ತಾನದ 90 ಸಾವಿರ ಸೈನಿಕರನ್ನು ಸೆರೆ ಹಿಡಿದು ಪಾಕಿಸ್ತಾವನ್ನು ಸಂಪೂರ್ಣವಾಗಿ ಸೋಲಿಸಿದ್ದರು ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ದೀರ್ಘ ಕಾಲದವರೆಗೆ ದೇಶವನ್ನಾಳಿದ ಕೀರ್ತಿ ಇಂದಿರಾಗಾಂದಿ ಅವರಿಗೆ ಸಲ್ಲುತ್ತದೆ. ಇಂದಿರಾಗಾಂಧಿಯವರ ಕಾಲಘಟ್ಟದಲ್ಲಿ ಬಡವರ ಸಂಖ್ಯೆ ಹೆಚ್ಚಿತ್ತು. ಆದ್ದರಿಂದ ಬಡತನ ಹೋಗಲಾಡಿಸಲು ಗರೀಬಿ ಹಠಾವೋ ಸೇರಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದರು. ಹೀಗಾಗಿ ಈಗ ಬಡತನ ಕಡಿಮೆ ಆಗಿದೆ ಎಂದು ತಿಳಿಸಿದರು.
ವಲ್ಲಭಭಾಯಿ ಪಟೇಲರು ದೇಶದ ಉಪಪ್ರಧಾನಿ ಅಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಅಗ್ರಗಣ್ಯರು. ಸ್ವಾತಂತ್ರ್ಯ ಗಳಿಸಿದಾಗ ದೇಶದಲ್ಲಿ 562 ಸಂಸ್ಥಾನಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಸಲು ಅವರ ಪ್ರಯತ್ನವೇ ಕಾರಣ. ಹೀಗಾಗಿಯೇ ಅವರನ್ನು ಉಕ್ಕಿನ ಮನುಷ್ಯ ಎನ್ನುತ್ತಾರೆ. ಹೆಡ್ಗೆವಾರ್, ಸಾವರ್ಕರ್, ಗೋಲ್ವಾಲ್ಕರ್ ಇವರಾರೂ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಬದಲಿಗೆ ಸಂವಿಧಾನ ವಿರೋಧಿಸಿದ್ದರು ಎಂದು ಹೇಳಿದರು.
ಸಚಿವ ಎಚ್.ಸಿ. ಮಹದೇವಪ್ಪ, ಪರಿಷತ್ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಹಾಗೂ ಚಂದ್ರಪ್ಪ ಹಾಜರಿದ್ದರು.