ಬೆಂಗಳೂರು : ನೀಟ್‌ ಪರೀಕ್ಷೆ ಹಗರಣದ ವಿರುದ್ಧ ದೇಶಾದ್ಯಂತ ಯುವಜನರು ಸಿಡಿದೆದ್ದು ಬೀದಿಗಿಳಿದಿದ್ದಾರೆ. ಆದರೆ ಒಬ್ಬ ಅಸಮರ್ಥ ಮತ್ತು ಭ್ರಷ್ಟ ಶಿಕ್ಷಣ ಮಂತ್ರಿ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗದ ಪ್ರಧಾನಿ ಮೋದಿ ಅವರು ತಾವೊಬ್ಬ ದುರ್ಬಲ ಮತ್ತು ದುಷ್ಟರಕ್ಷಕ ಪ್ರಧಾನಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ದೇಶಾದ್ಯಂತ ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಯುವಜನ ವಿರೋಧಿ ನೀತಿ ವಿರುದ್ಧ ಯುವಜನ ಸಿಡಿದೆದ್ದು ಬೀದಿಗಳಿದಿದ್ದಾರೆ. ಅಸಮರ್ಥ ಮತ್ತು ಭ್ರಷ್ಟ ಶಿಕ್ಷಣ ಮಂತ್ರಿ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗದ ಮೋದಿ ಅವರು ತಾವೊಬ್ಬ ದುರ್ಬಲ, ದುಷ್ಟರಕ್ಷಕ ಪ್ರಧಾನಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನೊಂದ ಅಮಾಯಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಕಣ್ಣೀರಿನ ಶಾಪದಿಂದಲೇ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಟೀಕಿಸಿದ್ದಾರೆ.

ಲಾಠಿ ಮೂಲಕ ಪ್ರತಿಭಟನೆ ದಮನಕ್ಕೆ ಯತ್ನ:

ದಿಲ್ಲಿಯಲ್ಲಿ ವಿದ್ಯಾರ್ಥಿಗಳ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಈ ಪ್ರತಿರೋಧದಿಂದ ನಡುಗಿಹೋಗಿರುವ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಹತಾಶೆಯಿಂದ ಲಾಠಿ-ದೊಣ್ಣೆಗಳ ಮೂಲಕ ಪ್ರತಿಭಟನೆ ದಮನಿಸಲು ಹೊರಟಿದೆ. ಇದನ್ನು ನೋಡಿದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಣೆಯಾದಂತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಹೆಚ್ಚು ಅನ್ಯಾಯಕ್ಕೊಳಗಾದವರು ಈ ದೇಶದ ವಿದ್ಯಾರ್ಥಿಗಳು

ಹನ್ನೆರಡು ವರ್ಷಗಳ ಮೋದಿ ಅವರ ಸರ್ಕಾರದಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾದವರು ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಅವರ ಸರ್ಕಾರದ ಆಡಳಿತದ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಸಾಮಾನ್ಯ ಪರೀಕ್ಷೆಗಳನ್ನೂ ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಷ್ಟು ಆಡಳಿತ ಕುಲಗೆಟ್ಟು ಹೋಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.