ಇಂದು ಸ್ವಯಂ ಗಣತಿ ಪೂರ್ಣ, ನಾಳೆಯಿಂದ ಮನೆಗಣತಿ

Published : Apr 15, 2026, 10:42 AM IST
census

ಸಾರಾಂಶ

ಕೇಂದ್ರ ಸರ್ಕಾರದ ‘ಜನಗಣತಿ-2027’ ಭಾಗವಾಗಿ ಕರ್ನಾಟಕದಲ್ಲಿ ಏ.1ರಿಂದ ಆರಂಭವಾದ ಸ್ವಯಂ ಗಣತಿ ಏ.15ಕ್ಕೆ ಮುಗಿಯಲಿದ್ದು, ಏ.16ರಿಂದ ಒಂದು ತಿಂಗಳ ಕಾಲ ‘ಮನೆ ಗಣತಿ ಮತ್ತು ಮನೆಗಳ ಪಟ್ಟಿ ತಯಾರಿಕೆ’ ನಡೆಯಲಿದೆ.

 ಬೆಂಗಳೂರು :  ಕೇಂದ್ರ ಸರ್ಕಾರದ ‘ಜನಗಣತಿ-2027’ ಭಾಗವಾಗಿ ಕರ್ನಾಟಕದಲ್ಲಿ ಏ.1ರಿಂದ ಆರಂಭವಾದ ಸ್ವಯಂ ಗಣತಿ ಏ.15ಕ್ಕೆ ಮುಗಿಯಲಿದ್ದು, ಏ.16ರಿಂದ ಒಂದು ತಿಂಗಳ ಕಾಲ ‘ಮನೆ ಗಣತಿ ಮತ್ತು ಮನೆಗಳ ಪಟ್ಟಿ ತಯಾರಿಕೆ’ ನಡೆಯಲಿದೆ. ಅರ್ಥಾತ್‌ ಗಣತಿದಾರರು ಮನೆ ಮನೆಗೆ ತೆರಳಿ ಮನೆಯ ಸ್ಥಿತಿಗತಿ, ಮೂಲಸೌಕರ್ಯ, ಆಸ್ತಿಗಳು ಮತ್ತಿತರ ವಿವರಗಳನ್ನು ಕಲೆಹಾಕಲಿದ್ದಾರೆ.

16 ವರ್ಷಗಳ ಬಳಿಕ ದೇಶದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ‘ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ’ಯು ಜನಗಣತಿಯ ಮೊದಲ ಹಂತವಾಗಿದ್ದು, ವಿವಿಧ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಸೆ.30ರವರೆಗೆ ಜನಗಣತಿ ನಡೆಯಲಿದೆ. ಈ ಪೈಕಿ ಕರ್ನಾಟಕದಲ್ಲಿ ಏ.16ರಿಂದ ಮೇ 15ರವರೆಗೆ ನಡೆಯುವ ಗಣತಿ ಕಾರ್ಯಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜಿಸಲಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ಆಯಾ ಜಿಲ್ಲಾಡಳಿತಗಳ ಮೂಲಕ ಗಣತಿ ಕಾರ್ಯ ನಡೆಯಲಿದೆ. ಗಣತಿದಾರರು ಈ ಸಮಯದಲ್ಲಿ ಮನೆಗಳ ಸ್ಥಿತಿಗತಿಗಳು, ಆಸ್ತಿಗಳು ಮತ್ತು ಮನೆಗಳ ಸೌಕರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕಲಿದ್ದಾರೆ. ಮೊದಲ ಹಂತದ ಜನಗಣತಿಗೆ 33 ಪ್ರಶ್ನೆಗಳನ್ನು ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣತಿ ಸಂದರ್ಭದಲ್ಲಿ ಸಂಗ್ರಹಿಸುವ ಎಲ್ಲ ವೈಯಕ್ತಿಕ ದತ್ತಾಂಶಗಳ ಗೌಪ್ಯತೆ ಕಾಪಾಡಲಾಗುವುದು. ಇದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಬಳಸುವುದಿಲ್ಲ ಮತ್ತು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳುವುದಿಲ್ಲ. ದತ್ತಾಂಶ ದುರುಪಯೋಗವಾಗುತ್ತದೆ ಎಂದು ಜನ ಭಯ ಪಡುವುದು ಬೇಡ. ಹೀಗಾಗಿ, ಜನರು ತಪ್ಪದೆ ಗಣತಿಯಲ್ಲಿ ಪಾಲ್ಗೊಂಡು ಗಣತಿದಾರರು ಕೇಳುವ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ 2ನೇ ಹಂತದ ಎಣಿಕೆ ನಡೆಯಲಿದೆ. ಆಗ ಜನಸಂಖ್ಯೆ ಎಣಿಕೆ ಮಾಡಲಾಗುತ್ತದೆ. ಪ್ರತಿಯೊಂದು ಮನೆಯ ಪ್ರತಿ ವ್ಯಕ್ತಿಯ ಜಾತಿ, ಸಾಮಾಜಿಕ-ಆರ್ಥಿಕ, ಸಾಮಾಜಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

ಗಣತಿಗೆ ಅವೈಜ್ಞಾನಿಕವಾಗಿ ಸ್ಥಳ ನಿಗದಿಗೆ ವಿರೋಧ

ಗಣತಿದಾರರಿಗೆ ತರಬೇತಿ ನೀಡುವಲ್ಲಿ ಗೊಂದಲ ಹಾಗೂ ಜನಗಣತಿ ಕಾರ್ಯಕ್ಕೆ ಅವೈಜ್ಞಾನಿಕವಾಗಿ ಸ್ಥಳ ನಿಗದಿ ಮಾಡಿರುವುದು ಹಾಗೂ 58 ವರ್ಷ ಮೀರಿದವರನ್ನು ಗಣತಿ ಕಾರ್ಯಕ್ಕೆ ನೇಮಕ ಮಾಡಿರುವುದಕ್ಕೆ ಶಿಕ್ಷಕರು ಹಾಗೂ ಇಲಾಖಾ ಸಿಬ್ಬಂದಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಏ.16ರಿಂದ ಒಂದು ತಿಂಗಳ ಕಾಲ ನಡೆಯುವ ಮನೆಗಣತಿ ಹಾಗೂ ಮನೆಗಳ ಪಟ್ಟಿ ಕಾರ್ಯಕ್ಕೆ ಶಿಕ್ಷಕರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡುವ ಪ್ರಕ್ರಿಯೆ ಸಹ ಈಗಾಗಲೇ ಆರಂಭವಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ಬಹಳಷ್ಟು ಶಿಕ್ಷಕರು ತರಬೇತಿ ಸಭೆಗಳಿಗೆ ಹಾಜರಾಗಿದ್ದರೂ ಜಿಬಿಎ ಅಧಿಕಾರಿಗಳೂ ಗಣತಿ ತರಬೇತಿಗೆ ಹಾಜರಾಗುವಂತೆ ಸೂಚನಾ ಪತ್ರ ಕಳಿಸಿದ್ದಾರೆ. ತರಬೇತಿಗೆ ಹಾಜರಾಗಿರುವ ಶಿಕ್ಷಕರು, ಸಿಬ್ಬಂದಿಗೂ ಗೈರು ಹಾಜರಿ ಎಂದು ದಾಖಲಿಸಿ ಅಮಾನತು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿ ನೋಟಿಸ್ ಕಳಿಸಿದ್ದಾರೆ. ವಿಪರ್ಯಾಸವೆಂದರೆ ತರಬೇತಿಗೆ ಹಾಜರಾಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದರೂ ಅದನ್ನು ಸ್ವೀಕರಿಸಲು ಜಿಬಿಎ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಿಗದ ವೇತನ:

ಈ ಸಮಸ್ಯೆ ಜೊತೆಗೆ ಗಣತಿ ತರಬೇತಿ ಕಾರ್ಯಕ್ಕೆ ಟ್ರಜರಿ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜಿಸಿದೆ. ಇದರಿಂದ ಸಂಬಳದ ಬಿಲ್‌ಗಳು ಖಜಾನೆಗಳಲ್ಲಿ ವಿಲೇವಾರಿಯಾಗದ ಕಾರಣ ಈವರೆಗೂ ವೇತನ ಬಿಡುಗಡೆ ಆಗಿಲ್ಲ ಎಂದು ಅನೇಕ ಶಿಕ್ಷಕರು ದೂರಿದ್ದಾರೆ.

ಇದರ ಎಸ್ಸೆಸ್ಸೆಲ್ಸಿ, ಪಿಯುಸಿ ಮೌಲ್ಯಮಾಪನ, ಮರು ಮೌಲ್ಯಮಾಪನ. ಪರೀಕ್ಷೆ 2ರ ಸಿದ್ಧತೆ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಶಿಕ್ಷಕರು, ಉಪನ್ಯಾಸಕರನ್ನು ಜಿಬಿಎ ವ್ಯಾಪ್ತಿಯಲ್ಲಿ ಜನಗಣತಿಯಿಂದ ವಿನಾಯ್ತಿ ನೀಡಿದ್ದರು ಮತ್ತೊಂದೆಡೆ ಗೈರುಹಾಜರಿ ನೆಪದಲ್ಲಿ ನೋಟಿಸ್‌ ನೀಡಲಾಗುತ್ತಿದೆ ಎಂದು ಶಿಕ್ಷಕರು, ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯ, 58 ವರ್ಷ ಮೀರಿದವರನ್ನು ಗಣತಿಕಾರ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ, ಅಂಥವರನ್ನು ಕೈಬಿಡಬೇಕೆಂದು ಆಗ್ರಹಿಸಲಾಗಿದೆ.

ಮತ್ತೊಂದಡೆ ಜನಗಣತಿದಾರರಿಗೆ ತೊಂದರೆಯಾಗದ ರೀತಿಯಲ್ಲಿ ಅವರು ವಾಸಿಸುವ ಅಥವಾ ಕರ್ತವ್ಯದ ಶಾಲಾ-ಕಾಲೇಜುಗಳ ಹತ್ತಿರದ ವಾರ್ಡ್‌ಗಳಲ್ಲಿ ಗಣತಿಗೆ ನಿಯೋಜಿಸುವ ಬದಲು 25ರಿಂದ 50 ಕಿ.ಮೀ. ದೂರದ ಸ್ಥಳಗಳ ವಾರ್ಡ್‌ಗಳಲ್ಲಿ ಗಣತಿ ಮಾಡುವಂತೆ ಸೂಚಿಸಲಾಗಿದೆ ಎಂದು ಶಿಕ್ಷಕರು ಅಲವತ್ತುಕೊಂಡಿದ್ದಾರೆ. ಜಿಬಿಎ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೂ, ಅಧಿಕಾರಿಗಳು ಎಚ್ಚೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತವಾಗುತ್ತಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ
ಅಪಘಾತದಲ್ಲಿ ಮೃತ ಕ್ಷೌರಿಕನ ಕುಟುಂಬಕ್ಕೆ 44 ಲಕ್ಷ ಪರಿಹಾರ