ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಶನಿವಾರ ನಡೆದ ಮುಖ್ಯ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಮತ್ತೆ ದೋಷಗಳು
ಬೆಂಗಳೂರು : ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಶನಿವಾರ ನಡೆದ ಮುಖ್ಯ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಮತ್ತೆ ದೋಷಗಳು ನುಸುಳಿದ್ದು, ಪ್ರಶ್ನೆಪತ್ರಿಕೆಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅನೇಕ ಸ್ಪರ್ಧಾರ್ಥಿಗಳು ಕೆಪಿಎಸ್ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ಬಾರಿ ಪೂರ್ವಭಾವಿ ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಸಮಸ್ಯೆಗಳಾಗಿದ್ದರೂ ಕೆಪಿಎಸ್ಸಿ ಪಾಠ ಕಲಿತಿಲ್ಲ ಎಂದು ಕಿಡಿ ಕಾರಿದ್ದಾರೆ.
25 ಅಂಕಗಳ ಸಂಕ್ಷಿಪ್ತ ಲೇಖನದಲ್ಲಿ ವಾಕ್ಯ ರಚನೆಯ ತಪ್ಪುಗಳು ಕಂಡು ಬಂದಿವೆ. ಅಲ್ಲದೇ, 25 ಅಂಕಗಳ ಪ್ರಬಂಧದಲ್ಲಿ ವಾಕ್ಯ ರಚನೆ ಮತ್ತು ಪದಗಳು ಕೂಡ ತಪ್ಪಾಗಿವೆ.
ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು. ಇಲ್ಲಿಯ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ‘ಟ್ರಾಮ್ ಬಸ್ಸುಗಳಿಗೆ ಸಕಾಲಕ್ಕೆ ಹೋಗುವುದಾಗುವುದಿಲ್ಲ’. ಎಂದು ಬರೆಯಲಾಗಿದೆ. ಆದರೆ, ಈ ಸಾಲನ್ನು ಸರಳವಾಗಿ, ‘ಜನದಟ್ಟಣೆ ಕಾರಣ ಟ್ರಾಮ್ ಬಸ್ಸುಗಳು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುವುದಿಲ್ಲ’ ಎಂದು ಬರೆಯಬಹುದಿತ್ತು.
ಮತ್ತೊಂದು ವಾಕ್ಯದಲ್ಲಿ ‘ನಿಮ್ಮದೇಶದ ಗೌರವವನ್ನು ಕಾಯಿರಿ!’ ಎಂದಿದೆ. ಅದರ ಬದಲು ‘ನಿಮ್ಮ ದೇಶದ ಗೌರವವನ್ನು ಎತ್ತಿ ಹಿಡಿಯಿರಿ’ ಎಂದು ಬರೆಯಬೇಕಿತ್ತು. ‘ಫಿಫ್ಟಿ ಶಿಲ್ಲಿಂಗ್ ಟೈಲರ್ಸ್’ ಎಂಬುದು ವಸ್ತ್ರ ಉತ್ಪಾದಕಾ ಕಂಪನಿಯಾಗಿದೆ. ಆದರೆ, ಅದನ್ನು ‘ಐವತ್ತು ಶಿಲಿಂಗಿನ ಸಿಂಪಿಗಳು’ ಎಂದು ಅನಗತ್ಯವಾಗಿ ಭಾಷಾಂತರ ಮಾಡಲಾಗಿದೆ.
ಇದೇ ರೀತಿ ಪ್ರಬಂಧದ ಹಲವು ಕಡೆ ತಪ್ಪುಗಳು ಕಂಡು ಬಂದಿವೆ.
ತಪ್ಪು ಪದಗಳು ಮುದ್ರಣ: ಪುಸ್ತಕ ಎಂಬುದನ್ನು ತಪ್ಪಾಗಿ ಪ್ರಸ್ತಕ, ರಾಕ್ಷಸ- ರಾಕ್ಷನ, ಚೀರಿಕೊಂಡುಬಿಟ್ಟನು - ಚೀರಿಕೊಂಡಲುಬಿಟ್ಟನು, ಹಾಕಿ - ಹಾಕ್ದೆ, ಎಂದನು - ಎಂದಿನು. ನಿನ್ನೆಯಂತೆಯೇ- ನೆನ್ನಿನಂತೆಯೇ ಎಂದು ಅನೇಕ ಪದಗಳು ತಪ್ಪಾಗಿವೆ.
ಶೇ.93.30ರಷ್ಟು ಹಾಜರಾತಿ
ಶನಿವಾರ ಅರ್ಹತಾದಾಯಕ ಪತ್ರಿಕೆಯ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆ ನಡೆದವು. ಹೆಸರು ನೋಂದಾಯಿಸಿಕೊಂಡಿದ್ದ 5,424 ಅಭ್ಯರ್ಥಿಗಳಲ್ಲಿ ಶೇ.93.30 ಜನ ಹಾಜರಾಗಿದ್ದರು.
ಇನ್ನು ಮುಖ್ಯ ಪರೀಕ್ಷೆ ಬರೆಯಲು ನ್ಯಾಯಾಲಯದಿಂದ ಅನುಮತಿ ಪಡೆದು ಅರ್ಜಿ ಸಲ್ಲಿಸಿದ್ದ 322 ಅಭ್ಯರ್ಥಿಗಳ ಪೈಕಿ ಸುಮಾರು 15 ಜನ ಪರೀಕ್ಷೆಯ ಪ್ರವೇಶಪತ್ರವನ್ನೇ ಪಡೆದಿರಲಿಲ್ಲ. ಪ್ರವೇಶ ಪತ್ರ ಪಡೆದವರ ಪೈಕಿ 15ಕ್ಕೂ ಹೆಚ್ಚು ಜನ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಕೆಪಿಎಸ್ಸಿ ಅಧಿಕಾರಿ ಮಾಹಿತಿ ನೀಡಿದರು.