ಕನ್ನಡಪ್ರಭ ವಾರ್ತೆ ಬೆಂಗಳೂರು ಏನೂ ಇಲ್ಲದ ಅಂದಿನ ಭಾರತವನ್ನು ಕಟ್ಟಿದ ನೆಹರು ಎಲ್ಲಿ? ಎಲ್ಲವೂ ಇರುವ ಈಗಿನ ಭಾರತದ ಅಧಿಕಾರ ನಡೆಸುವ ಮೋದಿ ಎಲ್ಲಿ? ಆದರೂ ಅವರಿಬ್ಬರ ಆಡಳಿತವನ್ನು ಹೋಲಿಕೆ ಮಾಡುವ ಕೆಲಸ ನಡೆಯುತ್ತಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಅವರು ಬರೆದಿರುವ ‘ಮೆಮೋರೆಬಲ್ ಟ್ರಯಲ್ಸ್ - ಅವಿಸ್ಮರಣೀಯ ಪ್ರಕರಣಗಳು’ ಕೃತಿಯ ಕನ್ನಡ ಹಾಗೂ ಇಂಗ್ಲಿಷ್ ಆವೃತ್ತಿಯನ್ನು ನಗರದಲ್ಲಿ ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಆಡಳಿತಕ್ಕೂ ಈಗಿನ ಪ್ರಧಾನಿ ಮೋದಿ ಅವರ ಆಡಳಿತಕ್ಕೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ನೆಹರು ಪ್ರಧಾನಿ ಆಗಿದ್ದಾಗ ಇದ್ದ ಭಾರತದ ಪರಿಸ್ಥಿತಿ ಏನು? ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಕಡುಬಡತನ, ಉದ್ಯೋಗ ಇಲ್ಲ, ಕೈಗಾರಿಕೆಗಳಿಲ್ಲ, ನೀರಾವರಿ ಇಲ್ಲ, ಯಾವುದೂ ಇಲ್ಲದೆ ಭಾರತದ ಸಂಪತ್ತನ್ನೆಲ್ಲಾ ಬ್ರಿಟಿಷರು ದೋಚಿಹೋಗಿದ್ದರು. ಅಂತಹ ಭಾರತವನ್ನು ಕಟ್ಟಿ ಬೆಳೆಸಲು ನೆಹರು ಅವರು 17 ವರ್ಷ ಪ್ರಧಾನಿಯಾಗಿ ದೇಶದ ಅಭಿವೃದ್ದಿಗೆ ನೀಡಿದ ಜನಪರ ಆಡಳಿತವನ್ನು ಈಗ ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿ ಒಂದಾಗಿರುವ ಭಾರತದ ಪ್ರಧಾನಿ ಆಗಿರುವ ಮೋದಿ ಅವರ 12 ವರ್ಷಗಳ ಆಡಳಿತದೊಂದಿಗೆ ಹೋಲಿಕೆ ಮಾಡಲಾದರೂ ಹೇಗೆ ಸಾಧ್ಯ? ಆದರೂ, ಅಂತಹ ಹೋಲಿಕೆಯ ಪ್ರಯತ್ನಗಳು ನಡೆಯುತ್ತಿವೆ. ಜನರಿಗೆ ಸುಳ್ಳುಗಳ ಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು. ಜನರಿಗೆ ಸತ್ಯ ತಿಳಿಸಬೇಕು ಎಂದರು.

ಈ ವೇಳೆ ಬಹುಭಾಷಾ ನಟ ಪ್ರಕಾಶ್ ರಾಜ್, ಲೇಖಕಿ ತಸ್ರಿಮ್ ಮುಲ್ಲಾ, ಲೇಖಕ ನ್ಯಾ.ಎಚ್.ಎನ್. ನಾಗಮೋಹನ್ ದಾಸ್, ಇಂಗ್ಲಿಷ್ ಆವೃತ್ತಿಯ ಅನುವಾದಕರಾದ ಬಿ.ಎಸ್.ಲೋಕೇಶ್‌ಚಂದ್ರ, ಜನ ಸಂಸ್ಕೃತಿ ಅಧ್ಯಯನ ಮತ್ತು ಪ್ರಕಾಶನದ ಬಿ.ರಾಜಶೇಖರಮೂರ್ತಿ ಹಾಜರಿದ್ದರು.