;Resize=(412,232))
ಬೆಂಗಳೂರು : ತಮ್ಮ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಗರದ ಕಬ್ಬನ್ ಪಾರ್ಕಿನಲ್ಲಿ ನಡೆಯುತ್ತಿರುವ ಮಾವು-ಹಲಸು ಮೇಳಕ್ಕೆ ಸೋಮವಾರ ಭೇಟಿ ನೀಡಿ ನೈಸರ್ಗಿಕವಾಗಿ ಬೆಳೆದ ವಿವಿಧ ತಳಿಗಳ ಮಾವು ಮತ್ತು ಹಲಸಿನ ಹಣ್ಣುಗಳನ್ನು ವೀಕ್ಷಿಸಿದರು.
ವ್ಹೀಲ್ ಚೇರ್ನಲ್ಲಿ ಮೇಳಕ್ಕೆ ಭೇಟಿ ನೀಡಿದ ಗೌಡರು, ಉತ್ಸಾಹದಿಂದ ಮಾವು ಮತ್ತು ಹಲಸು ಮಾರಾಟ ಮಳಿಗೆಗಳಿಗೆ ತೆರಳಿ ವಿವಿಧ ತಳಿಗಳ ಮಾವು ಹಾಗೂ ಹಲಸುಗಳನ್ನು ವೀಕ್ಷಿಸಿದರು. ಮಾರಾಟಗಾರರಿಂದ ಮಾವು ಮತ್ತು ಹಲಸಿನ ಹಣ್ಣುಗಳ ಬಗ್ಗೆ ಮಾಹಿತಿ ಪಡೆದರು. ಹಣ್ಣುಗಳನ್ನು ತಮ್ಮ ಕೈಯಾರೆ ಮುಟ್ಟಿ ಪರಿಶೀಲಿಸಿದರು.
ರೈತರೊಬ್ಬರು ಹಲಸಿನ ಹಣ್ಣು ನೀಡಲು ಮುಂದಾದರು. ಆದ ದೇವೇಗೌಡರು ಹಣ್ಣಿಗೆ ಬೆಲೆ ಎಷ್ಟು ಕೇಳಿದಾಗ, ಆ ರೈತ ಮುನ್ನೂರು ರೂಪಾಯಿ. ನೀವು ಹಣ ಕೊಡುವುದು ಬೇಡ, ಪ್ರೀತಿಯಿಂದ ಕೊಡುತ್ತೇನೆ ಎಂದರು. ಆಗ ದೇವೇಗೌಡರು ಹಣ ತೆಗೆದುಕೊಳ್ಳದಿದ್ದರೆ ಹಣ್ಣು ಬೇಡ ಎಂದರು. ಕೊನೆಗೆ ಆ ರೈತನಿಗೆ 300 ರು. ಕೊಟ್ಟು ಬಳಿಕ ಹಲಸಿನ ಹಣ್ಣು ಖರೀದಿಸಿದರು. ಕೆಲ ಮಳಿಗೆಗಳಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿ ತಮ್ಮೊಂದಿಗೆ ಇದ್ದವರಿಗೆ ಹಂಚಿದರು.
ವ್ಹೀಲ್ ಚೇರ್ನಲ್ಲೇ ಮೇಳದಲ್ಲಿ ಸುತ್ತಾಡಿದ ದೇವೇಗೌಡರನ್ನು ಕಂಡು ಸಾರ್ವಜನಿಕರು ಖುಷಿಪಟ್ಟರು. ಇದೇ ವೇಳೆ ರೈತರು ಹಾರಿ ಹಾಕಿ, ಶಾಲು ಹೊದಿಸಿ ದೇವೇಗೌಡರನ್ನು ಗೌರವಿಸಿದರು. ಮೇಳಕ್ಕೆ ಭೇಟಿ ನೀಡಿದ್ದ ಸಾರ್ವಜನಿಕರು ತಮ್ಮ ಮೊಬೈಲ್ಗಳಲ್ಲಿ ದೇವೇಗೌಡರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ನಾನು ಒಬ್ಬ ರೈತನ ಮಗ. ನಮ್ಮ ರೈತರು ಹಂತ ಹಂತವಾಗಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ರೈತನ ಮಗನಾಗಿ ನಾನು ಶಾಸಕ, ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದೇನೆ. ರೈತರು ಬೆಳೆದ ಹಣ್ಣುಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ಸಹಕಾರ ನೀಡಬೇಕು. ರೈತರಿಗೆ ಉತ್ತಮ ಬೆಲೆ ಕೊಡಬೇಕು. ಇಲ್ಲವಾದರೆ, ರೈತ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.