ಸದನದಲ್ಲಿ ವಿಪಕ್ಷಗಳ ಗೂಂಡಾಗಿರಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

Published : Aug 24, 2026, 06:56 AM IST
DK shivakumar

ಸಾರಾಂಶ

ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ನಾಗೇಂದ್ರ ವಿಚಾರ ಚರ್ಚೆಗೆ ನೋಟಿಸ್‌ ನೋಡಿ ಕಾನೂನಾತ್ಮಕವಾಗಿ ಕಾಂಗ್ರೆಸ್‌ ಸರ್ಕಾರವನ್ನು ಎದುರಿಸಲು ಶಕ್ತಿ ಇಲ್ಲದೆ ಪ್ರತಿಪಕ್ಷಗಳು ಕಲಾಪ ನಡೆಸಲು ಅಡ್ಡಿಪಡಿಸುವ ಮೂಲಕ ಗೂಂಡಾಗಿರಿ ನಡೆಸುತ್ತಿವೆ

ಬೆಂಗಳೂರು : ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ನಾಗೇಂದ್ರ ವಿಚಾರ ಚರ್ಚೆಗೆ ನೋಟಿಸ್‌ ನೋಡಿ ಕಾನೂನಾತ್ಮಕವಾಗಿ ಕಾಂಗ್ರೆಸ್‌ ಸರ್ಕಾರವನ್ನು ಎದುರಿಸಲು ಶಕ್ತಿ ಇಲ್ಲದೆ ಪ್ರತಿಪಕ್ಷಗಳು ಕಲಾಪ ನಡೆಸಲು ಅಡ್ಡಿಪಡಿಸುವ ಮೂಲಕ ಗೂಂಡಾಗಿರಿ ನಡೆಸುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಲು ಯಾರಿಗಾದರೂ ಅವಕಾಶವಿದೆ

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ, ನೆಲದ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಲು ಯಾರಿಗಾದರೂ ಅವಕಾಶವಿದೆ. ಅವರು ಕಾನೂನಿನ ಚೌಕಟ್ಟಿನಲ್ಲಿ ಏನಾದರೂ ಮಾಡಲಿ. ಆದರೆ, ಅವರು ಗೂಂಡಾಗಿರಿ ಮಾಡುತ್ತಿದ್ದಾರೆ. ಒಂದು ನೋಟಿಸ್ ಕೂಡ ಕೊಡದೇ ಅಧಿವೇಶನದ ಕಾರ್ಯಕಲಾಪಗಳನ್ನು ಹಾಳು ಮಾಡುತ್ತಿದ್ದಾರೆ ಎಂದರು.

ನೋಟಿಸ್‌ ನೀಡಿ ಚರ್ಚೆ ನಡೆಸಲಿ

ಪ್ರತಿಪಕ್ಷಗಳು ಪ್ರತಿಭಟನೆ, ಧರಣಿ ಮಾಡುವುದು ತಪ್ಪಲ್ಲ. ಆದರೆ ನೋಟಿಸ್‌ ನೀಡಿ ಚರ್ಚೆ ನಡೆಸಲಿ. ಸಚಿವರ ರಾಜಿನಾಮೆ ಏಕೆ ನೀಡಬೇಕು ಎಂಬುದನ್ನು ಚರ್ಚಿಸಲಿ. ಅದಕ್ಕೆ ನಾವೂ ಉತ್ತರ ನೀಡಲು ಸಿದ್ದರಿದ್ದೇವೆ. ಆದರೆ, ಪ್ರತಿಪಕ್ಷಗಳಿಗೆ ತಾಳ್ಮೆ ಇಲ್ಲ ಎಂದು ಕಿಡಿಕಾರಿದರು.

ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಶಕ್ತಿಯಿಲ್ಲ. ದೇಶದಲ್ಲಿ ಇದುವರೆಗೆ ಯಾವ್ಯಾವ ಸಚಿವರು, ಕೇಂದ್ರದ ಸಚಿವರು, ಮುಖ್ಯಮಂತ್ರಿಗಳ ಮೇಲೆ ಮೊಕದ್ದಮೆಗಳಿವೆ ಎಂಬುದನ್ನು ಅವರೇ ತಿಳಿಸಲಿ. ಮಾಧ್ಯಮದವರು ಕೂಡ ಯಾರ್‍ಯಾರ ಮೇಲೆ ಎಷ್ಟು ಮೊಕದ್ದಮೆಗಳಿವೆ ಎಂಬ ದಾಖಲಾತಿಗಳೊಂದಿಗೆ ಬಹಿರಂಗಪಡಿಸಬೇಕು ಎಂದು ಮುಖ್ಯಂತ್ರಿಗಳು ಅಭಿಪ್ರಾಯಪಟ್ಟರು.

ಪ್ರತಿಪಕ್ಷಗಳು ಮೊಕದ್ದಮೆಗಳಿರುವ ಬೇರೆ ಬೇರೆ ಸಚಿವರ, ಕೇಂದ್ರದ ಸಚಿವರ, ಮುಖ್ಯಮಂತ್ರಿಗಳ ರಾಜಿನಾಮೆಯನ್ನು ಏಕೆ ಕೇಳುತ್ತಿಲ್ಲ? ಕೇವಲ ದಲಿತ, ಪರಿಶಿಷ್ಠ ಪಂಗಡದ, ಬುಡಕಟ್ಟು ಸಮುದಾಯಕ್ಕೆ ಸೇರಿದ ಒಬ್ಬ ಸಚಿವನ ರಾಜೀನಾಮೆ ಮಾತ್ರ ಏಕೆ ಕೇಳುತ್ತಿದ್ದಾರೆ ಎಂಬುದನ್ನು ಹೇಳಲಿ. ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 16 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಶಾಸಕರು ಆಯ್ಕೆಯಾಗಿದ್ದು, ಈ ಬಗ್ಗೆ ಅವರಿಗೆ ಅಸೂಯೆ ಇದೆ. ಅವರ ಪಕ್ಷದಲ್ಲಿ ಯಾವುದೇ ಪರಿಶಿಷ್ಟ ವರ್ಗದ ನಾಯಕರು ಹೊರಹೊಮ್ಮಲಿಲ್ಲ ಎಂಬ ಅಸಮಾಧಾನವಿರುವ ಕಾರಣ ಈ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಹರಿಹಾಯ್ದರು.

ಸಿಎಂ ಡಿಕೆಶಿ, ಉದ್ಯಮಿ ಅದಾನಿ ಭೇಟಿ:

ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಅದಾನಿ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ ಗೌತಮ್‌ ಅದಾನಿ ಅವರು ಭಾನುವಾರ ನಗರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆರ್ಟ್ ಆಫ್ ಲಿವಿಂಗ್​​ಗೆ ಆಗಮಿಸಿದ್ದ ಗೌತಮ್‌ ಅದಾನಿ ಅವರು ಬಳಿಕ ಸದಾಶಿವನಗರದ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದರು.

ಈ ವೇಳೆ ಅವರು, ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬೆಂಗಳೂರು ಸುರಂಗ ರಸ್ತೆ ಯೋಜನೆ ಕುರಿತು ಹಾಗೂ ತಮ್ಮ ಮತ್ತಷ್ಟು ಉದ್ದಿಮೆಗಳ ಸ್ಥಾಪನೆ ಸಂಬಂಧ ಚರ್ಚೆ ನಡೆಸಿದರು ಎಂದು ಹೇಳಲಾಗಿದ್ದು, ಅವರ ಈ ಭೇಟಿ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿತ 17 ಕಿ.ಮೀ. ಉದ್ದದ ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಎನ್‌ಒನ್‌ ಬಿಡ್ಡಿಂಗ್‌ ಪ್ರಕ್ರಿಯೆ ಕೈಗೊಂಡಿದೆ. ರಾಜ್ಯ ಸರ್ಕಾರ ಎಸ್ಟೀಂ ಮಾಲ್‌ನಿಂದ ಸಿಲ್ಕ್‌ಬೋರ್ಡ್‌ವರೆಗೆ ಆರುಪಥ ಸುರಂಗ ರಸ್ತೆ ನಿರ್ಮಿಸುವ ಗುರಿಯ ಈ ಯೋಜನೆಗೆ 17,700 ಕೋಟಿ ರು. ಮೊತ್ತ ನಿಗದಿಪಡಿಸಿದೆ.

ಮಾಹಿತಿ ಪ್ರಕಾರ, ಯೋಜನೆಗೆ ಬಿಟ್ಟಿಂಗ್‌ ಮಾಡಿರುವ ಕಂಪನಿಗಳ ಪೈಕಿ ಅದಾನಿ ಗ್ರೂಪ್‌ನ ಕಂಪನಿಯು 22,262 ಕೋಟಿ ರು.ಗಳಿಗೆ ಬಿಡ್‌ ಸಲ್ಲಿಸಿದೆ. ಉಳಿದ 3 ಕಂಪನಿಗಳು ಇನ್ನೂ ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಸಿದೆ. ಇತರೆ ಕಂಪನಿಗಳಿಗೆ ಹೋಲಿಸಿದರೆ ಅದಾನಿ ಗ್ರೂಪ್‌ನ ಕಂಪನಿ ಕಡಿಮೆ ಮೊತ್ತದ ಬಿಡ್‌ ಮಾಡಿರುವುದರಿಂದ ಆ ಸಂಸ್ಥೆಗೆ ಯೋಜನೆಯನ್ನು ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿ ಅಂತಿಮ ನಿರ್ಧಾರ ಆಗಬೇಕಿದೆ. ಈ ವೇಳೆ ಗೌತಮ್‌ ಅದಾನಿ ಅವರು ಸಿಎಂ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಕೋಟ್...

ಇದೊಂದು ಸೌಜನ್ಯದ ಭೇಟಿ

ದಕ್ಷಿಣ ಭಾರತದ ರಾಜ್ಯಗಳಲ್ಲೂ ಅದಾನಿ ಸಮೂಹದ ಬೇಕಾದಷ್ಟು ಉದ್ದಿಮೆ, ವ್ಯವಹಾರಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಅವರು, ನಾನು ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ನನ್ನನ್ನು ಭೇಟಿ ಮಾಡಿದ್ದಾರೆ. ಇದೊಂದು ಸೌಜನ್ಯದ ಭೇಟಿ ಆಗಿತ್ತು.

-ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಾಗೇಂದ್ರಗಾಗಿ ತೀವ್ರ ಕದನ ವಿಧಾನಸೌಧಕ್ಕೆ ಇಂದು ಬಿಜೆಪಿ ಮುತ್ತಿಗೆ ಯತ್ನ
ಅಧಿವೇಶನದಲ್ಲೂ ದೋಸ್ತಿ ಹೋರಾಟ - ಎರಡು ಸದನಗಳಲ್ಲೂ ಧರಣಿ