ಬೆಂಗಳೂರು : ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ಮುಂದಿನ ದಿನಗಳಲ್ಲಿ ತಕ್ಕ ಬುದ್ಧಿ ಕಲಿಸಲಿದ್ದಾಳೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು
‘ಸೊರಬ ನಿವಾಸಿಗಳ ಟೀಮ್ ಸಮ್ಮಿಲನ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಕೆಲವರು ನಾನು ಏನೇ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಅಂತಹವರಿಗೆ ಸಿಗಂದೂರು ಚೌಡೇಶ್ವರಿ ದೇವಿ ಒಳ್ಳೆಯ ಬುದ್ದಿ ಕೊಡಲಿ. ಆ ದೇವತೆ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಬುದ್ಧಿ ಕಲಿಸುತ್ತಾಳೆ. ಎಂದು ತಿಳಿಸಿದರು.
ಸೊರಬ ಜನತೆಯ ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇನೆ.ಯಾವುದೇ ಭೇದಭಾವ ಇಲ್ಲದೇ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಯಾವುದೇ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರೆ ಬಗೆಹರಿಸಲಾಗುವುದು. ಸೊರಬ ಅಭಿವೃದ್ಧಿಗಾಗಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಮ್ಮ ತಾಲೂಕಿನ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಉದ್ದೇಶದಿಂದ ಇಂದಿನ ಇತರೆ ಎಲ್ಲಾ ಕಾರ್ಮಕ್ರಮಗಳನ್ನು ಬದಿಗೊತ್ತಿ ಪಾಲ್ಗೋಂಡಿದ್ದೇನೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸೊರಬ ನಿವಾಸಿಗಳ ಟೀಮ್ ಸಮ್ಮಿಲನದ ಮುಖ್ಯಸ್ಥ ಏಕಾಂತಪ್ಪ ಕುಮ್ಮೂರು, ವಕೀಲ ಕೇಶವಮೂರ್ತಿ ಹಾಲಗಳಲೆ, ದತ್ತಾತ್ರೇಯ ಬಿದರಗೆರೆ, ಕಲ್ಯಾಣ ಕುಮಾರ್ ತವನಂದಿ, ಶೇಖರಪ್ಪ ಹರೂರು,ಮುಕುಂದ ಹಿರೇ ಇಡಗೋಡು,ಗಣೇಶ್ ಹುಲ್ತಿಕೊಪ್ಪ,ಗಣಪತಿ ಹಳೇ ಸೊರಬ, ಪೀತಾಂಬರ ಕೆರೆಕೊಪ್ಪ ಮತ್ತಿತರರು ಭಾಗವಹಿಸಿದ್ದರು.