ಬೆಂಗಳೂರು : ರಾಜ್ಯ ಸರ್ಕಾರದಿಂದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಬಸ್ ಪಾಸ್ ಅನ್ನು ಕೇವಲ ಪೂರ್ಣಕಾಲಿಕ ಮಾತ್ರವಲ್ಲದೆ, ಅರೆಕಾಲಿಕ ಪತ್ರಕರ್ತರು, ಸಂಪಾದಕರಿಗೂ ನೀಡಲು ಷರತ್ತುಬದ್ಧ ಪರಿಷ್ಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ.
ಪೂರ್ಣಕಾಲಿಕ/ಅರೆಕಾಲಿಕ ಪತ್ರಕರ್ತ/ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಸಂಸ್ಥೆಯ ನೇಮಕಾತಿ ಪತ್ರ/ ಸಂಪಾದಕರು ಅಥವಾ ಮುಖ್ಯಸ್ಥರ ಶಿಫಾರಸ್ಸು ಪತ್ರ/ ಸಂಸ್ಥೆಯಿಂದ ಪಡೆಯುತ್ತಿರುವ ಲೈನೇಜ್, ಸಂಭಾವನೆ ಬಗ್ಗೆ 11 ತಿಂಗಳ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ಉಚಿತ ಬಸ್ ಪಾಸ್ ಪಡೆಯದಾಗಿದೆ. ಆದರೆ, ಫಲಾನುಭವಿಗಳ ಸಂಖ್ಯೆಯು 5222ರ ಸಂಖ್ಯೆ ಮೀರಬಾರದಂತೆ ಷರತ್ತು ವಿಧಿಸಿ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮೊದಲ ಆದೇಶದಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪತ್ರಕರ್ತರು ಮಾತ್ರ ಉಚಿತ ಬಸ್ ಪಾಸ್ಗೆ ಅರ್ಜಿ ಸಲ್ಲಿಸಬಹುದೆಂದು ಷರತ್ತು ವಿಧಿಸಲಾಗಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ತಾಲೂಕು ಮಟ್ಟದಲ್ಲಿ ಅರೆಕಾಲಿಕ/ ಫ್ರೀಲಾನ್ಸರ್ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವವರೇ ಹೆಚ್ಚು. ಇದರಿಂದ ಅವರೆಲ್ಲರಿಗೂ ಪಾಸ್ ಕೈತಪ್ಪುವ ಆತಂಕವಿತ್ತು. ಈ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು(ಕೆಯುಡ್ಲ್ಯುಜೆ) ನಿಯಮ ಬದಲಾವಣೆಗಾಗಿ ಸರ್ಕಾರಕ್ಕೆ ಮನವಿ ಮಾಡಿತ್ತು. ಇದನ್ನು ಆಧರಿಸಿ ತಿದ್ದುಪಡಿ ಮಾಡಿ ಎಲ್ಲ ಪತ್ರಕರ್ತರಿಗೂ ಬಸ್ ಪಾಸ್ ಸಿಗುವಂತೆ ಅವಕಾಶ ಕಲ್ಪಿಸಲಾಗಿದೆ.