ಬೆಂಗಳೂರು : ಕೆಲ ದಿನಗಳ ಹಿಂದೆ ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ನಗರದ ಭರತ್ ಭೂಷಣ್ ಅವರ ನಿವಾಸಕ್ಕೆ ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು ಭೇಟಿ ನೀಡಿ ಮೃತನ ಪತ್ನಿ ಸುಜಾತಾ ಅವರಿಂದ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಏ.22ರಂದು ಕಾಶ್ಮೀರದ ಪಹಲ್ಗಾಂನ ಬೈಸರಾನ್ ವ್ಯಾಲಿಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಸೇರಿ 26 ಮಂದಿ ಮೃತಪಟ್ಟಿದ್ದರು. ಈ ದಾಳಿ ಕುರಿತು ಎನ್ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಅದರಂತೆ ಇಬ್ಬರು ಎನ್ಐಎ ಅಧಿಕಾರಿಗಳು ಶನಿವಾರವೇ ಭರತ್ ಭೂಷಣ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಸುಜಾತಾ ಅವರೊಂದಿಗೆ ಸುಮಾರು ನಾಲ್ಕು ತಾಸು ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಉಗ್ರರ ದಾಳಿ ಕುರಿತು ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ.
ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದು ಯಾವಾಗ? ಉಗ್ರರು ಗುಂಡಿನ ದಾಳಿ ನಡೆಸುವಾಗ ಏನಾದರೂ ಮಾತನಾಡಿದರೇ? ಯಾವ ಭಾಷೆಯಲ್ಲಿ ಮಾತನಾಡಿದರು? ನೀವು ಅವರೊಂದಿಗೆ ಏನಾದರೂ ಮಾತನಾಡಿದ್ರಾ? ಅವರ ವೇಷಭೂಷಣ ಹೇಗಿತ್ತು? ಯಾವ ಮಾದರಿಯ ಶಸ್ತ್ರಗಳು ಅವರ ಬಳಿ ಇದ್ದವು? ಗುಂಡಿನ ದಾಳಿ ಬಳಿಕ ಅವರು ಎಲ್ಲಿಗೆ ಹೋದರು? ಎಷ್ಟು ಜನ ಇದ್ದರು ಎಂಬುದು ಸೇರಿ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಇದೇ ವೇಳೆ ಎನ್ಐಎ ಅಧಿಕಾರಿಗಳು ಕೆಲ ಶಂಕಿತ ಉಗ್ರರ ರೇಖಾಚಿತ್ರಗಳು ಹಾಗೂ ಫೋಟೋಗಳನ್ನು ಸುಜಾತಾ ಅವರಿಗೆ ತೋರಿಸಿದ್ದಾರೆ. ಈ ವ್ಯಕ್ತಿಗಳ ಪೈಕಿ ಯಾರಾದರೂ ಇದ್ದರೆ? ನೀವು ಅವರನ್ನು ಇನ್ನೊಮ್ಮೆ ನೋಡಿದರೆ ಗುರುತು ಪತ್ತೆಹಚ್ಚುವಿರಾ? ನಿಮ್ಮ ಪತಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಹಾಗೂ ಈ ರೇಖಾಚಿತ್ರಗಳಲ್ಲಿರುವ ವ್ಯಕ್ತಿಗಳ ನಡುವೆ ಸಾಮ್ಯತೆ ಏನಾದರೂ ಇದೆಯೇ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.