ಆನೇಕಲ್: ಸರ್ವೇ ಹಾಗೂ ಗ್ರಾಮ ನಕಾಶೆಯಲ್ಲಿ ಕಂಡು ಬಂದ ರಸ್ತೆಯನ್ನು ತನ್ನದೆಂದು ಸ್ವಯಂ ಘೋಷಣೆ ಮಾಡಿಕೊಂಡು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅಡಚಣೆ ಮಾಡಿದ ಘಟನೆ ಬನ್ನೇರುಘಟ್ಟ ವ್ಯಾಪ್ತಿಯ ಬೇಗಹಳ್ಳಿಯಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಚೌಡಪ್ಪರಿಂದ ಸಾರ್ವಜನಿಕ ರಸ್ತೆ ಒತ್ತುವರಿಯಾಗಿದ್ದು ಹೈಕೋರ್ಟ್ ಆದೇಶ ಉಲ್ಲಂಘಿಸಿ ರಸ್ತೆ ಉಳುಮೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದ ಸ್ಪಷ್ಟ ಆದೇಶ ಇದ್ದರೂ ಸ್ಥಳೀಯ ತಹಸೀಲ್ದಾರ್ ಮತ್ತು ಎಡಿಎಲ್ ಆರ್ ರವರು ಕ್ರಮ ವಹಿಸಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆ ಅತಿಕ್ರಮಣ ಆಗಿರುವ ಸ್ಥಳದಲ್ಲಿ ಖಾಸಗಿ ಶಾಲೆ ಇದ್ದು 200ಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು. ರಸ್ತೆ ಸಮಸ್ಯೆಯಿಂದಾಗಿ ಕಳೆದ ಎರಡು ದಿನಗಳಿಂದ ಶಾಲೆಗೆ ಅನಿವಾರ್ಯವಾಗಿ ರಜೆ ಘೋಷಣೆ ಮಾಡಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದರು.
ರಸ್ತೆ ತೆರವಿಗೆ ಕ್ರಮ
ಅನೇಕಲ್ ಸರ್ವೇ ಇಲಾಖೆಯ ಉಪ ನಿರ್ದೇಶಕರಾದ ಮದನ್ ರವರು ಸ್ಪಷ್ಟನೆ ನೀಡಿ ಉಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸಿ ಕೂಡಲೇ ರಸ್ತೆ ತೆರವಿಗೆ ಕ್ರಮ ವಹಿಸಲಾಗಿದೆ. ತಾಲೂಕು ತಹಸೀಲ್ದಾರ್ ರವರ ನಿರ್ದೇಶನದ ಮೇರೆಗೆ ತಾಲೂಕು ಸರ್ವೇಯರ್ ಹಾಗೂ ಕಂದಾಯ ಅಧಿಕಾರಿಯನ್ನು ನಿಯೋಜಿಸಲಾಗಿದೆ.