ಕಲಬುರಗಿಯಲ್ಲೂ ಉದ್ಯೋಗ ಆಕಾಂಕ್ಷಿಗಳ ಹೋರಾಟ

Published : Mar 28, 2026, 08:58 AM IST
Protest

ಸಾರಾಂಶ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಗದಿತ ಕಾಲಮಿತಿಯಲ್ಲಿ ಭರ್ತಿ ಮಾಡುವಂತೆ ಆಗ್ರಹಿಸಿ ಧಾರವಾಡದ ಮಾದರಿಯಲ್ಲಿಯೇ ಶುಕ್ರವಾರ ಕಲಬುರಗಿಯಲ್ಲಿಯೂ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆ ನಡೆಯಿತು.

 ಕಲಬುರಗಿ :  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಗದಿತ ಕಾಲಮಿತಿಯಲ್ಲಿ ಭರ್ತಿ ಮಾಡುವಂತೆ ಆಗ್ರಹಿಸಿ ಧಾರವಾಡದ ಮಾದರಿಯಲ್ಲಿಯೇ ಶುಕ್ರವಾರ ಕಲಬುರಗಿಯಲ್ಲಿಯೂ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆ ನಡೆಯಿತು.

ಅಕ್ಸಾ ಸಂಘಟನೆಯ ಕರೆಯ ಮೇರೆಗೆ ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು, ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸುಡು ಬಿಸಿಲಿನಲ್ಲಿಯೇ ನಗರದ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಘೋಷಣೆ ಕೂಗುತ್ತಲೇ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 56 ಸಾವಿರ ಹುದ್ದೆ ಭರ್ತಿ ಮಾಡೋದಾಗಿ ಸರ್ಕಾರ ಹೇಳಿದ್ದು, ಭರ್ತಿ ಪ್ರಕ್ರಿಯೆಗೆ ಕಾಲಮಿತಿ ಹಾಕಬೇಕು. ಜೊತೆಗೆ ಕೆಪಿಎಸ್‌ಸಿ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

2.80 ಲಕ್ಷ ಹುದ್ದೆ ಖಾಲಿ:

ಕಳೆದ ದಶಕದಿಂದ ನೇಮಕಾತಿ ಮಾಡದ್ದರಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇವೆ. ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, 30 ದಿನಗಳಲ್ಲಿ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ಶುರು ಮಾಡಬೇಕು ಎಂದು ಕಾಂತಕುಮಾರ್‌ ಒತ್ತಾಯಿಸಿದರು.

ಕಳೆದ ಫೆಬ್ರವರಿಯಲ್ಲಿ ಧಾರವಾಡದಲ್ಲಿ ಗಮನ ಸೆಳೆಯುವಂತೆ ಹೋರಾಟ ಮಾಡಿ ಸುದ್ದಿಯಾಗಿದ್ದ ‘ಅಕ್ಸಾ’ ಸಂಘಟನೆ ಕಲಬುರಗಿಯಲ್ಲಿ ಮಾ.23ರಂದು ನಡೆಸಲು ಉದ್ದೇಶಿಸಿದ್ದ ಹೋರಾಟಕ್ಕೆ ಪೊಲೀಸರು ಪರವಾನಿಗೆ ನಿರಾಕರಿಸಿದಾಗ ಸಂಘಟಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಪರವಾನಿಗೆ ಪಡೆದಿದ್ದರಿಂದ ಹೋರಾಟವು ಗಮನ ಸೆಳೆಯುವಂತೆ ಮಾಡಿತ್ತು.

ಅಕ್ಸಾ ಅಧ್ಯಕ್ಷ ಕಾಂತಕುಮಾರ್‌ ಹೋರಾಟದ ನೇತೃತ್ವ ವಹಿಸಿದ್ದರು. ಸ್ಥಳೀಯ ಬಿಜೆಪಿ, ಶಿವಸೇನೆ ಸೇರಿ ವಿವಿಧ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಬೆಂಬಲಿಸಿದರು. ಶಿವಸೇನಾ ರಾಜ್ಯಾಧ್ಯಕ್ಷರೂ ಆಗಿರುವ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, ಪಾಳಾ ಗುರುಮೂರ್ತಿ ಶಿವಾಚಾರ್ಯರು, ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ, ಬಿಜೆಪಿ ನಗರಾಧ್ಯಕ್ಷ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತಿಭಟನೆಯುದ್ದಕ್ಕೂ ಪೊಲೀಸ್‌ ಸರ್ಪಗಾವಲು

ಪ್ರತಿಭಟನೆಯಲ್ಲಿ ನೂರಾರು ಯುವಕರು ಸೇರಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕ್ರಮ ಪೊಲೀಸರು ಕೈಗೊಂಡಿದ್ದರು. ದಾರಿಯುದ್ದಕ್ಕೂ ನಗರ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಪ್ರತಿಭಟನಾ ಮೇರವಣಿಗೆ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿತು.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹೋಟೆಲ್‌ಗಳಿಗೆ ಗ್ಯಾಸ್‌ ಪೂರೈಕೆ ಶೇ.40ಕ್ಕೆ ಹೆಚ್ಚಿಸಿ : ಮುನಿಯಪ್ಪ
ಹೊಸ ಶಾಲೆಗೆ ಸ್ವಂತ ಭೂಮಿ/ 15 ವರ್ಷ ಭೂ ಗುತ್ತಿಗೆ ಕಡ್ಡಾಯ