ದೊಡ್ಡಬಳ್ಳಾಪುರ: ರೈತರಿಗೆ ನೀಡುವ ಹಾಲಿದ ದರ ಹೆಚ್ಚಳ ಕುರಿತು ಪರಿಶೀಲನೆ ಹಂತದಲ್ಲಿದ್ದು, ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ತಾಲೂಕು ಮಟ್ಟದ ರಾಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಮತ್ತು ಎಂಪಿಸಿಎಸ್ ಸಂಘದ 50ನೇ ವರ್ಷದ ಸಂಭ್ರಮದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು, ಸ್ವಾಭಿಮಾನದಿಂದ ಜೀವಿಸಲು ಹೈನುಗಾರಿಕೆ ಸ್ಪೂರ್ತಿದಾಯಕ. ದೇಶದಲ್ಲಿ ನಂದಿನಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ರುಚಿ, ಬೆಲೆ, ತೂಕ ಸೇರಿದಂತೆ ಗುಣಮಟ್ಟಕ್ಕೆ ನಂಬಿಕಾರ್ಹವಾಗಿದೆ. ರೈತರು ಹೈನುಗಾರಿಕೆಗೆ ಆದ್ಯತೆ ನೀಡಿ ಗುಣಮಟ್ಟದ ಹಾಲನ್ನು ನೀಡಬೇಕು ಎಂದರು.ರಾಜ್ಯಕ್ಕೆ ಹೋಲಿಸಿದರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು ಇದೆ. ತಾಲೂಕಿನಲ್ಲಿ ಈ ಹಿಂದೆ ಪ್ರತಿ ದಿನ 1.8 ಲಕ್ಷ ಲೀಟರನಷ್ಟು ಹಾಲು ಸಂಗ್ರಹಿಸಲಾಗುತಿತ್ತು. ಆದರೆ, ಈಗ 1.5 ಲಕ್ಷ ಲೀಟರನಷ್ಟು ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಕಾರಣ ರೈತರು ವ್ಯವಸಾಯದಿಂದ ದೂರ ಉಳಿಯುತ್ತಿರುವುದು. ಹೈನುಗಾರಿಕೆಯಿಂದ ನಷ್ಟ ಸಂಭವಿಸುವ ಭಾವನೆಯಲ್ಲಿ ಹೊತ್ತು ಮುಂದಿನ ಪೀಳಿಗೆಗೆ ಉತ್ತೇಜನ ನೀಡದಿರುವುದು ಎಂದು ಅಭಿಪ್ರಾಯಪಟ್ಟರು.
ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತ, ಉದ್ಯೋಗದಾತರಾಗಿ, ಅನ್ನದಾತರಾಗಿ, ಯಶಸ್ವಿಯಾಗಿ ಜೀವಿಸುವ ಸ್ವಾತಂತ್ರ್ಯ ಕೃಷಿ ಕ್ಷೇತ್ರದಲ್ಲಿ ಕಾಣಬಹುದು ಎಂದ ಅವರು, ಮುಂದಿನ 3 ತಿಂಗಳಿನಲ್ಲಿ 1 ಲಕ್ಷ ರಬ್ಬರ್ ಮ್ಯಾಟ್ ಗಳನ್ನು ವಿತರಿಸಲಾಗುವುದು. ಇನ್ನುಳಿದ 80 ಸಾವಿರ ರಬ್ಬರ್ ಮ್ಯಾಟ್ ಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.ಹುದ್ದೆ ಆಕಾಂಕ್ಷೆಗಿಂತ ರೈತರ ಹಿತ ಮುಖ್ಯ:
ಕೆಎಂಎಫ್ ಅಧ್ಯಕ್ಷ ಗಾದಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸದಸ್ಯಕ್ಕೆ ತಾವು ಯಾವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಮೊದಲು ರೈತರ ಹಿತಾಸಕ್ತಿ ಕಾಪಾಡುವ ಹೊಣೆಗಾರಿಕೆ ನಿಭಾಯಿಸಬೇಕಾಗಿರುವುದು ತಮ್ಮ ಗುರಿ ಎಂದರು.
ಮಿನಿ ಡೈರಿಗಳಿಗೆ ಸಬ್ಸಿಡಿ:
ಸಂಸದ ಡಾ.ಕೆ ಸುಧಾಕರ್ ಮಾತನಾಡಿ, ರೈತರಿಗೆ ಕೃಷಿ ಪ್ರಧಾನ ಕಸುಬು. ಆದರೂ ಹೈನುಗಾರಿಕೆಯಿಂದ ಸುಸ್ಥಿರ ಆದಾಯ ಗಳಿಸುವ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಯುವಕರು ಮಿನಿ ಡೈರಿಗಳ ಸ್ಥಾಪನೆ ಮಾಡಿದರೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.ಸ್ಪರ್ಧೆ ವಿಜೇತರಿಗೆ ಬಹುಮಾನ:
ಹಾಲು ಕರೆಯುವ ಸ್ಪರ್ಧೆಯಲ್ಲಿ 60 ಮಿಶ್ರತಳಿ ಹಸುಗಳು ಭಾಗವಹಿಸಿದ್ದು, ಆಚಾರ್ಲಹಳ್ಳಿ ಗ್ರಾಮದ ಹೇಮಂತ್ 38.9 ಲೀಟರ್ ಹಾಲು ಕರೆದು ಮೊದಲ ಬಹುಮಾನ ಪಡೆದರೆ. 30.55 ಲೀಟರ್ ಹಾಲು ಕರೆದ ಸುಣ್ಣಘಟ್ಟಹಳ್ಳಿಯ ಲಿಖಿತ್ ದ್ವಿತೀಯ ಹಾಗೂ 29.2 ಲೀ ಹಾಲು ಕರೆದ ಹುಸ್ಕೂರಿನ ಗಜೇಂದ್ರ ತೃತೀಯ ಬಹುಮಾನ ಪಡೆದರು.ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭಾಗಿಯಾದರು.
9ಕೆಡಿಬಿಪಿ2-ದೊಡ್ಡಬಳ್ಳಾಪುರದ ಕೊನಘಟ್ಟ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ರಾಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಚಾಲನೆ ನೀಡಿದರು.