;Resize=(412,232))
ಬೆಂಗಳೂರು : ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಲು ಅನಕ್ಷರತೆ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
16 ವರ್ಷ 9 ತಿಂಗಳ ವಯಸ್ಸಿನ ಯುವತಿಗೆ ವಿವಾಹ ನೆರವೇರಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಗೌರಿಬಿದನೂರು ಗ್ರಾಮಾಂತರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಅಶೋಕ (56), ಅಶ್ವತ್ಥ್ ನಾರಾಯಣ(55), ರಂಗಮ್ಮ (49) ರಾಮಾಂಜಿನಮ್ಮ (48) ಮತ್ತು ಶ್ರೀರಾಮಪ್ಪ (56) ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ವಿವಾಹವಾಗಿರುವ ಯುವಕ-ಯುವತಿಯ ಪೋಷಕರು. ಗಂಡು-ಹೆಣ್ಣು ಪ್ರೀತಿಸುತ್ತಿದ್ದರು. ಅದಕ್ಕಾಗಿ ಮದುವೆ ಮಾಡಲಾಗಿದೆ. ದಂಪತಿಗೆ ಮಗು ಇದೆ. ಇನ್ನು ಅರ್ಜಿದಾರರು ಅನಕ್ಷರಸ್ಥರು. ತಿಳುವಳಿಕೆಯಿಲ್ಲದೆ ಬಾಲ್ಯ ವಿವಾಹ ಮಾಡಿದ್ದಾರೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕೆಂದು ಕೋರಿದರು.
ಇದರಿಂದ ಕೆರಳಿದ ನ್ಯಾ. ಎಂ.ನಾಗಪ್ರಸನ್ನ ಅವರ ಪೀಠ, ಅನಕ್ಷರತೆ ಬಾಲ್ಯ ವಿವಾಹ ಕೇಸ್ ರದ್ದುಪಡಿಸಲು ಆಧಾರವಾಗಲ್ಲ. ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕು. ಪೋಷಕರು ಏನೆಂದು ತಿಳಿದುಕೊಂಡಿದ್ದಾರೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಇನ್ನೂ ಪ್ರಕರಣದಲ್ಲಿ ಮದುವೆಯಾಗಿರುವ ಯುವತಿಗೆ ಮಗುವಿದೆ. ಈ ಅಂಶ ಪರಿಗಣಿಸಿ ಪೋಕ್ಸೋ ಕಾಯ್ದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳು ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದರು.
ಗೌರಿಬಿದನೂರು ಗ್ರಾಮಾಂತರ ಠಾಣಾ ಪೊಲೀಸರು, ಅರ್ಜಿದಾರರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಸಂಬಂಧ 2023ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣವು ಚಿಕ್ಕಬಳ್ಳಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಎಫ್ಟಿಎಸ್ಸಿ-1) ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ ತಮ್ಮ ವಿರುದ್ದದ ಪ್ರಕರಣಕ್ಕೆ ಸಂಬಂಧಿಸಿದ ಅಧೀನ ನ್ಯಾಯಾಲಯ ಇಡೀ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಪ್ರಕರಣವನ್ನು ಎದುರಿಸಲೇಬೇಕು. ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಅಲ್ಲದೆ, ಎಲ್ಲರಿಗೂ ಎಚ್ಚರಿಕೆ ಮೂಡಬೇಕಾದರೆ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬಾರದು.ಅವರು ಏಕೆ ಬಾಲ್ಯ ವಿವಾಹ ಮಾಡಬೇಕು? ಪೋಷಕರು ಎಚ್ಚೆತ್ತುಕೊಳ್ಳುವುದು ಯಾವಾಗ