ಮೈಸೂರಿನಲ್ಲಿ ಇನ್ಫೋಸಿಸ್‌ ಸಿಬ್ಬಂದಿ ವಜಾ - ಕೇಂದ್ರ ಕಾರ್ಮಿಕ ಇಲಾಖೆಗೆ ಟೆಕಿಗಳ ಸಂಘ ದೂರು

ಸಾರಾಂಶ

ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎನ್ನುವ ಕಾರಣ ನೀಡಿ ಇತ್ತೀಚೆಗಷ್ಟೇ ಮೈಸೂರು ಕ್ಯಾಂಪಸ್‌ನಿಂದ 300ಕ್ಕೂ ಹೆಚ್ಚು ಯುವ ಉದ್ಯೋಗಿಗಳನ್ನು ತೆಗೆದು ಹಾಕಿದ ಇನ್ಫೋಸಿಸ್‌ ವಿರುದ್ಧ ಐಟಿ ಉದ್ಯೋಗಿಗಳ ಸಂಘಟನೆ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದೆ.

ನವದೆಹಲಿ: ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎನ್ನುವ ಕಾರಣ ನೀಡಿ ಇತ್ತೀಚೆಗಷ್ಟೇ ಮೈಸೂರು ಕ್ಯಾಂಪಸ್‌ನಿಂದ 300ಕ್ಕೂ ಹೆಚ್ಚು ಯುವ ಉದ್ಯೋಗಿಗಳನ್ನು ತೆಗೆದು ಹಾಕಿದ ಇನ್ಫೋಸಿಸ್‌ ವಿರುದ್ಧ ಐಟಿ ಉದ್ಯೋಗಿಗಳ ಸಂಘಟನೆ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದೆ.

ಕೇಂದ್ರ ಕಾರ್ಮಿಕ ಇಲಾಖೆಗೆ ಐಟಿ ಉದ್ಯೋಗಿಗಳ ಸಂಘಟನೆಯಾದ ಎನ್‌ಐಟಿಇಎಸ್‌ ಸಲ್ಲಿಸಿರುವ ದೂರಿನಲ್ಲಿ, ‘ಇನ್ಫೋಸಿಸ್‌ ಕಾನೂನು ಬಾಹಿರ ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡುತ್ತಿದೆ’ ಎಂದು ಆರೋಪಿಸಿದೆ.

 ‘ಇನ್ಫೋಸಿಸ್‌, ಇತ್ತೀಚೆಗೆ ಕ್ಯಾಂಪಸ್‌ನಲ್ಲಿ ಆಯ್ಕೆ ಮಾಡಿಕೊಂಡವರನ್ನು ಬಲವಂತವಾಗಿ ವಜಾಗೊಳಿಸುವ ಕ್ರಮಕ್ಕೆ ಮುಂದಾಗಿದೆ’ ಎಂದು ಬಾಧಿತ ಉದ್ಯೋಗಿಗಳಿಂದ ದೂರು ಬಂದಿದೆ. ಕಂಪನಿಯು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಗಳ ಮೂಲಕ ಬೆದರಿಕೆ ಹಾಕಿದೆ. ವಜಾ ಮಾಡಿದ ವಿದ್ಯಾರ್ಥಿಗಳಿಗೆ ಮುಂಚೆಯೇ ಯಾವುದೇ ಸೂಚನೆ ನೀಡಿಲ್ಲ. 

ಇದು ಅವರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದಿದೆ. ಅಲ್ಲದೇ ಕೈಗಾರಿಕಾ ವಿವಾದ ಕಾಯ್ದೆ ನಿಬಂಧನೆ ಉಲ್ಲಂಘಿಸಿದಕ್ಕಾಗಿ ಇನ್ಫೋಸಿಸ್‌ ವಿರುದ್ಧ ಕ್ರಮ ಹಾಗೂ ವಜಾ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದೆ.

Share this article